ರಾಜದ್ರೋಹದ ಕಾನೂನಿನ ಪರಾಮರ್ಶೆ ಕೋರಿ ಅರ್ಜಿ
ನವದೆಹಲಿ, ಆಗಸ್ಟ್ 17 : ರಾಜದ್ರೋಹದ ಕಾನೂನುಗಳ ಬಗ್ಗೆ ಪರಾಮರ್ಶೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯೊಂದು ಈ ಕುರಿತು ಅರ್ಜಿ ಸಲ್ಲಿಸಿದ್ದು, ವಿಚಾರಣೆಗೆ ಬರುವ ಸಾಧ್ಯತೆ ಇದೆ.
Common Cause ಎನ್ನುವ ಎನ್ಜಿಓ ಬುಧವಾರ ಈ ಕುರಿತು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದೆ. ದೇಶದಲ್ಲಿ ರಾಜದ್ರೋಹದ ಬಗ್ಗೆ ಇರುವ ಕಾನೂನುಗಳು ದುರುಪಯೋಗವಾಗುತ್ತಿವೆ. ಆದ್ದರಿಂದ, ಈ ಕಾನೂನುಗಳ ಬಗ್ಗೆ ಪರಾಮರ್ಶೆ ನಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.[ಆಮ್ನೆಸ್ಟಿ ಇಂಟರ್ ನ್ಯಾಷನಲ್ ಪರಿಚಯ]
ಹಲವು ಹೋರಾಟಗಾರರು ಮತ್ತು ಸಂಸ್ಥೆಗಳ ಮೇಲೆ ರಾಜದ್ರೋಹದ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಆದ್ದರಿಂದ, ಕಾನೂನಿನ ಕುರಿತು ಪರಾಮರ್ಶೆ ನಡೆಯಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.[ರಾಜದ್ರೋಹದ ಆರೋಪದಲ್ಲಿ ವಿಡಿಯೋ ಪ್ರಮುಖ ಸಾಕ್ಷಿ]
ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ವಿರುದ್ಧ ಬೆಂಗಳೂರು ಪೊಲೀಸರು ರಾಜದ್ರೋಹ ಪ್ರಕರಣ ದಾಖಲಿಸಿದ ಒಂದು ದಿನದ ಬಳಿಕ ಈ ಅರ್ಜಿ ಸಲ್ಲಿಕೆಯಾಗಿದೆ. ಸಂಸ್ಥೆ ಆಗಸ್ಟ್ 13ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದೆ.
ಕೆಲವು ತಿಂಗಳ ಹಿಂದೆ ದೆಹಲಿಯ ಜೆಎನ್ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ರಾಜದ್ರೋಹದ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿತ್ತು. ಐಪಿಸಿ ಸೆಕ್ಷನ್ 124-ಎ ಅಡಿಯಲ್ಲಿ ರಾಜದ್ರೋಹ ಪ್ರಕರಣ ದಾಖಲು ಮಾಡಲಾಗುತ್ತದೆ.