ಜಗತ್ತಿನ ಎತ್ತರದ ಸರ್ದಾರ್ ಪಟೇಲ್ ರ ಪ್ರತಿಮೆ ಅ.31ಕ್ಕೆ ಲೋಕಾರ್ಪಣೆ
ನವದೆಹಲಿ, ಸೆಪ್ಟೆಂಬರ್ 9: ಜಗತ್ತಿನ ಅತಿದೊಡ್ಡ ಎಂಬ ಶ್ರೇಯದ, ಸರ್ದಾರ್ ವಲ್ಲಭ ಭಾಯ್ ಪಟೇಲ್ ರ ಪ್ರತಿಮೆಯನ್ನು ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾಣಿ ಭಾನುವಾರ ಹೇಳಿದ್ದಾರೆ.
ಇದು ಜಗತ್ತಿನಲ್ಲೇ ಅತಿ ದೊಡ್ಡ ಪ್ರತಿಮೆ ಎಂದು ಗುಜರಾತ್ ಸರಕಾರ ಹೇಳಿಕೊಂಡಿದೆ. ಅಕ್ಟೋಬರ್ 31ರಂದು ಭಾರತದ ಮೊದಲ ಗೃಹ ಸಚಿವ ವಲಭ ಭಾಯ್ ಪಟೇಲ್ ರ ಜನ್ಮ ವರ್ಷಾಚರಣೆ. ಆ ದಿನವೇ ಪ್ರತಿಮೆ ಅನಾವರಣ ಮಾಡಲಾಗುತ್ತದೆ.
ಸರ್ದಾರ್ ಪಟೇಲ್ ಜನ್ಮದಿನ: 'ರನ್ ಫಾರ್ ಯೂನಿಟಿ'ಗೆ ಪ್ರಧಾನಿ ಚಾಲನೆ
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮುಖ್ಯಾಂಶಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, 182 ಮೀಟರ್ ಎತ್ತರದ ಈ ಪ್ರತಿಮೆಯು ದೇಶದ ಒಗ್ಗಟ್ಟು ಹಾಗೂ ಸಮಗ್ರತೆಯ ಸಂಕೇತ ಎಂದು ರುಪಾಣಿ ಹೇಳಿದರು.
2013ರಲ್ಲಿ ಗುಜರಾತ್ ನಲ್ಲಿ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ರ ಪ್ರತಿಮೆ ಸ್ಥಾಪನೆ ಮಾಡುವ ಬಗ್ಗೆ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಮೇಲೆ ದೇಶದಾದ್ಯಂತ ಕಬ್ಬಿಣ, ಮರಳು ಮತ್ತು ನೀರನ್ನು ಒಟ್ಟು ಮಾಡಲಾಗಿತ್ತು.
ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಣೆ ಮಾಡಿದಾಗ, ಇದು ಖಾಲಿ ಮಾತಷ್ಟೇ ಎಂದು ವಿರೋಧಪಕ್ಷಗಳು ಹೀಗಳೆದಿದ್ದವು. ಆದರೆ ಈಗ ವಿಶ್ವ ಮಟ್ಟದ ವ್ಯವಸ್ಥೆಯೊಂದಿಗೆ ತಲೆ ಎತ್ತಿದೆ. ಕಾಂಗ್ರೆಸ್ ನವರು ಸರ್ದಾರ್ ಪಟೇಲ್ ರನ್ನು ಮೂಲೆಗುಂಪು ಮಾಡಿದ್ದರು. ಮೋದಿಯವರು ಈಗ ಪಟೇಲ್ ಮತ್ತು ಅವರ ಕೆಲಸವನ್ನು ಜಗತ್ತಿನ ಮುಂದೆ ತಂದಿದ್ದಾರೆ ಎಂದು ರುಪಾಣಿ ಹೇಳಿದ್ದಾರೆ.