ಸಿಬಿಐ ನಿರ್ದೇಶಕರನ್ನು ಕಿತ್ತೊಗೆಯಲು ಕೇಂದ್ರಕ್ಕೆ ಅಧಿಕಾರವಿಲ್ಲ : ಪ್ರಶಾಂತ್
ನವದೆಹಲಿ, ಅಕ್ಟೋಬರ್ 23 : ವಿವಾದದ ಕೇಂದ್ರಬಿಂದುವಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಬಲವಂತದ ರಜೆಯ ಮೇಲೆ ಕಳುಹಿಸಲು ಕೇಂದ್ರ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು ಕೇಂದ್ರಕ್ಕೆ ಅಡ್ಡಗಾಲು ಹಾಕಿದ್ದಾರೆ.
ಸಿಬಿಐ ನಿರ್ದೇಶಕರನ್ನಾಗಲಿ, ವಿಶೇಷ ನಿರ್ದೇಶಕರನ್ನಾಗಲಿ ನೇಮಕ ಮಾಡಲಾಗಲಿ ಅಥವಾ ಕೆಲಸದಿಂದ ತೆಗೆದುಹಾಕಲಾಗಲಿ ಅಥವಾ ಸುದೀರ್ಘ ರಜಾ ಕೊಟ್ಟು ಮನೆಗೆ ಕಳಿಸಲಾಗಲಿ ಕೇಂದ್ರ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದಿರುವ ಪ್ರಶಾಂತ್ ಭೂಷಣ್, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕೇಂದ್ರಕ್ಕೆ ಸವಾಲು ಒಡ್ಡಿದ್ದಾರೆ.
ಮೂರುವರೆ ಕೋಟಿ ಲಂಚ ಪಡೆದ ಆರೋಪ ಹೊತ್ತಿರುವ 'ಕಳಂಕಿತ' ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ಪಾರು ಮಾಡುವ ಉದ್ದೇಶದಿಂದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ತೆಗೆದು ಹಾಕಲಾಗಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ಎಂದು ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದಾರೆ.

ಸಿಬಿಐ ನಿರ್ದೇಶಕರನ್ನು ಅಮಾನತು ಮಾಡಲು ಸಾಧ್ಯವಿಲ್ಲ
ಸಿಬಿಐ ನಿರ್ದೇಶಕರನ್ನು ಪ್ರಧಾನಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರಿರುವ ಸಮಿತಿ ಆಯ್ಕೆ ಮಾಡುತ್ತದೆ. ಈ ಸಮಿತಿಯ ಅನುಮತಿಯಿಲ್ಲದೆ ಸಿಬಿಐ ನಿರ್ದೇಶಕರನ್ನು ಕೆಲಸದಿಂದ ವಜಾ ಮಾಡಲಾಗಲಿ, ಅಮಾನತು ಮಾಡಲಾಗಲಿ ಸಾಧ್ಯವಿಲ್ಲ ಎಂದಿದ್ದಾರೆ ಅವರು.

ರಾಕೇಶ್ ಅಸ್ಥಾನಾ ವಿರುದ್ಧ ಸಿಬಿಐ ಎಫ್ಐಆರ್
ತನಿಖೆ ನಡೆಸುವಾಗ ಹಣ ಕೀಳುವುದನ್ನೇ ದಂಧೆ ಮಾಡಿಕೊಂಡಿದ್ದರು ಎಂದು ಆರೋಪಿಸಿ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ವಿರುದ್ಧ ಸಿಬಿಐ ಎಫ್ಐಆರ್ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ರಾಕೇಶ್ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಅವರ ಬಂಧನಕ್ಕೆ ತಡೆಯೊಡ್ಡಿದರೂ, ತನಿಖೆಗೆ ಮುಂದುವರಿಸಲು ಅನುಮತಿ ನೀಡಿದೆ.

ಕಾಂಗ್ರೆಸ್ ಮತ್ತು ಪ್ರಶಾಂತ್ ಭೂಷಣ್ ಆರೋಪ ಏನು?
ಕಾಂಗ್ರೆಸ್ ಮತ್ತು ಪ್ರಶಾಂತ್ ಭೂಷಣ್ ಮಾಡುತ್ತಿರುವ ಆರೋಪವೆಂದರೆ, ಸ್ವಾಯತ್ತ ಸಂಸ್ಥೆಯಾದ ಸಿಬಿಐನ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರು, ಕೇಂದ್ರ ಸರಕಾರ ಫ್ರಾನ್ಸ್ ಸರಕಾರದ ಜೊತೆ ಮಾಡಿಕೊಂಡಿರುವ ವಿವಾದಾತ್ಮಕ ರಫೇಲ್ ಡೀಲ್ ವಿರುದ್ಧವೇ ಪ್ರಶ್ನೆ ಕೇಳಲು ಆರಂಭಿಸಿದ್ದರು. ಈ ಕಾರಣದಿಂದಲೇ ಅವರನ್ನು ಕೆಲಸದಿಂದ ತೆಗೆಯಲಾಗಿದೆ. ಇದೇ ಪ್ರಶ್ನೆಯನ್ನು ಅರವಿಂದ್ ಕೇಜ್ರಿವಾಲ್ ಅವರು ಕೂಡ ಕೇಳಿದ್ದಾರೆ. ಅಲೋಕ್ ಅವರು ರಫೇಲ್ ಡೀಲ್ ಬಗ್ಗೆ ತನಿಖೆ ನಡೆಸಲು ಸಿದ್ಧತೆ ನಡೆಸಿದ್ದರೆ, ಇದರಿಂದ ನರೇಂದ್ರ ಮೋದಿಯವರಿಗೆ ಸಂಕಷ್ಟವಾಗುತ್ತಿತ್ತೆ? ಎಂದು ಅವರು ಕೇಳಿದ್ದಾರೆ.

ಕೇಂದ್ರದ ಸರಕಾರ ವಿರುದ್ಧ ವಿರೋಧ ಪಕ್ಷದ ಆಕ್ಷೇಪಣೆ
ಈ ನಡುವೆ, ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಅಸ್ಥಾನಾ ವಿರುದ್ಧ ತನಿಖೆಯಲ್ಲಿ ತೊಡಗಿದ್ದ ಹನ್ನೊಂದು ಅಧಿಕಾರಿಗಳನ್ನು ಕೇಂದ್ರ ಸರಕಾರ ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಿದೆ. ಇದು ಕೂಡ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಳಂಕಿತ ಅಧಿಕಾರಿ ರಾಕೇಶ್ ಅವರನ್ನು ಉಳಿಸಲೆಂದೇ ಕೇಂದ್ರ ಸರಕಾರ ಹೀಗೆ ಮಾಡಿದೆ ಎಂಬುದು ವಿರೋಧ ಪಕ್ಷದ ಆಕ್ಷೇಪಣೆ. ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಅಕ್ಬರುದ್ದಿನ್ ಓವೈಸಿ, ಮಾಯಾವತಿ ಮುಂತಾದವರು ಕೇಂದ್ರದ ಈ ಕ್ರಮದ ವಿರುದ್ಧ ಖಡ್ಗ ಹಿಡಿದು ಯುದ್ಧಕ್ಕೆ ನಿಂತಿದ್ದಾರೆ.












Click it and Unblock the Notifications