ಭಯವನ್ನೇ ದ್ವೇಷವನ್ನಾಗಿ ಪರಿವರ್ತಿಸಿದ್ದಾರೆ: ಆರ್ಎಸ್ಎಸ್, ಬಿಜೆಪಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ ರಾಹುಲ್
ನವದೆಹಲಿ, ಡಿಸೆಂಬರ್ 24: ಕೋವಿಡ್ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ರಾಹುಲ್ ಗಾಂಧಿ ವಾಗ್ವಾದಕ್ಕಿಳಿದಿರುವ ನಡುವೆಯೇ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಶನಿವಾರ ಬೆಳಗ್ಗೆ ದೆಹಲಿ ಪ್ರವೇಶಿಸಿದೆ. ಕೋವಿಡ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.
ಹರಿಯಾಣದ ಫರಿದಾಬಾದ್ನಿಂದ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲು ರಾಹುಲ್ ಗಾಂಧಿ ಕಾಂಗ್ರೆಸ್ನ ಮೆಗಾ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರು ನಗರದ ರಸ್ತೆಗಳಲ್ಲಿ ಸಾವಿರಾರು ಜನರ ಜೊತೆ ನಡೆಯುತ್ತಿರುವುದು ಕಂಡುಬಂದಿತು.
ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಸಹ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
1984ರ ಸಿಖ್ ವಿರೋಧಿ ಗಲಭೆಯಲ್ಲಿ ಆರೋಪಿಯಾಗಿರುವ ಪಕ್ಷದ ನಾಯಕ ಜಗದೀಶ್ ಟೈಟ್ಲರ್ ಶುಕ್ರವಾರ ತಾವು ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

'ರಾಹುಲ್ ಗಾಂಧಿಯವರ ಉದ್ದೇಶ ಹೆಚ್ಚು ಮಹತ್ವದ್ದಾಗಿದೆ. ಅದಕ್ಕಾಗಿಯೇ ನಾನು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ' ಎಂದು ಅವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
LIVE: #BharatJodoYatra | NHPC Metro Station to Lal Qila | Faridabad, Haryana to Delhi https://t.co/RMl3CIZKzC
— Bharat Jodo (@bharatjodo) December 24, 2022
ದೆಹಲಿ-ಹರಿಯಾಣ ಗಡಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ - ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

'ಅವರು(ಆರ್ಎಸ್ಎಸ್, ಬಿಜೆಪಿ) ದ್ವೇಷವನ್ನು ಹರಡುತ್ತಾರೆ. ನಾವು ಪ್ರೀತಿಯನ್ನು ಹಂಚುತ್ತೇವೆ. ಎಲ್ಲಾ ಭಾರತೀಯರನ್ನು ಅಪ್ಪಿಕೊಳ್ಳುತ್ತೇವೆ. ಈ ಭಾರತ್ ಜೋಡೋ ಯಾತ್ರೆಯಲ್ಲಿ ಹಿಂದೂಸ್ತಾನ್ ಮತ್ತು ಪ್ರೀತಿ ಇದೆ. ಇದು ಯಾವುದೇ ಜಾತಿ, ಧರ್ಮ, ಧರ್ಮ, ಶ್ರೀಮಂತ ಅಥವಾ ಬಡವರನ್ನು ನೋಡುವುದಿಲ್ಲ. ಎಲ್ಲರನ್ನೂ ಪರಸ್ಪರ ಅಪ್ಪಿಕೊಳ್ಳುತ್ತದೆ' ಎಂದು ಅವರು ತಿಳಿಸಿದ್ದಾರೆ.
'ಆರ್ಎಸ್ಎಸ್ ಹಾಗೂ ಬಿಜೆಪಿಯ ಎಲ್ಲಾ ನೀತಿಗಳು ಭಯವನ್ನು ಹರಡುವುದು. ಪ್ರತಿಯೊಬ್ಬರೂ ತಮ್ಮಲ್ಲಿ ಭಯವನ್ನು ಹೊಂದಿರಬೇಕೆಂದು ಅವರು ಬಯಸುತ್ತಾರೆ. ಅವರು ಭಯವನ್ನು ದ್ವೇಷವನ್ನಾಗಿ ಪರಿವರ್ತಿಸಿದ್ದಾರೆ. ಭಯ ಇಲ್ಲದಿದ್ದರೆ, ಅದು ಪರಿವರ್ತನೆಯಾಗುವುದಿಲ್ಲ. ಭಯಪಡಬೇಡಿ ಎಂದು ನಾವು ಹೇಳುತ್ತೇವೆ. ನಾವು ಪ್ರೀತಿಯನ್ನು ಹರಡುತ್ತೇವೆ. ನಾವು ಎಲ್ಲಾ ಭಾರತೀಯರನ್ನು ಅಪ್ಪಿಕೊಳ್ಳುತ್ತೇವೆ' ಎಂದು ರಾಹುಲ್ ಹೇಳಿದ್ದಾರೆ.

ಸೆಪ್ಟೆಂಬರ್ನಲ್ಲಿ ಪ್ರಾರಂಭವಾದ ಪಾದಯಾತ್ರೆಯ 108 ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ನಾಯಕರು ಇಂದು ಸಂಜೆ ದೆಹಲಿಯ ಕೆಂಪುಕೋಟೆಗೆ ಭೇಟಿ ನೀಡಲಿದ್ದಾರೆ. ವೇಳಾಪಟ್ಟಿಯ ಪ್ರಕಾರ, ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ರಾಜೀವ್ ಗಾಂಧಿ ಅವರ ಸ್ಮಾರಕಗಳಲ್ಲಿ ರಾಹುಲ್ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.












Click it and Unblock the Notifications