ದೇಶದೆಲ್ಲೆಡೆ ಮಳೆ ಅರ್ಭಟ: ಒಡಿಶಾದಲ್ಲಿ 9 ಲಕ್ಷಕ್ಕೂ ಸಂತ್ರಸ್ತರು- ಗುಡ್ಡಗಾಡು ರಾಜ್ಯಗಳಲ್ಲಿ 38 ಸಾವು
ದೇಶದೆಲ್ಲೆಡೆ ಮುಂಗಾರು ಮಳೆ ಚುರುಕುಗೊಂಡಿದೆ. ಮುಂಗಾರು ಮಳೆಯ ಪ್ರಭಾವದಿಂದ ದೇಶಾದ್ಯಂತ ಹಲವಾರು ರಾಜ್ಯಗಳು ತತ್ತರಿಸಿ ಹೋಗಿವೆ. ಒಡಿಶಾದಲ್ಲಿ 9 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಮುಂಗಾರು ಪ್ರವಾಹ ಪರಿಣಾಮ ಬೀರಿದೆ. ಮಧ್ಯಪ್ರದೇಶದಲ್ಲಿ ಜನರ ಸ್ಥಿತಿ ಹೇಳ ತೀರದ್ದಾಗಿದೆ. ಸತತ ಮೂರನೇ ದಿನವೂ ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ.
ಹೀಗಾಗಿ ಭಾರತೀಯ ಹವಾಮಾನ ಇಲಾಖೆಯು ಉಜ್ಜಯಿನಿ ಮತ್ತು ರಾಜ್ಗಢದಲ್ಲಿ ಮಂಗಳವಾರ ರೆಡ್ ಅಲರ್ಟ್ ನೀಡಿದ್ದು, ಭೋಪಾಲ್, ಇಂದೋರ್, ಉಜ್ಜಯಿನಿ, ದಾಮೋಹ್ ಮತ್ತು ಅಗರ್ ಮಾಲ್ವಾ ಸೇರಿದಂತೆ ಹಲವು ಸ್ಥಳಗಳಲ್ಲಿ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಜೊತೆಗೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಬೆಟ್ಟದ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಅಲ್ಲಿ ಮೇಘಸ್ಫೋಟದ ಘಟನೆಗಳಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತಗಳು ವಾರಾಂತ್ಯದಲ್ಲಿ 38 ಜನರನ್ನು ಬಲಿ ತೆಗೆದುಕೊಂಡಿದೆ. ದೇಶದಾದ್ಯಂತದ ಪ್ರವಾಹಗಳು, ಭೂಕುಸಿತಗಳು ಮತ್ತು ಇತರ ಹವಾಮಾನ ಸಂಬಂಧಿತ ಘಟನೆಗಳ ತ್ವರಿತ ಮಾಹಿತಿ ಇಲ್ಲಿದೆ.
ಒಡಿಶಾದಲ್ಲಿ 9 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ
ಪ್ರವಾಹ ಒಡಿಶಾದಲ್ಲಿ 9.6 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ಸಾವಿರಾರು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಮಳೆಯಿಂದಾಗಿ ವಿದ್ಯುತ್ ಮತ್ತು ನೀರು ಪೂರೈಕೆ ಕಡಿತಗೊಳಿಸಲಾಗಿದೆ. ರಸ್ತೆ ಮೂಲಸೌಕರ್ಯಕ್ಕೂ ಮಳೆ ಅಡ್ಡಿಯನ್ನುಂಟು ಮಾಡಿದೆ. ರಾಜ್ಯದಲ್ಲಿ ಪೀಡಿತ ಪ್ರದೇಶಗಳಿಂದ ಇದುವರೆಗೆ 120,000 ಜನರನ್ನು ಸ್ಥಳಾಂತರಿಸಲಾಗಿದೆ.
ಉತ್ತರದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯು ಅತ್ಯಂತ ಕೆಟ್ಟದಾಗಿದೆ. ಏಕೆಂದರೆ ಉಕ್ಕಿ ಹರಿಯುತ್ತಿರುವ ನದಿಗಳು ತಗ್ಗು ಪ್ರದೇಶಗಳನ್ನು ಮುಳುಗಿಸಿವೆ. 134 ಕ್ಕೂ ಹೆಚ್ಚು ಹಳ್ಳಿಗಳ ಜನರ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ.
ಈ ಪ್ರದೇಶದಲ್ಲಿ ಹರಿಯುವ ಎರಡು ಪ್ರಮುಖ ನದಿಗಳಾದ ಸುವರ್ಣರೇಖಾ ಮತ್ತು ಬೈತರಾಣಿಯಲ್ಲಿನ ನೀರಿನ ಮಟ್ಟ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಇದರಿಂದಾಗಿ ಬಾಲಸೋರ್ ಮತ್ತು ಮಯೂರ್ಭಂಜ್ ಜಿಲ್ಲೆಗಳಲ್ಲಿ ಅಧಿಕಾರಿಗಳು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಸುವರ್ಣರೇಖಾ ನದಿಯ ಹೊರತಾಗಿ, ಬಾಲಸೋರ್ ಜಿಲ್ಲೆಯ ಬುಧಬಲಾಂಗ್ ಮತ್ತು ಜಲಕಾ ನದಿಗಳೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಜೊತೆಗೆ ಮಂಗಳವಾರ ಮತ್ತು ಬುಧವಾರದಂದು ಬಾಲಸೋರ್ನಲ್ಲಿ ಹೆಚ್ಚಿನ ಮಳೆಯಾಗುವ ಬಗ್ಗೆ IMD ಮುನ್ಸೂಚನೆ ನೀಡಿದೆ.
ಉತ್ತರಾಖಂಡದಲ್ಲಿ ಮೇಘಸ್ಫೋಟ
ತೆಹ್ರಿ ಜಿಲ್ಲೆಯ ಸಿಲ್ಲಾ ಗ್ರಾಮದಲ್ಲಿ ಸೋಮವಾರ ಮತ್ತೊಬ್ಬ ಮೃತದೇಹ ಪತ್ತೆಯಾಗಿದ್ದು, ಉತ್ತರಾಖಂಡದಲ್ಲಿ ಶನಿವಾರ ಸಂಭವಿಸಿದ ಮೇಘಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಭಾನುವಾರ ಡೆಹ್ರಾಡೂನ್ನ ಸೌರಾ ಸರೋಲಿಯಿಂದ ಒಂದು ದೇಹವನ್ನು ವಶಪಡಿಸಿಕೊಳ್ಳಲಾಗಿದ್ದು, ದುರಂತ ಸಂಭವಿಸಿದ ದಿನವೇ ನಾಲ್ಕು ಸಾವುಗಳು ದೃಢಪಟ್ಟಿವೆ. ತೆಹ್ರಿ ಮತ್ತು ಡೆಹ್ರಾಡೂನ್ ಜಿಲ್ಲೆಗಳಲ್ಲಿ ಇನ್ನೂ 13 ಜನರು ನಾಪತ್ತೆಯಾಗಿದ್ದಾರೆ.
ಒಂಬತ್ತು ರಾಜ್ಯ ಹೆದ್ದಾರಿಗಳು ಮತ್ತು ಏಳು ಜಿಲ್ಲಾ ರಸ್ತೆಗಳು ಸೇರಿದಂತೆ ರಾಜ್ಯದಲ್ಲಿ ಇನ್ನೂ ಕನಿಷ್ಠ 115 ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಪೊಲೀಸರು, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಸಿಬ್ಬಂದಿ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಹಿಮಾಚಲ ಪ್ರದೇಶ ಭೂಕುಸಿತದಲ್ಲಿ ಸಾವಿನ ಸಂಖ್ಯೆ 32 ಕ್ಕೆ ಏರಿಕೆ
ಶುಕ್ರವಾರ ರಾತ್ರಿಯಿಂದ ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ಸತ್ತವರ ಸಂಖ್ಯೆ 32 ಕ್ಕೆ ಏರಿದೆ. ಆರು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಆರು ಮಂದಿ ಇನ್ನೂ ಪತ್ತೆಯಾಗಿಲ್ಲ. ದುರಂತದಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಪ್ರವಾಹದಿಂದ ಮಂಡಿ ಜಿಲ್ಲೆ ಹೆಚ್ಚು ಹಾನಿಗೊಳಗಾಗಿದೆ, ನಂತರ ಕಂಗ್ರಾ ಮತ್ತು ಚಂಬಾ ಹಾನಿಗೊಳಗಾಗಿವೆ.
ಅತಿ ಹೆಚ್ಚು ಹಾನಿಗೊಳಗಾದ ಮಂಡಿ ಜಿಲ್ಲೆಗೆ ಸೋಮವಾರ ಭೇಟಿ ನೀಡಿದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಮಂಡಿಯಲ್ಲಿ ಹಠಾತ್ ಪ್ರವಾಹದಲ್ಲಿ ಹಲವಾರು ರಸ್ತೆಗಳು, ವಿದ್ಯುತ್ ಕಂಬಗಳು ಮತ್ತು ನೀರು ಸರಬರಾಜು ಪೈಪ್ಗಳು ಸಹ ಹಾನಿಗೊಳಗಾಗಿವೆ.
ಮಧ್ಯ ಪ್ರದೇಶ: ರೆಡ್ ಅಲರ್ಟ್ ಘೋಷಣೆ
ಧಾರಾಕಾರ ಮಳೆಯಿಂದಾಗಿ ಮಧ್ಯಪ್ರದೇಶದ ಹೆಚ್ಚಿನ ಭಾಗಗಳಲ್ಲಿ ನದಿಗಳು, ಚರಂಡಿಗಳು ಮತ್ತು ಇತರ ಜಲಮೂಲಗಳು ಉಕ್ಕಿ ಹರಿಯುತ್ತಿವೆ ಮತ್ತು ನೀರನ್ನು ಬಿಡುಗಡೆ ಮಾಡಲು ಅನೇಕ ಅಣೆಕಟ್ಟುಗಳ ಗೇಟ್ಗಳನ್ನು ತೆರೆಯಲಾಗಿದೆ. ಮಂಗಳವಾರ ಉಜ್ಜಯಿನಿ ಮತ್ತು ರಾಜ್ಗಢ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಐಎಂಡಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಗ್ವಾಲಿಯರ್, ನರ್ಮದಾಪುರಂ, ಇಂದೋರ್, ಭೋಪಾಲ್, ರೈಸನ್, ಸೆಹೋರ್ ಮತ್ತು ವಿದಿಶಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಚಂಬಲ್, ಜಬಲ್ಪುರ ಮತ್ತು ಸಾಗರದಲ್ಲಿ ಹಳದಿ ಅಲರ್ಟ್ ಘೋಷಿಸಿದೆ.
ನಿರಂತರ ಮಳೆಯಿಂದಾಗಿ ಭೋಪಾಲ್, ಇಂದೋರ್, ಅಗರ್ ಮಾಲ್ವಾ, ನರ್ಮದಾಪುರಂ, ರತ್ಲಂ, ಗುಣಾ, ದಿಂಡೋರಿ, ಹರ್ದಾ, ದೇವಾಸ್, ಉಜ್ಜಯಿನಿ, ಸೆಹೋರ್, ಅಶೋಕನಗರ, ದಾಮೋಹ್ ಮತ್ತು ಬರಾನ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇಂದಿನಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯ ಚಟುವಟಿಕೆ ನಿಧಾನಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಖ್ಯಮಂತ್ರಿ ಶಿವರಾಜ್ ಎಸ್ ಚೌಹಾಣ್ ಅವರು ರಾಜ್ಯದ ಮಳೆ ಪೀಡಿತ ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಅಗತ್ಯವಿದ್ದರೆ ವಿದಿಶಾ ಜಿಲ್ಲೆಗೆ ಹೆಲಿಕಾಪ್ಟರ್ಗಳನ್ನು ಕಳುಹಿಸುವ ಮೂಲಕ ನೆರವು ನೀಡಲಾಗುವುದು ಎಂದು ಹೇಳಿದರು. ಅಜ್ನಾರ್ ನದಿಯ ಹೆಚ್ಚಿದ ನೀರಿನ ಮಟ್ಟಗಳ ಬಗ್ಗೆ ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆಗಳ ಬಗ್ಗೆ ರಾಜ್ಗಢ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಸಿಎಂಒ ತಿಳಿಸಿದ್ದಾರೆ.
|
ರಾಜಸ್ಥಾನ: ತಗ್ಗು ಪ್ರದೇಶಗಳು ಜಲಾವೃತ
ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜಸ್ಥಾನದ ಕೋಟಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಕೋಟಾದಲ್ಲಿ ಬ್ಯಾರೇಜ್ನಿಂದ ನೀರು ಬಿಟ್ಟಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬ್ಯಾರೇಜ್ನಿಂದ ಇದುವರೆಗೆ ಸುಮಾರು 2.76 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ.
IMD ಪ್ರಕಾರ, ಕೋಟಾ ಮತ್ತು ಝಲಾವರ್ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಕೋಟಾ ಮತ್ತು ಝಲಾವರ್ ಹೊರತುಪಡಿಸಿ, ಬುಂಡಿ, ಬರಾನ್, ಚಿತ್ತೋರ್ಗಢ, ಸವಾಯಿಮಾಧೋಪುರ್, ದೌಸಾ ಮತ್ತು ಕರೌಲಿಯಲ್ಲಿನ ಹಲವು ಪ್ರದೇಶಗಳು ಸಹ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯನ್ನು ದಾಖಲಿಸಿವೆ.
ಜಾರ್ಖಂಡ್: ನದಿ ನೀರಿನ ಮಟ್ಟ ಏರಿಕೆ
ಸೆರೈಕೆಲಾ-ಖಾರ್ಸ್ವಾನ್ ಮತ್ತು ಪೂರ್ವ ಮತ್ತು ಪಶ್ಚಿಮ ಸಿಂಗ್ಭೂಮ್ ಜಿಲ್ಲೆಗಳನ್ನು ಒಳಗೊಂಡಿರುವ ಜಾರ್ಖಂಡ್ನ ಕೊಲ್ಹಾನ್ ವಿಭಾಗದಲ್ಲಿ, ಪ್ರವಾಹದಂತಹ ಪರಿಸ್ಥಿತಿಯಿಂದ ಪೀಡಿತರಾದ 2,500 ಕ್ಕೂ ಹೆಚ್ಚು ಜನರನ್ನು ಶನಿವಾರದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಖಾರ್ಖೈ ಮತ್ತು ಸ್ವರ್ಣರೇಖಾ ನದಿಗಳ ನೀರಿನ ಮಟ್ಟ ಏರಿಕೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಶಾಸ್ತ್ರಿನಗರ ಮತ್ತು ಗ್ರೀನ್ಪಾರ್ಕ್ ಸೇರಿದಂತೆ ಪ್ರವಾಹದಿಂದ ಹಾನಿಗೊಳಗಾದ ಕೆಲವು ಪ್ರದೇಶಗಳ ನಿವಾಸಿಗಳನ್ನು ಅವರ ನಿವಾಸಗಳಿಂದ ಸ್ಥಳಾಂತರಿಸಲಾಗಿದೆ.
Recommended Video