ಸಂಸತ್ತಿನಲ್ಲಿ ಭದ್ರತಾ ಲೋಪ: 8 ಸಿಬ್ಬಂದಿ ಅಮಾನತುಗೊಳಿಸಿದ ಲೋಕಸಭಾ ಕಾರ್ಯಲಯ
ದೆಹಲಿ, ಡಿಸೆಂಬರ್ 14: ಸಂಸತ್ತಿನಲ್ಲಿ ಬುಧವಾರ ಭದ್ರತೆಯಲ್ಲಿ ಭಾರೀ ಲೋಪವಾಗಿತ್ತು, ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಸಂಸದರಿದ್ದ ಸ್ಥಳಕ್ಕೆ ಆಗಮಿಸಿ ಅಶ್ರುವಾಯು ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ 8 ಸಿಬ್ಬಂದಿಯನ್ನು ಲೋಕಸಭೆ ಕಾರ್ಯಾಲಯ ಅಮಾನತುಗೊಳಿಸಿದೆ.
ಅಮಾನತುಗೊಂಡ ಸಿಬ್ಬಂದಿಯನ್ನು ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಎಂದು ಗುರುತಿಸಲಾಗಿದೆ. ಸಂಸತ್ತಿನ ಭಯೋತ್ಪಾದನಾ ದಾಳಿಯ 22 ನೇ ವಾರ್ಷಿಕೋತ್ಸವದ ಶೂನ್ಯ ವೇಳೆಯಲ್ಲಿ ಇಬ್ಬರು ಒಳನುಗ್ಗುವವರು ಸಂದರ್ಶಕರ ಗ್ಯಾಲರಿಯಿಂದ ಸದನದ ಒಳಗೆ ಜಿಗಿದಿದ್ದು, ಲೋಕಸಭೆಯೊಳಗೆ ದೊಡ್ಡ ಭದ್ರತಾ ಲೋಪ ಸಂಭವಿಸಿದೆ. ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂಬುವವರು ಹಳದಿ ಬಣ್ಣದ ಅಶ್ರುವಾಯು ಸಿಡಿಸಿದ್ದರು.

ಏಕಕಾಲದಲ್ಲಿ, ಒಬ್ಬ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳು, ಹಳದಿ ಬಣ್ಣದ ಅಶ್ರುವಾಯು ಎರಚಿದರು ಮತ್ತು ಸಂಸತ್ತಿನ ಆವರಣದ ಹೊರಗೆ "ತನಾಶಾಹಿ ನಹೀ ಚಲೇಗಿ" ಎಂದು ಘೋಷಣೆಗಳನ್ನು ಕೂಗಿದರು. ಈ ಇಬ್ಬರು ಆರೋಪಿಗಳನ್ನು ಅಮೋಲ್ ಶಿಂಧೆ ಮತ್ತು ನೀಲಮ್ ಎಂದು ಗುರುತಿಸಲಾಗಿದ್ದು, ಈ ನಾಲ್ವರು ಘಟನೆಯನ್ನು ಯೋಜಿಸಿದ ಆರು ಜನರ ಗುಂಪಿನ ಭಾಗವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಂಸತ್ತಿನ ಭದ್ರತಾ ಲೋಪದ ವಿಷಯದ ಬಗ್ಗೆ ಸರ್ಕಾರದಿಂದ ಹೇಳಿಕೆ ನೀಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಎತ್ತಿದರು. ಸಂಸತ್ತಿನ ಸಂಕೀರ್ಣದ ಭದ್ರತೆಯು ಲೋಕಸಭೆ ಸಚಿವಾಲಯದ ಜವಾಬ್ದಾರಿಯಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಇನ್ನೂ ಎಲ್ಲರೂ ಇದನ್ನು ಖಂಡಿಸಿದ್ದಾರೆ. ನಾವು ಜಾಗರೂಕರಾಗಿರಬೇಕು. ಗೊಂದಲ ಸೃಷ್ಟಿಸುವವರಿಗೆ ಪಾಸ್ ನೀಡಬಾರದು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸದನಕ್ಕೆ ತಿಳಿಸಿದರು.

ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ (MHA) ತನಿಖೆಗೆ ಆದೇಶಿಸಿದೆ. ಸಿಆರ್ಪಿಎಫ್ನ ಡಿಜಿ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ಇತರ ಭದ್ರತಾ ಏಜೆನ್ಸಿಗಳ ಸದಸ್ಯರು ಮತ್ತು ತಜ್ಞರೊಂದಿಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ.












Click it and Unblock the Notifications