ಮನ್ ಕೀ ಬಾತ್; ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಮೋದಿ ಕರೆ
ನವದೆಹಲಿ, ಜುಲೈ 31: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ವೇಳೆ ದೇಶದ ಎಲ್ಲಾ ನಿವಾಸಿಗಳು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಈ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆಯ 'ಹರ್ ಘರ್ ತಿರಂಗ' ಆಂದೋಲವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಪ್ರಧಾನಿ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್' ನ 91 ನೇ ಆವೃತ್ತಿ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ತಮ್ಮ ಭಾಷಣದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಶಹೀದ್ ಉಧಮ್ ಸಿಂಗ್ ಅವರಿಗೆ ನಮನ ಸಲ್ಲಿಸಿದರು ಮತ್ತು ನಂತರ 'ಆಜಾದಿ ಕಾ ಅಮೃತ್ ಮಹೋತ್ಸವ' ಒಂದು ಸಾಮೂಹಿಕ ಆಂದೋಲನವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
'ಹರ್ ಘರ್ ತಿರಂಗಾ' ಅಭಿಯಾನ ಯಶಸ್ವಿಗೊಳಿಸಲು ಪ್ರಲ್ಹಾದ್ ಜೋಶಿ ಕರೆ
ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಗಸ್ಟ್ 13 ರಿಂದ ಆಗಸ್ಟ್ 15ರ ನಡುವೆ 'ಹರ್ ಘರ್ ತಿರಂಗ' ಚಳವಳಿ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು.
"ನೀವು ಈ ಆಂದೋಲನದ ಭಾಗವಾಗಬೇಕು ಮತ್ತು ನಿಮ್ಮ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು" ಎಂದು ಪ್ರಧಾನಿ ಮೋದಿ ದೇಶದ ನಾಗರಿಕರಿಗೆ ಕರೆ ಕೊಟ್ಟರು.
'ಅಮೃತ ಭಾರತಿಗೆ ಕನ್ನಡದಾರತಿ' ನೆನೆದ ಪ್ರಧಾನಿ ಮೋದಿ
ಕೆಲವು ವಾರಗಳ ಹಿಂದೆ, ಕರ್ನಾಟಕದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಲಾಯಿತು. ಇದರಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ವೈವಿಧ್ಯಮಯ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳ ಕ್ಷೇತ್ರದ ಅಭಿವೃದ್ಧಿಗಾಗಿ ದೇಶದಲ್ಲಿ ದೊಡ್ಡ ಪ್ರಯತ್ನವನ್ನು ಮಾಡಲಾಗಿದೆ. ಭಾರತೀಯ ವರ್ಚುವಲ್ ಹರ್ಬೇರಿಯಂ ಅನ್ನು ಜುಲೈನಲ್ಲಿ ಪ್ರಾರಂಭಿಸಲಾಗಿದೆ. ಬೇರುಗಳೊಂದಿಗೆ ಸಂಪರ್ಕ ಸಾಧಿಸಲು ನಾವು ಡಿಜಿಟಲ್ ಜಗತ್ತನ್ನು ಹೇಗೆ ಬಳಸಬಹುದು ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು.
'ಹರ್ ಘರ್ ತಿರಂಗಾ' ಅಭಿಯಾನ: ನೀರಿನೊಳಗೆ ಧ್ವಜಾರೋಹಣದ ವಿಡಿಯೋ ವೈರಲ್
ಪ್ರೊಫೈಲ್ ಫೋಟೊದಲ್ಲಿರಲಿ ತ್ರಿವರ್ಣ ಧ್ವಜ
ಭಾರತವು ಸ್ವಾತಂತ್ಯ್ರದ 75ನೇ ವರ್ಷವನ್ನು 'ಆಜಾದಿ ಅಮೃತ ಮಹೋತ್ಸವ' ಎಂದು ಆಚರಣೆ ಮಾಡಲಾಗುತ್ತಿದೆ. 'ಹರ್ ಘರ್ ತಿರಂಗ' ಅಭಿಯಾನದ ಅಡಿಯಲ್ಲಿ ಜನರು ಆಗಸ್ಟ್ 2 ಮತ್ತು 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಚಿತ್ರವನ್ನಾಗಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಆಗಸ್ಟ್ 2 ಕ್ಕೆ ತ್ರಿವರ್ಣ ಧ್ವಜದೊಂದಿಗೆ ವಿಶೇಷ ಸಂಪರ್ಕವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಈ ದಿನ ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯ ಅವರ ಜನ್ಮದಿನ. ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಮಹಾನ್ ಕ್ರಾಂತಿಕಾರಿ ಮೇಡಂ ಕಾಮಾ ಅವರನ್ನೂ ನಾನು ನೆನಪಿಸಿಕೊಳ್ಳುತ್ತೇನೆ", ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರೈಲ್ವೆ ಬಗ್ಗೆ ಮಾಹಿತಿ
'ಆಜಾದಿ ಕಿ ರೈಲ್ಗಡಿ ಔರ್ ರೈಲ್ವೇ ನಿಲ್ದಾಣ' ಎಂಬ ಆಸಕ್ತಿದಾಯಕ ಪ್ರಯತ್ನವನ್ನು ಶೀಘ್ರದಲ್ಲೇ ಹೊರತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರೈಲ್ವೆಯ ಐತಿಹಾಸಿಕ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ದೇಶದ 24 ರಾಜ್ಯಗಳಲ್ಲಿ 75 ರೈಲು ನಿಲ್ದಾಣಗಳನ್ನು ವಿಶೇಷವಾಗಿ ಅಲಂಕರಿಸಲಾಗುವುದು ಎಂದು ಅವರು ತಿಳಿಸಿದರು. ರೈಲ್ವೆ ನಿಲ್ದಾಣಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನೀವು ಕೂಡ ಅಂತಹ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಬಹುದು ಎಂದು ಕರೆ ನೀಡಿದ್ದಾರೆ.
"ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಆಯೋಜಿಸಲಾದ ಈ ಎಲ್ಲಾ ಕಾರ್ಯಕ್ರಮಗಳಿಂದ ಒಂದು ದೊಡ್ದ ಸಂದೇಶ ನೀಡಬೇಕು. ನಾವೆಲ್ಲರೂ ದೇಶದ ಪ್ರಜೆಗಳು ನಮ್ಮ ಕರ್ತವ್ಯವನ್ನು ಸಂಪೂರ್ಣ ಭಕ್ತಿಯಿಂದ ಮಾಡಬೇಕು" ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದ ಆಟಿಕೆಗಳ ರಫ್ತಿನಲ್ಲಿ ಹೆಚ್ಚಳ
ಆಟಿಕೆಗಳ ರಫ್ತಿನಲ್ಲಿ ಭಾರತವು ಶಕ್ತಿಶಾಲಿಯಾಗುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮಾಹಿತಿ ನೀಡಿದರು. 300-400 ಕೋಟಿ ರುಪಾಯಿಗಳಷ್ಟಿದ್ದ ಭಾರತದ ಆಟಿಕೆಗಳ ರಫ್ತಿನ ವಹಿವಾಟು ಈಗ 2,600 ಕೋಟಿ ರುಪಾಯಿಗಳಿಗೆ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು. ಮತ್ತೊಂದೆಡೆ ಆಟಿಕೆಗಳ ಆಮದಿನಲ್ಲಿ ಶೇಕಡಾ 70 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು.
"ಭಾರತದ ಆಟಿಕೆ ತಯಾರಕರು ಈಗ ಭಾರತೀಯ ಪುರಾಣ, ಇತಿಹಾಸ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಆಟಿಕೆಗಳನ್ನು ತಯಾರಿಸುತ್ತಿದ್ದಾರೆ, ದೇಶದ ಎಲ್ಲೆಡೆ ಇರುವ ಆಟಿಕೆ ಕ್ಲಸ್ಟರ್ ಗಳಿಂದ, ಆಟಿಕೆ ತಯಾರಿಸುವ ಸಣ್ಣ ಉದ್ಯಮಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಸಣ್ಣ ಉದ್ಯಮಿಗಳು ತಯಾರಿಸುತ್ತಿರುವ ಆಟಿಕೆಗಳು ಈಗ ಪ್ರಪಂಚದಾದ್ಯಂತ ರಫ್ತಾಗುತ್ತಿವೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.