ಪುದುಚೇರಿ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರ ರಚಿಸಲ್ಲ ಎಂದ ಎಐಎಡಿಎಂಕೆ
ಪುದುಚೇರಿ, ಫೆಬ್ರವರಿ.23: ಪುದುಚೇರಿಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದ್ದರೂ ಸಹ ಯಾವುದೇ ಕಾರಣಕ್ಕೂ ಸರ್ಕಾರ ರಚಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಎಐಎಡಿಎಂಕೆ ಪಕ್ಷದ ಮುಖಂಡ ಎ. ಅಂಬಾಲಗನ್ ಸ್ಪಷ್ಟಪಡಿಸಿದ್ದಾರೆ.
ಪುದುಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ನು 10 ದಿನಗಳಲ್ಲೇ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ. ಪ್ರಜಾಸತ್ತಾತ್ಮಕ ರೀತಿಯಲ್ಲೇ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ವಿಶ್ವಾಸ ಮತಕ್ಕೆ ಸೋಲು, ಪುದುಚೆರಿಯಲ್ಲಿ ಸರ್ಕಾರ ಪತನ
ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿದ್ದು, ಈ ಹಂತದಲ್ಲಿ ಸರ್ಕಾರ ರಚಿಸುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಸೋಮವಾರ ಸಿಎಂ ನಾರಾಯಣಸಾಮಿ ರಾಜೀನಾಮೆ:
ಸೋಮವಾರ ಪುದುಚೇರಿ ವಿಧಾನಸಭಾ ಕಲಾಪದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ವಿಫಲರಾದರು. ಇದರ ಬೆನ್ನಲ್ಲೇ ಲೆಫ್ಟಿನೆಂಟ್ ಗವರ್ನರ್ ತಮಿಳ್ ಸಾಯಿ ಸೌಂದರ್ ರಾಜನ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿಗೂ ಮೊದಲೇ ಸರ್ಕಾರದ ಪತನವು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ರಾಜಕೀಯ ಇತಿಹಾಸದಲ್ಲೇ ಕೆಟ್ಟ ಅಧ್ಯಯನವಾಗಿರಲಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ವಿ. ಸ್ವಾಮಿನಾಥನ್ ತಿಳಿಸಿದ್ದಾರೆ.
"ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಹಂತದಲ್ಲಿ ನಾವು ಸರ್ಕಾರ ರಚಿಸುವುದಕ್ಕೆ ಪ್ರಯತ್ನಿಸುವುದಿಲ್ಲ ಎಂದು ಪುದುಚೇರಿ ಬಿಜೆಪಿ ರಾಜ್ಯಾಧ್ಯಕ್ಷ ವಿ ಸ್ವಾಮಿನಾಥನ್ ತಿಳಿಸಿದ್ದಾರೆ. ಅಲ್ಲರೇ, ಮುಂಬರುವ ಚುನಾವಣೆಯ ಬಳಿಕ ಪ್ರಜೆಗಳ ಆಶೀರ್ವಾದ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಜೊತೆಗೆ ಬಿಜೆಪಿ ಮೈತ್ರಿಕೂಟದ ಎನ್ಆರ್ ಸಿ ಹಾಗೂ ಎಐಎಡಿಎಂಕೆ ಪಕ್ಷದ ಒಡಗೂಡಿ ಮೇ ತಿಂಗಳಿನಲ್ಲಿ ಹೊಸದಾಗಿ ಸರ್ಕಾರ ರಚಿಸುತ್ತೇವೆ. ಅದು ಪುದುಚೇರಿ ಪ್ರಜೆಗಳಿಗೆ ಉಜ್ವಲ ಭವಿಷ್ಯವನ್ನು ಸೃಷ್ಟಿಸಲಿದೆ ಎಂದು ತಿಳಿಸಿದ್ದರು.