ರಾಜ್ಯದ ಅಲ್ಲಲ್ಲಿ ಚದುರಿದ ಮಳೆ, ಇನ್ನೆರಡು ದಿನಗಳ ನಂತರ ತಾಪಮಾನ ಏರಿಕೆ
ಬೆಂಗಳೂರು, ಮಾರ್ಚ್ 15: ಕರ್ನಾಟಕದ ಕೆಲವು ಭಾಗಗಳಲ್ಲಿ ಇನ್ನೂ ಎರಡು ದಿನಗಳ ಕಾಲ ತುಂತುರು ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ.
ಇನ್ನುಳಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರೆಯುವುದಾಗಿ ತಿಳಿಸಿದೆ. ಮಾರ್ಚ್ 14ರ ನಂತರ ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಾಗುವ ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಬಿಸಿಲಿನ ಝಳ ಹೆಚ್ಚುವುದಾಗಿ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ತೀವ್ರತೆ ಹೆಚ್ಚಿರುವುದರಿಂದ ದೇಶದ ಉತ್ತರ ರಾಜ್ಯಗಳಲ್ಲಿ ಮಾರ್ಚ್ 18ರವರೆಗೂ ಚದುರಿದ ಮಳೆಯಾಗುತ್ತದೆ ಎಂದು ತಿಳಿಸಿದೆ. ಮುಂದೆ ಓದಿ...

ಕರ್ನಾಟಕದಲ್ಲಿ ಬಿಸಿಲಿನ ಬೇಗೆ ಹೆಚ್ಚಳ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾರ್ಚ್ 14ರ ನಂತರ ತಾಪಮಾನದಲ್ಲಿ ಏರಿಕೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಇನ್ನು ಎರಡು ದಿನಗಳ ನಂತರ ತಾಪಮಾನ ಏರಿಕೆಯಾಗಲಿದೆ. ಮೇ ಅಂತ್ಯದವರೆಗೂ ಒಣ ಹವೆ, ಬಿಸಿಲಿನ ಝಳ ಮುಂದುವರೆಯುತ್ತದೆ ಎಂದು ಮಾಹಿತಿ ನೀಡಿದೆ.

ಮಾರ್ಚ್ 18ರವರೆಗೂ ಉತ್ತರ ಭಾಗದಲ್ಲಿ ಮಳೆ
ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ತೀವ್ರತೆ ಹೆಚ್ಚಿರುವುದರಿಂದ ಅರುಣಾಚಲ ಪ್ರದೇಶದಲ್ಲಿ ಮಾರ್ಚ್ 18ರವರೆಗೂ ಹೆಚ್ಚು ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗಾಳಿಯ ಒತ್ತಡದಿಂದಾಗಿ ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಲ್ತಿಸ್ತಾನ, ಮುಜಾಫರ್ ಬಾದ್ ನಲ್ಲಿ ಮಾರ್ಚ್ 15 ಹಾಗೂ 16ರಂದು ಮಳೆಯಾಗುವುದಾಗಿ ತಿಳಿಸಿದೆ. ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ಈ ವಾರಾಂತ್ಯ ಮಳೆಯಾಗಲಿದ್ದು, ಗಾಳಿಯೂ ಹೆಚ್ಚಾಗಿರಲಿದೆ ಎಂದು ತಿಳಿದುಬಂದಿದೆ.

ಐದು ದಿನಗಳ ನಂತರ ಬಿಸಿಲಿನ ಝಳ
ಪಶ್ಚಿಮ ಹಿಮಾಲಯದಲ್ಲಿ ಮಳೆಯಾಗುವುದರ ಪರಿಣಾಮ ವಾಯವ್ಯ ಭಾರತದ ಹಲವು ರಾಜ್ಯಗಳಲ್ಲಿ ಮಾರ್ಚ್ 18ರಂದು ಮಳೆಯಾಗಲಿದೆ. ಅರುಣಾಚಲ ಪ್ರದೇಶದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದ್ದು, ಆನಂತರ ಮಳೆ ಕಡಿಮೆಯಾಗಿ ಬಿಸಿಲಿನ ಝಳ ಆರಂಭವಾಗಲಿದೆ. ಇನ್ನು ಐದು ದಿನಗಳ ಕಾಲ ಮಳೆ ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.

ದೇಶದ ಎಲ್ಲೆಲ್ಲಿ ಬಿಸಿಲು ಹೆಚ್ಚಿರುತ್ತದೆ?
ಪಂಜಾಬ್, ರಾಜಸ್ತಾನ, ಗುಜರಾತ್, ಹರಿಯಾಣ, ಚಂಡೀಗಢ, ದೆಹಲಿ, ಗೋವಾ, ಪಶ್ಚಿಮ ಬಂಗಾಳ, ತಮಿಳುನಾಡು, ಕರಾವಳಿ ಕರ್ನಾಟಕ, ಪುದುಚೆರಿ, ಅಸ್ಸಾಂ, ಮೇಘಾಲಯದಲ್ಲಿ ತಾಪಮಾನ ಹೆಚ್ಚಾಗುವುದಾಗಿ ತಿಳಿಸಿದೆ.












Click it and Unblock the Notifications