ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ತಸ್ಲಿಮಾ ನಸ್ರೀನ್ ವಿರುದ್ಧ ಪ್ರತಿಭಟನೆ
ಬಾಂಗ್ಲಾದೇಶ ಲೇಖಕಿ ವಿರುದ್ಧ ಮುಸ್ಲಿಂ ಸಂಪ್ರದಾಯವಾದಿಗಳ ಕಿಡಿ; ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಂತೆ ಆಗ್ರಹ
ಜೈಪುರ, ಜನವರಿ 24: ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರನ್ನು ಜೈಪುರ ಲಿಟರೇಚರ್ ಫೆಸ್ಟಿವಲ್ ಆಹ್ವಾನಿಸಿದ್ದರ ವಿರುದ್ಧ ಸಿಡಿದೆದ್ದಿರುವ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಈ ಹಿನ್ನೆಲೆಯಲ್ಲಿ ತಸ್ಲಿಮಾ ನಸ್ರೀನ್ ಅವರನ್ನು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮುಂದೆಂದೂ ಆಹ್ವಾನ ನೀಡದಿರಲು ನಿರ್ಧರಿಸಿರುವುದಾಗಿ ಸಮ್ಮೇಳನದ ಆಯೋಜಕ ಸಂಜಯ್ ರಾಯ್ ಅವರು ಭರವಸೆ ನೀಡಿದ ನಂತರ ನಸ್ರೀನ್ ಅವರ ವಿರುದ್ಧದ ಪ್ರತಿಭಟನೆ ನಿಂತಿದೆ.
ಸಮ್ಮೇಳನದ ಅಂಗವಾಗಿ, ಸೋಮವಾರ ರಾತ್ರಿ ನಸ್ರೀನ್ ಅವರ ಇತ್ತೀಚಿನ ಕೃತಿಯಾದ 'ಎಕ್ಸೈಲ್' ಕುರಿತಂತೆ ಸಂವಾದ ಏರ್ಪಡಿಸಲಾಗಿತ್ತು. ಆ ಕೃತಿಯಲ್ಲಿ ಅವರು,ಕೆಲ ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಓಡಿಬಂದು ಭಾರತದಲ್ಲಿ ರಕ್ಷಣೆ ಪಡೆದಿದ್ದ ತಮ್ಮ ದಿನಗಳನ್ನು ಮೆಲುಕು ಹಾಕಿದ್ದಾರೆ.
ಆದರೆ, ಸಂವಾದ ಶುರುವಾದ ಸುಮಾರು ನಿಮಿಷಗಳಲ್ಲೇ ಸ್ಥಳಕ್ಕಾಗಮಿಸಿದ 25ರಿಂದ 30 ಮುಸ್ಲಿಮರುಳ್ಳ ಗುಂಪು, ತಸ್ಲಿಮಾ ಅವರು ಇಸ್ಲಾಂ ಧರ್ಮ ವಿರೋಧಿಯಾಗಿದ್ದು, ಅವರನ್ನು ಜೈಪುರ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದ್ದು ತಪ್ಪೆಂದು ಸಮಾರಂಭ ನಡೆಯುತ್ತಿದ್ದ ಡಿಗ್ಗಿ ಅರಮನೆ ಮುಂದೆ ಧರಣಿ ಕುಳಿತರು.
ಅಂದಹಾಗೆ, ಸಾಹಿತ್ಯ ಸಮ್ಮೇಳನದಲ್ಲಿ ತಸ್ಲಿಮಾ ನಸ್ರೀನ್ ಅವರು ಭಾಗವಹಿಸುತ್ತಿರುವುದನ್ನು ಆಯೋಜಕರು ಗೌಪ್ಯವಾಗಿರಿಸಿದ್ದರೆಂದು ಹೇಳಲಾಗಿದೆ. ಹಾಗಾಗಿ, ಸಂವಾದ ಕಾರ್ಯಕ್ರಮ ಆರಂಭವಾದ ನಂತರ ಗಲಾಟೆ ಆರಂಭವಾಗಿದೆ.