ಪ್ರಧಾನಿ ಮೋದಿ ಭಾಷಣ: ಅನ್ಲಾಕ್2ರಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ದೆಹಲಿ, ಜೂನ್ 30: ದೇಶದಲ್ಲಿ ಜುಲೈ 1ರಿಂದ ಅನ್ಲಾಕ್2 ಜಾರಿಯಾಗಲಿದೆ. ಈ ಕುರಿತು ಸೋಮವಾರ ರಾತ್ರಿ ಮಾರ್ಗಸೂಚಿಯೂ ಪ್ರಕಟವಾಗಿದೆ. ಇದರ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
Recommended Video
ಪ್ರಸ್ತುತ ಪರಿಸ್ಥಿತಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ''ನಾವು ಕೊರೊನಾ ಮಹಾಮಾರಿಯ ಜೊತೆ ಹೋರಾಡುತ್ತಲೇ ಅನ್ಲಾಕ್2 ಪ್ರವೇಶಿಸಿದ್ದೇವೆ. ಅದರ ಜೊತೆಯಲ್ಲಿ ಮಳೆಗಾಲಕ್ಕೂ ಪ್ರವೇಶಿಸಿದ್ದೇವೆ. ಸರಿಯಾದ ಸಮಯದಲ್ಲಿ ಲಾಕ್ಡೌನ್ ಮಾಡಿದ್ದರಿಂದ ಲಕ್ಷಾಂತರ ಮಂದಿಯ ಜೀವ ಉಳಿದಿದೆ. ಬೇರೆ ದೇಶಗಳಿಗೆ ಹೋಲಿಸಿಕೊಡರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ' ಎಂದು ಮಾತು ಆರಂಭಿಸಿದ್ದಾರೆ.
''ಕಂಟೈನ್ಮೆಂಟ್ ಜೋನ್ ಮೇಲೆ ಹೆಚ್ಚಿನ ನಿಗಾ ಅಗತ್ಯವಾಗಿದೆ. ಮಾಸ್ಕ್ ಧರಿಸಿಲ್ಲ ಎಂದು ದೇಶವೊಂದರ ಮುಖ್ಯಸ್ಥರಿಗೆ ದಂಡ ಹಾಕಿರುವ ಸುದ್ದಿ ಓದಿರಬಹುದು. ಭಾರತದಲ್ಲೂ ಇಂಥ ಕಠಿಣ ಕ್ರಮ ಅಗತ್ಯ. ಕಾನೂನಿನ ಎದುರು ಗ್ರಾಮದ ಪ್ರಧಾನ ಹಾಗೂ ದೇಶದ ಪ್ರಧಾನಿ ಇಬ್ಬರೂ ಒಂದೇ. ಅನ್ ಲಾಕ್ 2.0ರಲ್ಲಿ ಉದಾಸೀನರಾಗಿದ್ದರೆ, ಅಪಾಯ ಖಂಡಿತ. ಜನರ ಬೇಜವಾಬ್ದಾರಿ ವರ್ತನೆ ಚಿಂತೆ ಉಂಟು ಮಾಡಿದೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ
''ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಗರೀಬ್ ಕಲ್ಯಾಣ್ ಅನ್ನ ಯೋಜನೆ ಜಾರಿ ಮಾಡಲಾಗಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆ ನವೆಂಬರ್ವರೆಗೂ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದೇಶದಲ್ಲಿ ಯಾರೂ ಉಪವಾಸದಿಂದ ನರಳಬಾರದು, ಯಾವ ಮನೆಯಲ್ಲೂ ಹಸಿವಿನಿಂದ ಸಾಯಬಾರದು'' ಎಂದು ಮೋದಿ ಹೇಳಿದ್ದಾರೆ.

ನವೆಂಬರ್ವರೆಗೂ ಪಡಿತರ ವಿತರಣೆ
ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿ 80 ಕೋಟಿಗೂ ಹೆಚ್ಚು ಜನರಿಗೆ ರೇಷನ್ ಕೊಟ್ಟಿದ್ದೇವೆ. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ 5 ಕೆಜಿ ಗೋದಿ ಅಥವಾ ಅಕ್ಕಿ ನೀಡಲಿದ್ದೇವೆ. ಇನ್ನು ಐದು ತಿಂಗಳು ಈ ಯೋಜನೆ ಮುಂದುವರಿಯಲಿದೆ. ಇದಕ್ಕಾಗಿ 90 ಸಾವಿರ ಕೋಟಿ ಸರ್ಕಾರ ಖರ್ಚು ಮಾಡಲಿದೆ ಎಂದು ಹೇಳಿದ ಮೋದಿ ''ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ'' ಜಾರಿಯಾಗಲಿದೆ ಎಂದು ಒತ್ತಿ ಹೇಳಿದ್ದಾರೆ.

ಸ್ವದೇಶಿ ಮಂತ್ರ ಜಪಿಸಿದ ಪ್ರಧಾನಿ
'ಆತ್ಮ ನಿರ್ಭರ ಭಾರತದ ಕಡೆ ನಾವು ಹೆಜ್ಜೆ ಹಾಕಬೇಕಿದೆ. ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ಆತ್ಮ ನಿರ್ಭರ ಭಾರತವನ್ನು ಯಶಸ್ವಿಗೊಳಿಸೋಣ ಎಂದು ಪ್ರಧಾನಿ ಮೋದಿ ಭಾರತವನ್ನು ಸ್ವಾವಲಂಬಿ ದೇಶವನ್ನಾಗಿ ರೂಪುಗೊಳಿಸಬೇಕು'' ಎಂದು ಮೋದಿ ಕರೆ ನೀಡಿದ್ದಾರೆ.

ಮುಂದಾಲೋಚನೆ ಮಾಡಿದ ಮೋದಿ
ಮುಂದಿನ ದಿನಗಳಲ್ಲಿ ಸಾರ್ವಜನಿಕರು ಎಚ್ಚರ ವಹಿಸದಿದ್ದರೆ, ಕೊರೊನಾದಿಂದ ಅಪಾಯ ಆಗಬಹುದು ಎಂದು ಎಚ್ಚರಿಕೆ ನೀಡಿರುವ ಮೋದಿ, ಸರ್ಕಾರದ ಜೊತೆ ಕೈ ಜೋಡಿಸಿ, ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ವಿನಂತಿಸಿದ್ದಾರೆ. ದೇಶವೊಂದರ ಮುಖ್ಯಸ್ಥನಿಗೆ ಮಾಸ್ಕ್ ಧರಿಸಿಲ್ಲ ಎಂದು ದಂಡ ವಿಧಿಸಿರುವ ಘಟನೆ ಸ್ಮರಿಸಿದ ಮೋದಿ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಸಾರಿದ್ದಾರೆ.












Click it and Unblock the Notifications