ಅವಿಶ್ವಾಸ ನಿರ್ಣಯ : ಮೊದಲು ರಾಹುಲ್ ಗಾಂಧಿ ಭಾಷಣ
ಬೆಂಗಳೂರು, ಜುಲೈ 19 : ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಶುಕ್ರವಾರ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಪರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲು ಕಲಾಪದಲ್ಲಿ ಭಾಷಣ ಮಾಡಲಿದ್ದಾರೆ.
ಅವಿಶ್ವಾಸ ನಿರ್ಣಯದ ಕುರಿತು ಶುಕ್ರವಾರ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಬೆಳಗ್ಗೆ 11ಗಂಟೆಗೆ ಕಲಾಪ ಆರಂಭವಾಗಲಿದ್ದು, ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟದ ಪಕ್ಷಗಳಿಗೆ ಸಮಯ ನಿಗದಿ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ನಿರ್ಣಯದ ಬಗ್ಗೆ ಮಾತನಾಡಲು 38 ನಿಮಿಷಗಳನ್ನು ನೀಡಲಾಗಿದೆ. ರಾಹುಲ್ ಗಾಂಧಿ ಅವರು ಪಕ್ಷದ ಪರವಾಗಿ ಮೊದಲು ಮಾತನಾಡಲಿದ್ದಾರೆ. ಬಳಿಕ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾಧಿತ್ಯ ಸಿಂಧ್ಯಾ ಕಲಾಪದಲ್ಲಿ ಮಾತನಾಡಲಿದ್ದಾರೆ.

ಹಿಂದೊಮ್ಮೆ ರಾಹುಲ್ ಗಾಂಧಿ ಅವರು 'ನನಗೆ ಲೋಕಸಭೆಯಲ್ಲಿ ಮಾತನಾಡಲು 15 ನಿಮಿಷ ಅವಕಾಶ ನೀಡಿ, ಭೂಕಂಪವಾಗುವಂತೆ ಮಾತನಾಡುತ್ತೇನೆ' ಎಂದು ಹೇಳಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಶುಕ್ರವಾರ ರಾಹುಲ್ ಗಾಂಧಿ ಮಾಡುವ ಭಾಷಣ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜು ಖರ್ಗೆ ಅವರು ಯಾವಾಗಲೂ ಮೊದಲು ಮಾತನಾಡುತ್ತಿದ್ದರು. ಆದರೆ, ಈ ಬಾರಿ ರಾಹುಲ್ ಗಾಂಧಿ ಭಾಷಣ ಆರಂಭಿಸಲಿದ್ದಾರೆ. ಎಷ್ಟು ಹೊತ್ತು ಅವರು ಮಾತನಾಡುತ್ತಾರೆ? ಎಂದು ಕಾದು ನೋಡಬೇಕಾಗಿದೆ.
ಅವಿಶ್ವಾಸ ನಿರ್ಣಯದ ಪರ ಮಾತನಾಡಲು ಬಿಜೆಪಿಗೆ 3 ಗಂಟೆ 33 ನಿಮಿಷದ ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮಾತನಾಡಲಿದ್ದಾರೆ. ಬಳಿಕ ವಿವಿಧ ಕೇಂದ್ರ ಸಚಿವರು ಮಾತನಾಡುತ್ತಾರೆ.
ವಿವಿಧ ಪಕ್ಷಗಳಿಗೆ ನೀಡಿರುವ ಸಮಯ
* ಬಿಜೆಪಿ - 3.30 ನಿಮಿಷ
* ಕಾಂಗ್ರೆಸ್ - 38
* ಎಐಎಡಿಎಂಕೆ - 29
* ಶಿವಸೇನೆ - 27
* ಟಿಡಿಪಿ - 15
* ಟಿಆರ್ಎಸ್ - 14 ನಿಮಿಷ











Click it and Unblock the Notifications