ಬೂಸ್ಟರ್ ಡೋಸ್; ಏಮ್ಸ್ ಮುಖ್ಯಸ್ಥ ನೀಡಿದ ಬಹುಮುಖ್ಯ ಸಲಹೆ
ನವದೆಹಲಿ, ಆಗಸ್ಟ್ 26: ಕೊರೊನಾ ಸೋಂಕು ಹರಡುವಿಕೆ ತಡೆಯಲು ಭಾರತದಲ್ಲಿ ಸಾಧ್ಯವಾದಷ್ಟು ಜನರಿಗೆ ತ್ವರಿತವಾಗಿ ಲಸಿಕೆ ಹಾಕುವತ್ತ ಗಮನ ಹರಿಸಬೇಕು ಹಾಗೂ ಬೂಸ್ಟರ್ ಡೋಸ್ ನೀಡುವ ಆಲೋಚನೆಗೆ ಇನ್ನಷ್ಟು ದಿನ ತಡೆ ನೀಡಬೇಕು ಎಂದು ದೆಹಲಿಯ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ದೇಶದಲ್ಲಿ ಲಸಿಕಾ ಅಭಿಯಾನವು ವೇಗವಾಗಿ ಮುಂದುವರೆದರೆ ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಿನ ಮಟ್ಟದಲ್ಲಿ ದಾಖಲಾಗುವುದಿಲ್ಲ ಎಂದು ಈಚೆಗೆ ನಡೆಸಿದ ರಾಷ್ಟ್ರೀಯ ಸೆರೊ ಸರ್ವೇ ಸೂಚಿಸಿದೆ. ದೇಶದಲ್ಲಿ ಇಲ್ಲಿಯವರೆಗೂ 60 ಕೋಟಿಗೂ ಹೆಚ್ಚು ಕೊರೊನಾ ಲಸಿಕೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಮಗ್ರ ಆರೋಗ್ಯ ಹಾಗೂ ಯೋಗಕ್ಷೇಮ ಸಮಿತಿ ಆಯೋಜಿಸಿದ್ದ ವರ್ಚುಯಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋಂಕಿನಿಂದ ಹೆಚ್ಚಿನ ಅಪಾಯದ ಸಾಧ್ಯತೆಯಿರುವ ಜನರಿಗೆ ಆದಷ್ಟು ಬೇಗ ಲಸಿಕೆ ನೀಡುವ ತುರ್ತನ್ನು ವಿವರಿಸಿದರು.
'ಇಲ್ಲಿಯವರೆಗೆ ಲಸಿಕೆಯನ್ನೇ ಪಡೆಯದವರಿಗೆ ಲಸಿಕೆಯ ಹಾಕುವ ಕುರಿತು ಸರ್ಕಾರ ಕಾರ್ಯೋನ್ಮುಖವಾಗಬೇಕು. ವಿಶೇಷವಾಗಿ ಸೋಂಕಿನಿಂದ ಅಪಾಯದ ಸಾಧ್ಯತೆ ಹೆಚ್ಚಿರುವವರಿಗೆ ಲಸಿಕೆ ಹಾಕುವತ್ತ ಗಮನ ಹರಿಸಬೇಕು. ಇನ್ನೂ ಅನೇಕ ಆರೋಗ್ಯ ಕಾರ್ಯಕರ್ತರು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಹಲವು ಮಂದಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿಲ್ಲ. ಅವರಲ್ಲಿಯೇ ಸೋಂಕು ಗಂಭೀರ ಸ್ವರೂಪ ಪಡೆಯುವ ಹಾಗೂ ಮರಣ ಸಾಧ್ಯತೆಯು ಹೆಚ್ಚಿದೆ' ಎಂದು ರಣದೀಪ್ ತಿಳಿಸಿದ್ದಾರೆ.
'ಸದ್ಯಕ್ಕೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಆಲೋಚನೆಯನ್ನು ತಡೆಹಿಡಿಯುವುದು ಒಳ್ಳೆಯದು. ಮೂರನೇ ಡೋಸ್ ಅತ್ಯವಶ್ಯಕವಿದ್ದವರಿಗಷ್ಟೇ ನೀಡುವತ್ತ ಗಮನ ಹರಿಸಬೇಕು. ಆಗ ನಾವು ಸಾಕಷ್ಟು ಜನರ ಪ್ರಾಣವನ್ನು ಉಳಿಸಲು ಸಾಧ್ಯವಾಗಬಹುದು' ಎಂದು ಸಲಹೆ ನೀಡಿದ್ದಾರೆ.
'ಕೊರೊನಾ ನಿರ್ವಹಣೆಯಲ್ಲಿ ಮೂರು ಡೋಸ್, ನಾಲ್ಕು ಡೋಸ್ ಅಥವಾ ವಿಭಿನ್ನ ವಿಷಯಗಳನ್ನು ಪ್ರಯತ್ನಿಸುವುದಕ್ಕಿಂತ ಸಾಧ್ಯವಾದಷ್ಟು ಮಂದಿಗೆ ಲಸಿಕೆ ನೀಡುವುದು ಸದ್ಯದ ತುರ್ತು ಎಂದು ನನಗನಿಸುತ್ತಿದೆ. ಈಗ ನಮಗೆ ತಿಳಿದಿರುವ ವಿಷಯಗಳಿಗೆ ಒತ್ತು ನೀಡೋಣ, ನಮಗೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಲಸಿಕೆ ಹಾಕುವತ್ತ ಗಮನ ಹರಿಸೋಣ' ಎಂದರು.
ದೇಶದಲ್ಲಿ ಇದೀಗ ಕೊರೊನಾ ಬೂಸ್ಟರ್ ಡೋಸ್ ಅಗತ್ಯವನ್ನು ಎತ್ತಿಹೇಳುವ ಸಾಕಷ್ಟು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪ್ರತಿಕಾಯಗಳು ಸೋಂಕಿನಿಂದ ರಕ್ಷಣೆ ನೀಡಲು ಏಕೈಕ ಮಾರ್ಗವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

ದೇಶದಲ್ಲಿ ಸದ್ಯ ಲಸಿಕೆ ನೀಡುವ ಪ್ರಕ್ರಿಯೆ ಚುರುಕಾಗಿ ಸಾಗುತ್ತಿದೆ. ಇದೇ ಧಾಟಿಯಲ್ಲಿ ಇನ್ನಷ್ಟು ದಿನ ಮುಂದುವರೆದರೆ ಕೊರೊನಾ ಮೂರನೇ ಅಲೆ ಪರಿಣಾಮ ತೀಕ್ಷ್ಣವಾಗಿರುವುದಿಲ್ಲ ಎಂದು ಈಚಿನ ಸೆರೊ ಸಮೀಕ್ಷೆ ತಿಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.
ಭಾರತದಲ್ಲಿ ಎಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ?
ಕೊರೊನಾ ಸಾಂಕ್ರಾಮಿಕ ಮತ್ತು ರೂಪಾಂತರ ಸೃಷ್ಟಿ ಭೀತಿ ನಡುವೆ ಲಸಿಕೆ ನೀಡುವುದರಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ದೇಶದಲ್ಲಿ ಈವರೆಗೂ 60 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಬುಧವಾರ ಒಂದೇ ದಿನ 66 ಲಕ್ಷ ಫಲಾನುಭವಿಗಳಿಗೆ ಕೊರೊನಾ ಲಸಿಕೆ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 58,07,64,210 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ.
ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 222 ದಿನಗಳಾಗಿದ್ದು, ಬುಧವಾರ ರಾತ್ರಿ 7 ಗಂಟೆ ವೇಳೆಗೆ 66,22,337 ಫಲಾನುಭವಿಗಳಿಗೆ ಕೊರೊನಾ ಲಸಿಕೆ ವಿತರಿಸಲಾಗಿದೆ. ಈವರೆಗೂ 60,24,25,271 ಫಲಾನುಭವಿಗಳಿಗೆ ಕೊರೊನಾ ಲಸಿಕೆ ವಿತರಿಸಲಾಗಿದೆ. ಒಂದೇ ದಿನ 46,72,355 ಫಲಾನುಭವಿಗಳಿಗೆ ಮೊದಲ ಡೋಸ್, 19,49,982 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 18-44 ವಯೋಮಾನದ 1 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಕೊರೊನಾ ಲಸಿಕೆ ನೀಡಲಾಗಿದೆ.












Click it and Unblock the Notifications