ಪ್ರಧಾನಿ ಮೋದಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ: ಸಮಾರಂಭಕ್ಕೆ ಶರದ್ ಪವಾರ್ಗೆ ಮುಖ್ಯ ಅತಿಥಿ
ಪುಣೆ, ಜುಲೈ 10: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ವೋಚ್ಚ ನಾಯಕತ್ವದ ಮೂಲಕ ದೇಶದ ಜನರಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಆಗಸ್ಟ್ 1 ರಂದು ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟಕರು ಸೋಮವಾರ ತಿಳಿಸಿದ್ದಾರೆ. ಈ ಕಾರ್ಯಕ್ರಮವು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದೆ.
'ಲೋಕಮಾನ್ಯ ತಿಲಕರ 103ನೇ ಪುಣ್ಯತಿಥಿಯಾದ ಆಗಸ್ಟ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ (ಹಿಂದ್ ಸ್ವರಾಜ್ ಸಂಘ) ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ' ಎಂದು ಟ್ರಸ್ಟ್ ಅಧ್ಯಕ್ಷ ದೀಪಕ್ ತಿಲಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿ ಪ್ರಧಾನ ಮಂತ್ರಿಯವರ ಸರ್ವೋಚ್ಚ ನಾಯಕತ್ವದಲ್ಲಿ ಭಾರತವು ಪ್ರಗತಿಯ ಏಣಿಯನ್ನು ಏರಿದೆ ಎಂದು ಅವರು ತಿಳಿಸಿದ್ದಾರೆ.
'ಪ್ರಧಾನಿ ಮೋದಿಯವರು ನಾಗರಿಕರಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿದ್ದಾರೆ. ಭಾರತವನ್ನು ಜಾಗತಿಕ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ್ದಾರೆ. ಅವರ ಪರಿಶ್ರಮ ಮತ್ತು ಪ್ರಯತ್ನಗಳನ್ನು ಪರಿಗಣಿಸಿ ನಾವು ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಮೋದಿಯವರ ಕೆಲಸವನ್ನು ನೋಡಿ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ನ ಟ್ರಸ್ಟಿಗಳು ಅವರನ್ನು ಈ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಆಹ್ವಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇತರ ಆಹ್ವಾನಿತರಲ್ಲಿ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಸೇರಿದ್ದಾರೆ.
ಇತ್ತೀಚೆಗಷ್ಟೇ ಶರದ್ ಪವಾರ್ ಅವರ ಎನ್ಸಿಪಿಯಿಂದ ಸುಮಾರು ನಲವತ್ತು ಶಾಸಕರು ಹೊರಹೋಗಿದ್ದಾರೆ. ಅವರ ಸಂಬಂಧಿ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದಾರೆ. ಬಿಜೆಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದೊಂದಿಗೆ ತಮ್ಮ ಪಕ್ಷದ ನಾಯಕರು ಸಖ್ಯ ಬೆಳೆಸಿರುವುದು ಶರದ್ ಪವಾರ್ ಅವರಿಗೆ ಭಾರೀ ಆಕ್ರೋಶ ತರಿಸಿದೆ.
ಮಹಾರಾಷ್ಟ್ರ ಸರ್ಕಾರದ ಜೊತೆ ಸಖ್ಯ ಬೆಳೆಸಿರುವ ನಾಯಕರನ್ನು ಎನ್ಸಿಪಿಯಿಂದ ವಜಾಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಯವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶರದ್ ಪವಾರ್ ಭಾಗವಹಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications