Prliament Special Session; ಸಂಸದರಿಗೆ ಬಿಜೆಪಿಯಿಂದ ವಿಪ್ ಜಾರಿ
ನವದೆಹಲಿ, ಸೆಪ್ಟೆಂಬರ್ 14; ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಸೆಪ್ಟೆಂಬರ್ 18ರಂದು ಆರಂಭವಾಗಲಿದೆ. ಅಧಿವೇಶನದ ಕಾರ್ಯಸೂಚಿ ಈಗಾಗಲೇ ಬಿಡುಗಡೆಯಾಗಿದೆ. ಬಿಜೆಪಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದು ಎಲ್ಲಾ ಸಂಸದರಿಗೆ ವಿಪ್ ಜಾರಿಗೊಳಿಸಿದೆ.
ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ ವಿಶೇಷ ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಒಂದು ಸಾಲಿನ ವಿಪ್ನಲ್ಲಿ ಸಂಸದರಿಗೆ ಸೂಚನೆ ನೀಡಿದೆ. ಸೆಪ್ಟೆಂಬರ್ 18ರ ಸೋಮವಾರದಿಂದ 22ರ ಶುಕ್ರವಾರದ ತನಕ ಅಧಿವೇಶನ ನಡೆಯಲಿದೆ.

ಎಲ್ಲಾ ದಿನಗಳು ವಿಶೇಷ ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಬಹುಮುಖ್ಯವಾದ ವಿಚಾರಗಳು ಅಧಿವೇಶನದಲ್ಲಿ ಚರ್ಚೆಯಾಗಲಿದೆ. ಈ ಸಂದರ್ಭದಲ್ಲಿ ಸಂಸತ್ನಲ್ಲಿ ಹಾಜರಿದ್ದು, ಸರ್ಕಾರವನ್ನು ಬೆಂಬಲಿಸಬೇಕು ಎಂದು ವಿಪ್ನಲ್ಲಿ ತಿಳಿಸಲಾಗಿದೆ.
ಈ 5 ದಿನಗಳ ವಿಶೇಷ ಅಧಿವೇಶನ ಮೊದಲು ಹಳೆಯ ಸಂಸತ್ ಭವನದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 19ರಿಂದ ಹೊಸ ಸಂಸತ್ ಭವನದಲ್ಲಿ ಕಲಾಪಗಳು ನಡೆಯಲಿದೆ, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಧಿವೇಶನದ ಹಿನ್ನಲೆಯಲ್ಲಿ ಸೆಪ್ಟೆಂಬರ್ 17ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ಕಾರ್ಯಸೂಚಿ; ಕೇಂದ್ರ ಸರ್ಕಾರ ಬುಧವಾರ ವಿಶೇಷ ಅಧಿವೇಶನದ ಕಾರ್ಯಸೂಚಿ ಬಿಡುಗಡೆ ಮಾಡುವ ಮೂಲಕ ಏಕೆ ಅಧಿವೇಶನ ಕರೆಯಲಾಗಿದೆ? ಎಂದು ಹೇಳಿದೆ. ಈ ವಿಶೇಷ ಅಧಿವೇಶನದಲ್ಲಿ ಪ್ರಶ್ನೋತ್ತರ ಸಮಯ ಮತ್ತು ಖಾಸಗಿ ಮಸೂದೆಯ ಮಂಡನೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮೊದಲ ದಿನದ ಕಲಾಪದಲ್ಲಿ 'ಸಂಸತ್ 75 ವರ್ಷಗಳ ಪಯಣ' ಕುರಿತು ಉಭಯ ಸದನಗಳಲ್ಲಿ ಚರ್ಚೆಗಳು ನಡೆಯಲಿವೆ. ವಿಧಾನಸಭೆಯಿಂದ ಸಂಸತ್ ತನಕ ನಡೆದು ಬಂದ ಸಂಸದೀಯ ಹಾದಿ, ಸಾಧನೆ, ಅನುಭವ, ನೆನಪುಗಳು ಮತ್ತು ಕಲಿಕೆ ಕುರಿತು ಸಂಸದರು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಸಭೆಯಲ್ಲಿಯೂ ಇದೇ ವಿಚಾರದ ಕುರಿತು ಚರ್ಚೆ ನಡೆಯಲಿದೆ.
ಐದು ದಿನಗಳ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರ (ನೇಮಕಾತಿ, ಕರ್ತವ್ಯ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ, ಲೋಕಸಭೆಯಲ್ಲಿ ವಕೀಲರ ಮಸೂದೆ (ತಿದ್ದುಪಡಿ), ನಿಯತಕಾಲಿಕೆಗಳ ಮುದ್ರಣ ಹಾಗೂ ನೋಂದಣಿ ಮಸೂದೆಯನ್ನು ಮಂಡಿಸಲಾಗುತ್ತದೆ. ಮಸೂದೆಗಳಿಗೆ ಅಂಗೀಕಾರ ಪಡೆಯಲು ಸಂಸದರು ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ ವಿವಾದಕ್ಕೆ ಕಾರಣವಾಗಿದೆ. ಮುಂಗಾರು ಅಧಿವೇಶನದಲ್ಲಿ ಇದನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿದೆ. ಈಗ ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುತ್ತದೆ.
ಉಳಿದದಂತೆ ಅಂಚೆ ಕಛೇರಿ ಮಸೂದೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ, ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಸೇರಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.
ವಿಶೇಷ ಅಧಿವೇಶನದ ತಂತ್ರಗಳನ್ನು ರೂಪಿಸಲು INDIA ಮೈತ್ರಿಕೂಟದ ಪಕ್ಷಗಳು ಸರಣಿ ಸಭೆಗಳನ್ನು ನಡೆಸುತ್ತಿವೆ. ಒಂದು ವೇಳೆ ಭಾರತದ ಹೆಸರು ಬದಲಾವಣೆ, ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆಗಳು ನಡೆದರೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಸೆಪ್ಟೆಂಬರ್ 17ರಂದು ನಡೆಯುವ ಸರ್ವಪಕ್ಷಗಳ ಸಭೆಗೂ ಮುನ್ನ INDIA ಮೈತ್ರಿಕೂಟದ ಪಕ್ಷಗಳು ಮತ್ತೊಮ್ಮೆ ಸಭೆ ನಡೆಸುವ ಸಾಧ್ಯತೆ ಇದೆ. ವಿರೋಧ ಪಕ್ಷಗಳು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆಯೇ? ಅಥವ ಕಲಾಪ ಬಹಿಷ್ಕಾರ ಮಾಡಲಿವೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications