Rahul Gandhi: ಮೋದಿ ಉಪನಾಮ ಟೀಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದ ಸೂರತ್ ನ್ಯಾಯಾಲಯ
ಅಹಮದಾಬಾದ್, ಮಾರ್ಚ್. 23: ಮೋದಿ ಎಂಬ ಉಪನಾಮ (ಸರ್ನೇಮ್) ಕುರಿತು ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಗುಜರಾತ್ನ ಸೂರತ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ಪ್ರಕಟಿಸಿದೆ.
2019 ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಗುರುವಾರ ಗುಜರಾತ್ನ ಸೂರತ್ನ ನ್ಯಾಯಾಲಯವು ಪ್ರಧಾನಿ ನರೇಂದ್ರ ಮೋದಿಯವರ ಉಪನಾಮದ ಬಗ್ಗೆ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ತೀರ್ಪಿ ನೀಡುವ ವೇಳೆ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಅವರು "ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಹೇಗೆ ಇರುತ್ತದೆ ಎಂಬುದು ಆಶ್ಚರ್ಯ" ಎಂದು ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ಅವರು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.
ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಸಚಿವ ಪೂರ್ಣೇಶ್ ಮೋದಿ ಅವರು ಕೇಸ್ ಹಾಕಿದ್ದರು. ಫೆಬ್ರವರಿ 2023 ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು ರಾಹುಲ್ ಗಾಂಧಿಯವರ ವೈಯಕ್ತಿಕ ಹಾಜರಾತಿಗೆ ಒತ್ತಾಯಿಸಿ ದೂರುದಾರರ ಮನವಿಯನ್ನು ಸ್ವೀಕರಿಸಿತ್ತು. ಮಾರ್ಚ್ 2022 ರಲ್ಲಿ ವಿಚಾರಣೆಗೆ ವಿಧಿಸಿದ್ದ ಮಧ್ಯಂತರ ತಡೆಯನ್ನು ತೆರವು ಮಾಡಿತ್ತು. ನಂತರ ಪ್ರಕರಣದ ಅಂತಿಮ ವಾದಗಳು ಪುನರಾರಂಭಗೊಂಡಿದ್ದವು.
ಸಿಆರ್ಪಿಸಿಯ ಸೆಕ್ಷನ್ 202 ರ ಅಡಿಯಲ್ಲಿ ಕಾನೂನು ಕಾರ್ಯವಿಧಾನವನ್ನು ಅನುಸರಿಸದ ಕಾರಣ ಪ್ರಕ್ರಿಯೆಯು ಮೊದಲಿನಿಂದಲೂ ದೋಷಪೂರಿತವಾಗಿದೆ ಎಂದು ರಾಹುಲ್ ಗಾಂಧಿ ಪರ ವಕೀಲರು ಸಮರ್ಥಿಸಿಕೊಂಡರು. ರಾಹುಲ್ ಗಾಂಧಿಯವರ ಭಾಷಣಕ್ಕೆ ಪೂರ್ಣೇಶ್ ಮೋದಿ ಗುರಿಯಾಗದ ಕಾರಣ ನರೇಂದ್ರ ಮೋದಿ ಅವರೇ ಪ್ರಕರಣದಲ್ಲಿ ದೂರುದಾರರಾಗಬೇಕಿತ್ತು ಎಂದು ರಾಹುಲ್ ಗಾಂಧಿ ಪರ ವಕೀಲರು ವಾದಿಸಿದರು.

ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಸರಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡರ ಜೊತೆಗೆ ಶಿಕ್ಷೆಯನ್ನು ನೀಡಲಾಗಿದೆ. ಗುರುವಾರ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
ಬಳಿಕ ರಾಹುಲ್ ಗಾಂಧಿಗೆ 30 ದಿನಗಳ ಕಾಲ ಜಾಮೀನು ನೀಡಲಾಗಿದೆ. ಜೊತೆಗೆ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು. ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಚ್ಎಚ್ ವರ್ಮಾ ಅವರ ನ್ಯಾಯಾಲಯವು ಕಳೆದ ವಾರ ಎರಡೂ ಕಡೆಯ ಅಂತಿಮ ವಾದಗಳನ್ನು ಆಲಿಸಿತ್ತು, ಬಳಿಕ ನಾಲ್ಕು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆಯಲ್ಲಿ ಇಂದು ತನ್ನ ತೀರ್ಪು ಪ್ರಕಟಿಸಿದೆ.
ರಾಹುಲ್ ಗಾಂಧಿ ಗುರುವಾರ ಮುಂಜಾನೆ ಸೂರತ್ಗೆ ಆಗಮಿಸಿದರು, ಅವರನ್ನು ಕಾಂಗ್ರೆಸ್ನ ಗುಜರಾತ್ ಘಟಕದ ಹಿರಿಯ ನಾಯಕರು ಬರಮಾಡಿಕೊಂಡರು. ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ರಾಹುಲ್ ಗಾಂಧಿಗೆ ಬೆಂಬಲದ ನೀಡಲು ನಗರದ ವಿವಿಧ ಸ್ಥಳಗಳಲ್ಲಿ ಜಮಾಯಿಸಿದ್ದರು. 'ಶೇರ್-ಎ-ಹಿಂದುಸ್ತಾನ್' (ಭಾರತದ ಸಿಂಹ) ಎಂದು ಹೊಗಳುವ ಪೋಸ್ಟರ್ಗಳು ಮತ್ತು "ಕಾಂಗ್ರೆಸ್" ಎಂಬ ಘೋಷಣೆಯ ಫಲಕಗಳನ್ನು ಪ್ರದರ್ಶಿಸಿದರು. ಬಿಜೆಪಿಯ ಸರ್ವಾಧಿಕಾರದ ಮುಂದೆ ತಲೆಬಾಗುವುದಿಲ್ಲ" ಎಂದುಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.
2019 ರ ಲೋಕಸಭಾ ಚುನಾವಣೆಗೆ ಮುನ್ನ ಕೋಲಾರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ವಯನಾಡ್ನ ಲೋಕಸಭಾ ಸಂಸದ ರಾಹುಲ್ ಗಾಂಧಿ, ಪರಾರಿಯಾದ ಉದ್ಯಮಿಗಳಾದ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರನ್ನು ಟೀಕಿಸುವ ವೇಳೆ "ಎಲ್ಲಾ ಕಳ್ಳರು ಮೋದಿ ಉಪನಾಮವನ್ನು ಹೇಗೆ ಹೊಂದಿರುತ್ತಾರೆ?" ಎಂದು ಪ್ರಶ್ನಿಸಿದ್ದರು. ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಿದ್ದರು.












Click it and Unblock the Notifications