ಪ್ರಧಾನಿ ಎಡಿಟೆಡ್ ಫೋಟೋ ವೈರಲ್; ಟಕ್ಕರ್ ಕೊಟ್ಟ ಬಿಜೆಪಿ
ನವದೆಹಲಿ, ಸೆ.18: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಹೆಚ್ಚು ವೈರಲ್ ಆಗಿದ್ದು, ಅವರ ಎಡಿಟೆಡ್ ಫೋಟೋ. ಕ್ಯಾಮೆರಾ ಲೆನ್ಸ್ ಕವರ್ ತೆಗೆಯದೇ ಫೋಟೋ ತೆಗೆಯುತ್ತಿದ್ದಾರೆ ಎಂದು ಫೋಟೋ ಹಂಚಿಕೊಂಡು ಹಲವರು ಬಿಜೆಪಿ ಕಾಲೆಳೆದಿದ್ದರು. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್, ಪ್ರಧಾನಿಯ ಎಡಿಟೆಡ್ ಫೋಟೋವನ್ನು ಹಂಚಿಕೊಂಡು ತಮಾಷೆ ಮಾಡಿತ್ತು. ಫೋಟೋ ಹಿಂದಿನ ಸತ್ಯಾಸತ್ಯತೆ ಪರಿಶೀಲನೆ ಮಾಡಲು ಹೋಗಿರಲಿಲ್ಲ. ಇದು ಬಿಜೆಪಿಗೆ ತಿರುಗೇಟು ನೀಡಲು ಅವಕಾಶ ಮಾಡಿಕೊಟ್ಟಿದೆ.
ಕುನೋ ನ್ಯಾಷನಲ್ ಪಾರ್ಕಿಗೆ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ
ಎಡಿಟೆಡ್ ಚಿತ್ರವನ್ನು ಹಂಚಿಕೊಂಡು ನಕಲಿ ಪ್ರಚಾರವನ್ನು ಹರಡಲು ಪ್ರಯತ್ನ ನಡೆಸುತ್ತಿದ್ದಾರೆ. ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರುವ ಉತ್ತಮ ವ್ಯಕ್ತಿಯನ್ನು ನೇಮಿಸಿಕೊಳ್ಳಿ ಎಂದು ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಕುಟುಕಿದೆ.
ಕ್ಯಾಮೆರಾ ಹಿಡಿದ ಪ್ರಧಾನಿ ಮೋದಿ ಚಿತ್ರ ವೈರಲ್
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣಕ್ಕೆ ಚಿರತೆಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕೆಲವು ಚಿತ್ರಗಳನ್ನು ಸೆರೆಹಿಡಿದು ಪ್ರಧಾನಿಯವರು ಛಾಯಾಗ್ರಹಣದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದರು.
ಚಿರತೆಗಳ ಫೋಟೋ ತೆಗೆಯುತ್ತಿದ್ದ ಪ್ರಧಾನಿಯವರ ಒಂದು ಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಲಾಗಿದೆ. ಇದರಲ್ಲಿ ಕ್ಯಾಮೆರಾ ಹಿಡಿದಿರುವ ಪ್ರಧಾನಿ ಮೋದಿ, ಅದರ ಲೆನ್ಸ್ ಕವರ್ ತೆಗೆಯದೇ ಫೋಟೋ ಸೆರೆಯಿಡಿಯುತ್ತಿದ್ದಾರೆ. ಈ ಚಿತ್ರ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿ, ಬರೀ ಫೋಟೋ ತೆಗೆಸಿಕೊಳ್ಳುವವರಿಗೆ ಫೋಟೋ ತೆಗೆಯಲು ಹೇಗೆ ಬರಲು ಸಾಧ್ಯ? ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು.
ಬಿಜೆಪಿ ನಾಯಕ ಸುಕಾಂತ ಮಜುಂದಾರ್ ತಿರುಗೇಟು
ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮೋದಿಯವರ ಈ ಎಡಿಟೆಡ್ ಫೋಟೋ ಬಳಸಿಕೊಂಡು ತಮಾಷೆ ಮಾಡಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಅವರು ಪ್ರಧಾನಿ ಮೋದಿ ಫೋಟೋ ತೆಗೆಯುತ್ತಿರುವ ಮಾರ್ಫ್ ಮಾಡಿದ ಚಿತ್ರವನ್ನು ಶೇರ್ ಮಾಡಿದ್ದಾರೆ. ಟಿಎಂಸಿ ನಾಯಕ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ, "ಎಲ್ಲಾ ಅಂಕಿಅಂಶಗಳ ಮೇಲೆ ಮುಚ್ಚಳವನ್ನು ಇಡುವುದು ಒಂದು ವಿಷಯ, ಆದರೆ ಕ್ಯಾಮೆರಾ ಲೆನ್ಸ್ನಲ್ಲಿ ಕವರ್ ತೆಗೆಯದೆ ಇರುವುದು ಸಂಪೂರ್ಣ ದೂರದೃಷ್ಟಿ" ಎಂದು ವ್ಯಂಗ್ಯವಾಡಿದ್ದರು.
ಬಿಜೆಪಿ ಈ ಚಿತ್ರಗಳ ವ್ಯತ್ಯಾಸವನ್ನು ತ್ವರಿತವಾಗಿ ಗುರುತಿಸಿತು. ಕ್ಯಾನನ್ ಲೆನ್ಸ್ ಕವರ್ ಹೊಂದಿರುವ ನಿಕಾನ್ ಕ್ಯಾಮೆರಾವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಬಿಜೆಪಿ ನಾಯಕ ಸುಕಾಂತ ಮಜುಂದಾರ್ ಗಮನಸೆಳೆದಿದ್ದಾರೆ.
ಕನಿಷ್ಠ ಸಾಮಾನ್ಯ ಜ್ಞಾನ ಇರುವವರನ್ನು ಪಕ್ಷದಲ್ಲಿರಿಸಿಕೊಳ್ಳಿ!
ಬಿಜೆಪಿ ನಾಯಕ ಸುಕಾಂತ ಮಜುಂದಾರ್ "ಟಿಎಂಸಿ ರಾಜ್ಯಸಭಾ ಸಂಸದ ನಿಕಾನ್ ಕ್ಯಾಮೆರಾದ ಎಡಿಟೆಡ್ ಚಿತ್ರವನ್ನು ಕ್ಯಾನನ್ ಕವರ್ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಕಲಿ ಪ್ರಚಾರವನ್ನು ಹರಡಲು ಇಂತಹ ಕೆಟ್ಟ ಪ್ರಯತ್ನ" ಎಂದಿದ್ದಾರೆ.
ಮುಂದುವರಿದು, "ಮಮತಾ ಬ್ಯಾನರ್ಜಿ ಅವರೇ, ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರುವ ಉತ್ತಮ ವ್ಯಕ್ತಿಯನ್ನು ನಿಮ್ಮ ಪಕ್ಷದಲ್ಲಿ ನೇಮಿಸಿಕೊಳ್ಳಿ" ಎಂದು ಸುಕಾಂತ ಮಜುಂದಾರ್ , ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದಾದ ಕೂಡಲೇ ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಐದು ಹೆಣ್ಣು ಚೀತಾ, ಮೂರು ಪುರುಷರು ಚೀತಾಗಳು
ನಮೀಬಿಯಾದಿಂದ ಶನಿವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಎಂಟು ಚಿರತೆಗಳು ಭಾರತಕ್ಕೆ ಬಂದಿವೆ. ಈ ಚಿತರೆಗಳಲ್ಲಿ ಮೂವರನ್ನು ಪ್ರಧಾನಿ ಮೋದಿಯವರು ಕುನೋ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣಕ್ಕೆ ಮತ್ತು ಉಳಿದ ಐವರನ್ನು ಇತರ ನಾಯಕರು ಮಹತ್ವಾಕಾಂಕ್ಷೆಯ ಮರುಪರಿಚಯ ಯೋಜನೆಯಡಿ ಬಿಡುಗಡೆ ಮಾಡಿದರು. ಏಳು ದಶಕಗಳ ಹಿಂದೆ ಭಾರತದಲ್ಲಿ ಈ ಚಿರತೆಗಳು ಅಳಿದು ಹೋಗಿದ್ದವು.
ಎಂಟು ಚಿರತೆಗಳಲ್ಲಿ 2 ರಿಂದ 5 ವರ್ಷ ವಯಸ್ಸಿನ ಐದು ಹೆಣ್ಣು ಚೀತಾ ಮತ್ತು 4.5 ಮತ್ತು 5.5 ವರ್ಷ ವಯಸ್ಸಿನ ಮೂರು ಪುರುಷರು ಚೀತಾಗಳು ಇವೆ. " ಇದು ಭಾರತದ ವನ್ಯಜೀವಿಗಳು ಮತ್ತು ಅದರ ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಹಾಗೂ ವೈವಿಧ್ಯಗೊಳಿಸುವ ಅವರ ಪ್ರಯತ್ನಗಳ ಭಾಗವಾಗಿದೆ" ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ನೀಡಿದೆ.