ಲೆಕ್ಕವಿಲ್ಲದಷ್ಟು ಮನೆಗಳನ್ನು ನಾಶಪಡಿಸಿದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆರೋಪ
ನವದೆಹಲಿ, ನವೆಂಬರ್ 9: ನರೇಂದ್ರ ಮೋದಿ ಸರ್ಕಾರವು 'ಉದ್ದೇಶಪೂರ್ವಕ' ಲಾಕ್ಡೌನ್ ಮತ್ತು ಅಪನಗದೀಕರಣ ಮೂಲಕ ಲೆಕ್ಕವಿಲ್ಲದಷ್ಟು ಮನೆಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲಾಕ್ಡೌನ್ ಕಾರಣದಿಂದ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬೇಸೆತ್ತ 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ತೆಲಂಗಾಣದ ಘಟನೆಯ ವರದಿಯೊಂದನ್ನು ಟ್ಯಾಗ್ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
'ಈ ಅತ್ಯಂತ ದುಃಖದ ಗಳಿಗೆಯಲ್ಲಿ ಈ ಯುವತಿಯ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ. ಬಿಜೆಪಿ ಸರ್ಕಾರವು ಉದ್ದೇಶಪೂರ್ವಕ ಅಪನಗದೀಕರಣ ಮತ್ತು ದೇಶವ್ಯಾಪಿ ಲಾಕ್ಡೌನ್ನಿಂದ ಅಸಂಖ್ಯಾತ ಮನೆಗಳನ್ನು ನಾಶಪಡಿಸಿದೆ. ಇದು ವಾಸ್ತವ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೆಹಲಿಯ ಲೇಡಿ ಶ್ರೀರಾಮ್ (ಎಲ್ಎಸ್ಆರ್) ಮಹಿಳಾ ಕಾಲೇಜಿನಲ್ಲಿ ಎರಡನೆಯ ವರ್ಷದ ಬಿಎಸ್ಸಿ ಗಣಿತ ಪದವಿ ವಿದ್ಯಾರ್ಥಿನಿಯಾಗಿದ್ದ ಐಶ್ವರ್ಯಾ, ನವೆಂಬರ್ 2ರಂದು ತೆಲಂಗಾಣದ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್ ಆಗಿರುವ ಆಕೆಯ ತಂದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಆಕೆಯ ಆನ್ಲೈನ್ ತರಗತಿಗಳಿಗೆ ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೂಡ ಕೊಡಿಸಲು ಶಕ್ತರಾಗಿರಲಿಲ್ಲ. ತನ್ನ ಶಿಕ್ಷಣ ಮುಂದುವರಿಸಲಾಗುತ್ತಿಲ್ಲ ಎಂದು ನೊಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
12ನೆಯ ತರಗತಿಯಲ್ಲಿ ಆಕೆ ಶೇ 98.5ರಷ್ಟು ಅಂಕಗಳನ್ನು ಪಡೆದಿದ್ದಳು. 'ನನ್ನಿಂದಾಗಿ ನನ್ನ ಕುಟುಂಬ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದೆ. ನಾನು ನನ್ನ ಕುಟುಂಬಕ್ಕೆ ಭಾರವಾಗಿದ್ದೇನೆ. ನನ್ನ ಶಿಕ್ಷಣ ಹೊರೆಯಾಗಿದೆ' ಎಂದು ಆಕೆ ಡೆತ್ ನೋಟ್ನಲ್ಲಿ ಬರೆದುಕೊಂಡಿದ್ದಳು.












Click it and Unblock the Notifications