'ಸಾಗರ ವಿಮಾನ'ದಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಪ್ರಯಾಣ
Recommended Video

ಅಹಮದಾಬಾದ್, ಡಿಸೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಇಂದು 'ಸಾಗರ ವಿಮಾನ' (ಸೀ ಪ್ಲೇನ್) ದಲ್ಲಿ ಅಹಮದಾಬಾದ್ ನ ಸಾಬರಮತಿ ನದಿಯಿಂದ ದರೋಯ್ ಅಣೆಕಟ್ಟಿನವರೆ ಐತಿಹಾಸಿಕ ಪ್ರಯಾಣ ನಡೆಸಿದರು.
ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು ನಡೆಯಲಿದ್ದು, ಬಹಿರಂಗ ಪ್ರಚಾರ ಇಂದು ಕೊನೆಗೊಳ್ಳಲಿದೆ. ಹೀಗಾಗಿ ಇಂದು ರೋಡ್ ಶೋ, ಸಾಗರ ವಿಮಾನ ಪ್ರಯಾಣದ ಮೂಲಕ ಮೋದಿ ಅಂತಿಮ ದಿನದ ಪ್ರಚಾರ ನಡೆಸಿದರು.
11 ಗಂಟೆಗೆ ಸಾಬರಮತಿ ನದಿಯಿಂದ 'ಸಾಗರ ವಿಮಾನ' ಹತ್ತಿದ ನರೇಂದ್ರ ಮೋದಿ 12 ಗಂಟೆಗೆ ದರೋಯ್ ಅಣೆಕಟ್ಟಿನಲ್ಲಿ ಬಂದು ಇಳಿದರು.
|
ದರೋಯ್ ನಿಂದ ರೋಡ್ ಶೋ
ದರೋಯ್ ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಬನಸ್ಕಾಂತದ ಅಂಬಾಜಿ ದೇವಸ್ಥಾನದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆಯ ಇಕ್ಕೆಲದಲ್ಲೂ ನೆರೆದಿದ್ದ ಅಸಂಖ್ಯಾತ ಜನರತ್ತ ಪ್ರಧಾನಿ ಕೈ ಬೀಸುತ್ತಾ ಸಾಗಿದರು.
|
ಅಂಬಾಜಿ ದೇವಸ್ಥಾನಕ್ಕೆ ಭೇಟಿ
ದರೋಯ್ ಅಣೆಕಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿ ಅಂಬಾಜಿ ದೇವಸ್ಥಾನಕ್ಕೆ ರಸ್ತೆ ಮಾರ್ಗವಾಗಿ ತೆರಳಿದರು. ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
|
ಐತಿಹಾಸಿಕ ಕ್ಷಣ
"ಭಾರತದ ಯಾವುದೇ ಪ್ರದೇಶದಲ್ಲಿ ಸಾಗರ ವಿಮಾನ ಲ್ಯಾಂಡ್ ಆದ ಮೊದಲ ಘಟನೆ ಇದಾಗಿದೆ" ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
|
ವಿಮಾನವೇರಿದ ಮೋದಿ
ಅಹಮದಾಬಾದ್ ನಗರದಲ್ಲಿ ಇಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಕಾನೂನು ಸುವ್ಯವಸ್ಥೆಯ ಕಾರಣ ಮುಂದಿಟ್ಟು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಇದಕ್ಕೆ ಪರ್ಯಾಯವಾಗಿ ಮೋದಿ ಜನರ ಗಮನ ಸೆಳೆಯಲು ಸಾಗರ ವಿಮಾನ ಹತ್ತಿದರು.

ದೇಶಾದ್ಯಂತ ಸಾಗರ ವಿಮಾನ
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ "ನಾವು ಎಲ್ಲಾ ಕಡೆಯೂ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ವಾಟರ್ ವೇ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ದೇಶದಾದ್ಯಂತ 106 ವಾಟರ್ ವೇಗಳ ಬಗ್ಗೆ ಯೋಜನೆ ರೂಪಿಸಿದ್ದೇವೆ," ಎಂದು ಹೇಳಿದ್ದಾರೆ.

ಬಹಿರಂಗ ಪ್ರಚಾರ ಅಂತ್ಯ
ಇದೇ ಡಿಸೆಂಬರ್ 14ರಂದು ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ 93 ಸ್ಥಾನಗಳಿಗೆ ನಡೆಯಲಿದೆ. ಹೀಗಾಗಿ 48 ಗಂಟೆಗಳ ಮೊದಲು ಅಂದರೆ ಇಂದು ಸಂಜೆಗೆ ಬಹಿರಂಗ ಪ್ರಚಾರ ಕೊನೆಯಾಗಲಿದೆ. ಈಗಾಗಲೇ ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆದಿದ್ದು ಫಲಿತಾಂಶ ಡಿಸೆಂಬರ್ 18ರಂದು ಹೊರ ಬೀಳಲಿದೆ.












Click it and Unblock the Notifications