ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ
ನವದೆಹಲಿ, ಮೇ 04 : ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಕ್ಕೆ ಕಳಿಸಲು ಭಾರತೀಯ ರೈಲ್ವೆ ಶ್ರಮಿಕ್ ವಿಶೇಷ ರೈಲನ್ನು ಓಡಿಸುತ್ತಿದೆ. ಆದರೆ, ರೈಲಿನ ದರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಕಾರ್ಮಿಕರನ್ನು ತವರು ರಾಜ್ಯಕ್ಕೆ ಕಳಿಸಲು ರಾಜ್ಯಗಳು ರೈಲಿಗಾಗಿ ಬೇಡಿಕೆ ಸಲ್ಲಿಸಿದರೆ ವಿಶೇಷ ರೈಲನ್ನು ನೀಡಲಾಗುತ್ತಿದೆ. ಆದರೆ, ಇದು ಉಚಿತವಾದ ಸೇವೆಯಲ್ಲ ಇದಕ್ಕೆ ರಾಜ್ಯ ಸರ್ಕಾರ ಹಣವನ್ನು ಪಾವತಿ ಮಾಡಬೇಕು.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇದೇ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಮತ್ತು ಭಾರತೀಯ ರೈಲ್ವೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವಲಸೆ ಕಾರ್ಮಿಕರ ಹಣವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ ಎಂದು ಸೋಮವಾರ ಹೇಳಿದರು.
ಭಾರತೀಯ ರೈಲ್ವೆ ದರದ ಕುರಿತು ಮಾಹಿತಿ ನೀಡಿದೆ. ಶ್ರಮಿಕ್ ವಿಶೇಷ ರೈಲುಗಳ ಸಂಚಾರಕ್ಕೆ ನಾವು ನಿಗದಿತ ದರವನ್ನು ವಸೂಲಿ ಮಾಡುತ್ತಿದ್ದೇವೆ. ಒಂದು ರೈಲು ಸಂಚಾರಕ್ಕೆ ತಗಲುವ ವೆಚ್ಚದ ಶೇ 15ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನೀಡಬೇಕು ಎಂದು ರೈಲ್ವೆ ಹೇಳಿದೆ.

ರೈಲ್ವೆ ಟಿಕೆಟ್ ಮಾರಾಟವಿಲ್ಲ
ಶ್ರಮಿಕ್ ವಿಶೇಷ ರೈಲುಗಳ ಸಂಚಾರಕ್ಕೆ ಯಾವುದೇ ಟಿಕೆಟ್ ಅನ್ನು ರೈಲ್ವೆ ಇಲಾಖೆ ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ರಾಜ್ಯ ಸರ್ಕಾರಗಳು ನೀಡುವ ಪಟ್ಟಿಯ ಅನ್ವಯ ಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ರೈಲ್ವೆ ಹೇಳಿದೆ.

ಊಟ, ಕುಡಿಯುವ ನೀರು
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಲಾಗುತ್ತದೆ. ಆದ್ದರಿಂದ, ಕೆಲವು ಬೋಗಿಗಳನ್ನು ಖಾಲಿಯಾಗಿ ಇಡಲಾಗಿದೆ. ರೈಲುಗಳು ನಿಗದಿತ ನಿಲ್ದಾಣ ತಲುಪಿದ ಬಳಿಕ ಖಾಲಿಯಾಗಿ ವಾಪಸ್ ಬರಲಿವೆ. ಲಾಕ್ ಡೌನ್ ಪರಿಣಾಮ ಯಾರೂ ಸಹ ಇದರಲ್ಲಿ ವಾಪಸ್ ಬರುತ್ತಿಲ್ಲ. ಅಲ್ಲದೇ ಕಾರ್ಮಿಕರಿಗೆ ಉಚಿತ ಊಟ ಮತ್ತು ನೀರಿನ ವ್ಯವಸ್ಥೆಯನ್ನು ರೈಲ್ವೆ ಮಾಡಿದೆ.

ಸಂಕಷ್ಟದ ಸಮಯದಲ್ಲಿ ಸಂಚಾರ
ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಒಟ್ಟು 34 ರೈಲುಗಳು ದೇಶದ ವಿವಿಧ ಭಾಗಗಳಿಂದ ಸಂಚಾರ ನಡೆಸಿವೆ. ಸಾಮಾಜಿಕ ಬದ್ಧತೆಯೊಂದಿಗೆ ಭಾರತೀಯ ರೈಲ್ವೆ ಕೆಲಸ ಮಾಡುತ್ತಿದೆ. ಬಡವರಿಗೆ ಸಹಾಯಕವಾಗಲಿ ಎಂದು ರೈಲನ್ನು ಓಡಿಸಲಾಗುತ್ತಿದೆ.

ಪ್ರಯಾಣಿಕ ರೈಲುಗಳ ಸಂಚಾರವಿಲ್ಲ
ಲಾಕ್ ಡೌನ್ ಘೋಷಣೆಯಾದ ಬಳಿಕ ಭಾರತೀಯ ರೈಲ್ವೆ ಪ್ರಯಾಣಿಕ ರೈಲುಗಳ ಸಂಚಾರವನ್ನು ನಿಲ್ಲಿಸಿದೆ. ಮೇ 17ರ ತನಕ ಪ್ರಯಾಣಿಕ ರೈಲು ಸಂಚಾರ ಇರುವುದಿಲ್ಲ. ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲಿ ಎಂದು ವಿಶೇಷ ರೈಲನ್ನು ಓಡಿಸಲಾಗುತ್ತಿದೆ.












Click it and Unblock the Notifications