Cabinet Reshuffle: ಚುನಾವಣಾ ಹೊಸ್ತಿಲಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ!? ಯಾರಿಗೆಲ್ಲ ಸ್ಥಾನ?
ದೆಹಲಿ, ಜೂನ್ 30: ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಹಾಗೂ ಸಚಿವರ ಕಾರ್ಯ ವೈಖರಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರಕಾರವು ಈ ಬಾರೀ ಸಚಿವ ಸಂಪುಟ ಪುನಾರಚನೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಜುಲೈ 3 ರಂದು ಹಾಲಿ ಸಚಿವರುಗಳ ಸಂಪುಟ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ ಈ ಸಭೆಯಲ್ಲಿ ಸಚಿವರ ಕಾರ್ಯವೈಖರಿಗಳನ್ನು ಆಧರಿಸಿ ಕೆಲವರನ್ನು ಕೈಬಿಡುವ ಸಾಧ್ಯತೆ ಇದೆ. ಇನ್ನೂ ಕೇಂದ್ರ ಸಚಿವ ಸಂಪುಟದಲ್ಲಿ ಕೆಲ ಹೊಸಬರಿಗೂ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಚುನಾವಣೆ ನಡೆಯುತ್ತಿರುವ ರಾಜ್ಯಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೂನ್ 28 ರಂದು ಪ್ರಧಾನಿ ಮೋದಿ ಅವರು ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರೊಂದಿಗೆ ಮ್ಯಾರಥಾನ್ ಸಭೆಗಳನ್ನು ನಡೆಸಿದರು. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ಗಢದಲ್ಲಿ ಚುನಾವಣೆಗಳು ನಡೆಯಲಿದ್ದು, ಮುಂದಿನ ಏಪ್ರಿಲ್ ಅಥವಾ ಮೇ ನಲ್ಲಿ ಲೋಕಸಭೆಗೂ ಚುನಾವಣೆ ನಡೆಯಲಿದೆ. ಇನ್ನೂ ಈ ಎಲ್ಲಾ ಚುನಾವಣೆಗೆ ಪಕ್ಷವು ಸಜ್ಜಾಗುತ್ತಿರುವಾಗ ಬಿಜೆಪಿ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದು, ರಾಜ್ಯ ಮಟ್ಟದಲ್ಲಿ ಸೇರಿದಂತೆ ಸರ್ಕಾರ ಮತ್ತು ಬಿಜೆಪಿ ಸಂಘಟನೆಯಲ್ಲಿ ಬದಲಾವಣೆಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಇನ್ನೂ ಜುಲೈ ಮೂರನೇ ವಾರದಲ್ಲಿ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮೊದಲೇ ಮೋದಿ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಚುನಾವಣೆ ನಡೆಯಲಿರುವ ಛತ್ತೀಸ್ಗಢದ ಪಕ್ಷದ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಜೆಪಿ ಎಂಟು ಸಂಸದರನ್ನು ಹೊಂದಿದ್ದು, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಡು ಪ್ರತಿಸ್ಪರ್ಧಿ ಟಿಎಸ್ ಸಿಂಗ್ ದೇವ್ ಅವರನ್ನು ಉಪನಾಯಕರನ್ನಾಗಿ ನೇಮಿಸುವ ಮೂಲಕ ಕಾಂಗ್ರೆಸ್ ಒಳಗಿನ ಭಿನ್ನಾಭಿಪ್ರಾಯಗಳನ್ನು ಸುಗಮಗೊಳಿಸುತ್ತಿದೆ.
ಇನ್ನೊಂದೆಡೆ ಕೇರಳದ ಖ್ಯಾತ ನಟ ಗೋಪಿ ಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಲು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋಲಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕೆಲ ಕೇಂದ್ರ ಸಚಿವರುಗಳಿಗೆ ಕೊಕ್ ನೀಡಿ ಕೆಲವು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಜನವರಿಯಲ್ಲಿಯೂ ಇದೇ ರೀತಿಯ ಊಹಾಪೋಹಗಳು ಇದ್ದವು. ಜನವರಿ 16 ಮತ್ತು 17 ರಂದು ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ನಂತರ ಶೀಘ್ರದಲ್ಲಿಯೇ ಪುನರ್ ರಚನೆಯಾಗಬಹುದು ಎಂಬ ಗುಸುಗುಸು ಇತ್ತು. ಆದರೆ ಅಂತಹದ್ದೇನೂ ಆಗಲಿಲ್ಲ.
ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಾತಿ ಸಮೀಕರಣ ಹಾಗೂ ಇತರೆ ಎಲ್ಲಾ ಸಮುದಾಯಗಳ ಮತಗಳನ್ನು ಸೆಳೆಯುವ ನಾಯಕರಿಗೆ ಮಣೆ ಹಾಕಿದರೂ ಆಶ್ಚರ್ಯವಿಲ್ಲ ಆದರೆ ಎಂದಿನಂತೆ ನರೇಂದ್ರ ಮೋದಿ ಹಾಗೂ ಷಾ ಸೂತ್ರಗಳಲ್ಲಿ ಯಾರ್ಯಾರಿಗೆ ಅವಕಾಶ ಸಿಗಲಿದೆ, ಯಾರ್ಯಾರು ಸಂಪುಟದಿಂದ ಹೊರಹೋಗಲಿದ್ದಾರೆ ಎಂಬುದನ್ನ ಕಾದು ನೋಡ್ಬೇಕಾಗಿದೆ.












Click it and Unblock the Notifications