ವಾಣಿಜ್ಯ ರಾಜಧಾನಿ ವ್ಯವಹಾರ ನಿಲ್ಲಿಸಿದ ಮಳೆರಾಯ
ಮುಂಬೈ, ಜು. 21: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ನಿರಂತರ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ರೈಲು ಮತ್ತು ಕೆಲ ವಿಮಾನ ಸಂಚಾರಗಳನ್ನು ಬಂದ್ ಮಾಡಲಾಗಿದೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಸಮುದ್ರ ತೀರದಲ್ಲಿ ವಾಸ ಮಾಡುವವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿರುವುದು ಮಳೆ ಮತ್ತು ಗಾಳಿಯ ರುದ್ರ ನರ್ತನಕ್ಕೆ ಸಾಕ್ಷಿಯಾಗಿದೆ.[ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ]

ಥಾಣೆ ಪ್ರದೇಶ ಸಂಪೂರ್ಣ ನೀರಿನಿಂದ ಆವೃತವಾಗಿದ್ದು 24 ಗಂಟೆಗಳಲ್ಲಿ 15.8 ಮಿ.ಮೀ. ಮಳೆಯಾಗಿದೆ. ಸಾಂತಾಕ್ರೂಜ್ ನಲ್ಲಿ ದಾಖಲೆಯ 61ಮಿ.ಮೀ. ಮಳೆಯಾಗಿದೆ ಎಂದು ವರದಿ ಹವಾಮಾನ ಇಲಾಖೆ ತಿಳಿಸಿದೆ.
ಅಹಮದಾಬಾದ್ ಎಕ್ಸ್ ಪ್ರೆಸ್, ಬಾಂದ್ರಾ ಸೂರತ್ ಇಂಟರ್ ಸಿಟಿ ಎಕ್ಸ್ ಪ್ರೆಸ್, ಮುಂಬೈ ಸೆಂಟ್ರಲ್ - ಅಹಮದಾಬಾದ್ ಶತಾಬ್ದಿ ಎಕ್ಸ್ ಪ್ರೆಸ್, ಮುಂಬೈ ಸೆಂಟ್ರಲ್ -ಪೋರಬಂದರ್ ಎಕ್ಸ್ ಪ್ರೆಸ್ ಹಾಗೂ ಬಾಂದ್ರಾ ತಿರುನಲ್ವೇಲಿ ವಾಪಿ ಪ್ಯಾಸೆಂಜರ್ ಮುಂತಾದ ರೈಲುಗಳನ್ನು ಬಂದ್ ಮಾಡಲಾಗಿದೆ. ಪಲ್ಗಾಹಾರ್ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.[ಜೋಗ ಮೈದುಂಬಿದೆ, ಹೋಗೋಣ ಬರ್ತೀರಾ ಆಕಡೆಗೆ]
ಮುಂದಿನ 48 ಗಂಟೆಗಳಲ್ಲಿ ಇನ್ನೂ ಹೆಚ್ಚಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಗಾರು ಮಾರುತಗಳು ಉತ್ತರ ಭಾರತದ ವಿವಿಧೆಡೆ ತಮ್ಮ ಆರ್ಭಟವನ್ನು ಮುಂದುವರಿಸಿವೆ. ಕಳೆದ ವಾರ ದೆಹಲಿಯನ್ನು ಕಾಡಿದ್ದ ವರುಣ ಜಮ್ಮು ಮತ್ತು ಕಾಶ್ಮೀರದಲ್ಲೂ ಪ್ರತಾಪ ತೋರಿದ್ದ. ಮಳೆ ಪರಿಣಾಮ ಅಮರನಾಥ ಯಾತ್ರೆಯನ್ನು ಸ್ಥಗಿತಮಾಡಲಾಗಿತ್ತು.












Click it and Unblock the Notifications