ಬಿಜೆಪಿಗೆ 1,000 ರೂಪಾಯಿ ದೇಣಿಗೆ ನೀಡಿದ ಪ್ರಧಾನಿ ಮೋದಿ
ನವದೆಹಲಿ, ಡಿಸೆಂಬರ್ 25: ಭಾರತೀಯ ಜನತಾ ಪಕ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ 1,000 ರೂಪಾಯಿ ದೇಣಿಗೆ ನೀಡಿದ್ದಾರೆ. ಆ ಮೂಲಕ ಪಕ್ಷಕ್ಕೆ ಸಣ್ಣ ಪ್ರಮಾಣದ ದೇಣಿಗೆಯನ್ನು ನೀಡುವಂತೆ ಬೆಂಬಲಿಗರಲ್ಲಿ ಕೇಳಿಕೊಂಡಿದ್ದಾರೆ. ತಾವು ಭಾರತೀಯ ಜನತಾ ಪಕ್ಷದ ನಿಧಿಗೆ 1,000 ರೂಪಾಯಿ ದೇಣಿಗೆ ನೀಡಿದ್ದೇನೆ ಎಂದು ಟ್ವೀಟ್ನಲ್ಲಿ ಹೇಳಿರುವ ಪ್ರಧಾನಿ ಮೋದಿ, "ಬಿಜೆಪಿಯನ್ನು ಬಲಪಡಿಸಲು ಸಹಾಯ ಮಾಡಿ..." ಎಂದು ಬೆಂಬಲಿಗರಲ್ಲಿ ಕೇಳಿಕೊಂಡಿದ್ದಾರೆ.
"ನಾನು ಭಾರತೀಯ ಜನತಾ ಪಕ್ಷದ ನಿಧಿಗೆ 1,000 ರೂಪಾಯಿ ದೇಣಿಗೆ ನೀಡಿದ್ದೇನೆ. ದೇಶವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿರಿಸುವ ನಮ್ಮ ಆದರ್ಶ ಮತ್ತು ನಮ್ಮ ಕಾರ್ಯಕರ್ತರ ಆಜೀವ ನಿಸ್ವಾರ್ಥ ಸೇವೆಯ ಸಂಸ್ಕೃತಿಯು ನಿಮ್ಮ ಸೂಕ್ಷ್ಮ ದೇಣಿಗೆಯಿಂದ ಮತ್ತಷ್ಟು ಬಲಗೊಳ್ಳುತ್ತದೆ. ಬಿಜೆಪಿಯನ್ನು ಬಲಪಡಿಸಲು ಸಹಾಯ ಮಾಡಿ. ಭಾರತವನ್ನು ಬಲಿಷ್ಠಗೊಳಿಸಲು ಸಹಾಯ ಮಾಡಿ,'' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಿಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ ದೇಣಿಗೆಯ ರಸೀದಿಯಲ್ಲಿ ಇಮೇಲ್, ಮೊಬೈಲ್ ಸಂಖ್ಯೆ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಗೌಪ್ಯತೆ ಕಾರಣಗಳಿಗಾಗಿ ಮರೆ ಮಾಡಲಾಗಿದೆ. ದೇಣಿಗೆ ಉದ್ದೇಶದಲ್ಲಿ ನೀಡುವ ಹಣಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ.

ಬಿಜೆಪಿಗೆ 1,000 ದೇಣಿಗೆ ನೀಡಿದ ಜೆಪಿ ನಡ್ಡಾ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ನಿಧಿಗೆ 1,000 ರೂಪಾಯಿ ದೇಣಿಗೆ ನೀಡಿದ್ದಾರೆ. "ನಮೋ ಆ್ಯಪ್ನ 'ದೇಣಿಗೆ' ಮಾದರಿ ಬಳಸಿಕೊಂಡು ಬಿಜೆಪಿಯನ್ನು ಬಲಪಡಿಸಲು ನಾನು ನನ್ನದೇ ಆದ ವಿನಮ್ರ ಕೊಡುಗೆಯನ್ನು ನೀಡಿದ್ದೇನೆ. ರೆಫರಲ್ ಕೋಡ್ ಬಳಸಿ, ಈ ಸಾಮೂಹಿಕ ಆಂದೋಲನದಲ್ಲಿ ನೀವು, ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಸಹ ಸಂಪರ್ಕಿಸಬಹುದು ಮತ್ತು ನಿಸ್ವಾರ್ಥವಾಗಿ ಜನರ ಸೇವೆಯನ್ನು ಮುಂದುವರಿಸಲು ಬಿಜೆಪಿಗೆ ಅಧಿಕಾರ ನೀಡಬಹುದು," ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
ಸೂಕ್ಷ್ಮ ದೇಣಿಗೆ ಪ್ರಮಾಣ?:
ಭಾರತೀಯ ಜನತಾ ಪಕ್ಷಕ್ಕೆ ನೀಡುವ ಸೂಕ್ಷ್ಮ ದೇಣಿಗೆಗಳು 5 ರೂಪಾಯಿಯಿಂದ 1,000 ರೂಪಾಯಿವರೆಗೆ ಇರಬಹುದು ಎಂದು ಜೆಪಿ ನಡ್ಡಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ವಯಂಪ್ರೇರಿತ ನಿಧಿ ಸಂಗ್ರಹ ಅಭಿಯಾನವು ದೀನ್ ದಯಾಳ್ ಜಿಯವರ ಪುಣ್ಯ ತಿಥಿಯಾದ ಫೆಬ್ರವರಿ 22 ರವರೆಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications