ಪ್ರತಿಪಕ್ಷ ಕಾಂಗ್ರೆಸ್ ಪರಿಜ್ಞಾನ ಇಲ್ಲವೇ?; ಪ್ರಹ್ಲಾದ್ ಜೋಶಿ ಪ್ರಶ್ನೆ
ನವದೆಹಲಿ, ಡಿಸೆಂಬರ್ 22; "ಭಾರತೀಯ ಸೇನೆಯನ್ನು ಕಾಂಗ್ರೆಸ್ ನಂಬಬೇಕು. ಸೂಕ್ಷ್ಮ ವಿಚಾರಗಳನ್ನು ಎಲ್ಲಿ ಚರ್ಚಿಸಬೇಕು ಎಂಬ ಪರಿಜ್ಞಾನ ಕಾಂಗ್ರೆಸ್ಗೆ ಇಲ್ಲವೇ?" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.
ಚೀನಾ-ಭಾರತ ಗಡಿ ವಿಚಾರವಾಗಿ ರಾಜ್ಯಸಭೆಯಲ್ಲಿ ಗುರುವಾರ ಕಾಂಗ್ರೆಸ್ ನಡೆಸಿದ ಧರಣಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿಪಕ್ಷ ಕಾಂಗ್ರೆಸ್ ಸದನ ಪೀಠಕ್ಕೆ ಅಗೌರವ ತೋರುವ ರೀತಿ ನಡೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಂಸತ್ತಿನಲ್ಲಿ ಸೂಕ್ಷ್ಮ ವಿಷಯಗಳ ಚರ್ಚೆ ನಡೆಯದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಪ್ರತಿಪಕ್ಷದ ಸರ್ಕಾರದ ಅವಧಿಯಲ್ಲೂ ಇಂತಹ ಆಚರಣೆಯನ್ನು ಕಂಡಿದ್ದೇವೆ. ಸ್ವತಃ ರಾಜ್ಯಸಭೆ ಸಭಾಪತಿಯವರು ಸಂಧಾನಕ್ಕೆ ಕರೆದರು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬರಲು ಒಪ್ಪಲಿಲ್ಲ ಎಂದರು.
ರಾಜ್ಯಸಭೆ ಪೀಠದಿಂದ ಏನೇ ನಿರ್ದೇಶನಗಳು ಬಂದರು ಅದನ್ನು ಉಲ್ಲಂಘಿಸಬೇಕು ಎಂಬ ನಿರ್ಧಾರ ಪ್ರತಿಪಕ್ಷಗಳು ಮಾಡಿದಂತಿದೆ. ಈ ರೀತಿಯ ನಡವಳಿಕೆ ಸದನದಲ್ಲಿ ತೋರುವುದು ಮಲ್ಲಿಕಾರ್ಜುನ ಖರ್ಗೆಯವರಿಗೆ ಸರಿಯಾದುದಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ರಾಜ್ಯಸಭೆ ಸಭಾಪತಿಗಳು ಪ್ರತಿಪಕ್ಷಗಳಲ್ಲಿ ಕೈ ಮುಗಿದು ಮನವಿ ಮಾಡಿದರು. ಸದನದಲ್ಲಿ ಪೀಠಾಧ್ಯಕ್ಷರು ಎದ್ದು ನಿಂತು ಕೈ ಮುಗಿದು ಮನವಿ ಮಾಡುತ್ತಾರೆ ಎಂದರೆ ಪ್ರತಿಪಕ್ಷ ನಾಯಕ ಹಾಗು ಸಭಾ ನಾಯಕರು ಅದನ್ನು ಗೌರವಿಸಬೇಕು ಎಂದರು.

ಆ ಮನವಿಯನ್ನು ಸಾರಾಸಗಟಾಗಿ ಮಲ್ಲಿಕಾರ್ಜುನ ಖರ್ಗೆ ತಳ್ಳಿ ಹಾಕುತ್ತಾರೆ ಎಂದರೆ ಏನರ್ಥ?. ಸಂಧಾನಕ್ಕೆ ಮಾತುಕತೆಗೆ ನಾನು ಬರುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ನೇರವಾಗಿ ಹೇಳಿದರು. ಸೌಜನ್ಯವನ್ನು ತೋರಿಸಲಿಲ್ಲ. ಈ ನಡವಳಿಕೆ ಖಂಡನೀಯ ಎಂದು ಜೋಶಿ ತಿಳಿಸಿದರು.
ಸೇನೆಯ ಹೇಳಿಕೆ ನಂಬಬೇಕು?; ಕೊನೆ ಪಕ್ಷ ಪ್ರತಿಪಕ್ಷಗಳು ಚೀನಾ ವಿಚಾರದಲ್ಲಿ ನಮ್ಮ ಸೇನೆಯ ಹೇಳಿಕೆಯನ್ನಾದರೂ ನಂಬಬೇಕು. ಭಾರತೀಯ ಸೇನೆಯ ಮೇಲೆ ಕಾಂಗ್ರೆಸ್ಗೆ ನಂಬಿಕೆ ಇಲ್ಲವೇ?. ಚೀನಾ-ಭಾರತ ಗಡಿ ವಿಚಾರ ಸೂಕ್ಷ್ಮ ವಿಚಾರವಾಗಿದ್ದು, ಸಾರ್ವಜನಿಕವಾಗಿ ಚರ್ಚೆ ನಡೆಸುವುದು ಎಷ್ಟು ಸೂಕ್ತ. ಕೆಲವು ಸೂಕ್ಷ್ಮ ವಿಚಾರಗಳನ್ನು ಸದನದಲ್ಲಿ ಚರ್ಚಿಸುವುದಕ್ಕೆ ಆಗುತ್ತದೆಯೇ?. ಸಭಾ ನಾಯಕರು, ಪ್ರತಿಪಕ್ಷ ನಾಯಕರು ಒಟ್ಟಾಗಿ ಸೇರಿ ಚರ್ಚಿಸುವ ಅಗತ್ಯತೆ ಇರುತ್ತದೆ ಎಂದರು.
ಕಾಂಗ್ರೆಸ್ ಆಡಳಿತ ನಡೆಸುವಾಗ ಇಂಥಹ ಸಂದರ್ಭಗಳಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ರಾಷ್ಟ್ರದ ಹಿತ ಗಮನಿಸಿ ಸರ್ಕಾರಕ್ಕೆ ಸಹಕಾರ ನೀಡಿದೆ. ಸದನದಲ್ಲಿ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ. ಅಲ್ಲದೇ ಭಾರತೀಯ ಸೇನೆ ಕೂಡ ಹೇಳಿಕೆ ನೀಡಿದೆ ಎಂದು ಜೋಶಿ ವಿವರಿಸಿದರು.
ಸೇನೆಯ ಹೇಳಿಯನ್ನಾದರೂ ನಂಬಿ ಕಾಂಗ್ರೆಸ್ ಸುಗಮವಾಗಿ ಸದನ ನಡೆಯಲು ಅವಕಾಶ ಮಾಡಿಕೊಡಬಹುದಿತ್ತು. ಆದರೆ ಮಲ್ಲಿಕಾರ್ಜುನ ಖರ್ಗೆ ತಮ್ಮ ಪಕ್ಷದ ಮೇಲಿನವರನ್ನು ಮೆಚ್ಚಿಸಬೇಕಿದೆ. ಯಾರನ್ನೋ ಮೆಚ್ಚಿಸಲು ಸಂವಿಧಾನಾತ್ಮಕವಾಗಿ ನಡೆಯುವ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ರಾಜ್ಯಸಭೆ ಕಲಾಪ ಬಹಿಷ್ಕಾರ; ಭಾರತ ಮತ್ತು ಚೀನಾ ಗಡಿವಿವಾದದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ಸದಸ್ಯರು ಬಿಗಿಪಟ್ಟು ಹಿಡಿದರು. ಇದರಿಂದಾಗಿ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಯಿತು.
ಸಭಾಪತಿ ಜಗದೀಪ್ ಧನಕರ್ ಪ್ರತಿಪಕ್ಷಗಳ ಮನವಿ ತಿರಸ್ಕಾರ ಮಾಡಿದರು. ಇದರಿಂದಾಗಿ ಕೆರಳಿದ ಸದಸ್ಯರು ಕಲಾಪ ಬಹಿಷ್ಕಾರ ಮಾಡಿದರು. ಸಭಾಪತಿಗಳು ಸದಸ್ಯರು ತಮ್ಮ ಆಸನಗಳಿಗೆ ಮರಳುವಂತೆ ಮಾಡಿದ ಮನವಿಗೂ ಸದಸ್ಯರು ಸ್ಪಂದಿಸಲಿಲ್ಲ.
ಸದನದ ನಾಯಕ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮಧ್ಯಾಹ್ನ 1 ಗಂಟೆಗೆ ತಮ್ಮನ್ನು ಭೇಟಿ ಮಾಡಿದ ಎಂದು ಜಗದೀಪ್ ಧನಕರ್ ಸೂಚನೆ ನೀಡಿದರು. ಆದರೆ ಖರ್ಗೆ ಏನೇ ಚರ್ಚೆ ನಡೆಸುವುದಿದ್ದರೂ ಸದನದಲ್ಲೇ ನಡೆಸಬೇಕು ಎಂದರು.












Click it and Unblock the Notifications