ಪಾಕ್ ಸ್ಪೈಗಳ ಮಾಹಿತಿ ಕಲೆ ಹಾಕುವ ಸಂಚು ಬಹಿರಂಗ
ನವದೆಹಲಿ, ಜೂನ್ 2: ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ತೆರಳುವಂತೆ ಗೃಹ ಸಚಿವಾಲಯ ನಿರ್ದೇಶಿಸಿರುವ ಸುದ್ದಿ ಓದಿರಬಹುದು. ಈಗ ಈ ಗೂಢಚಾರಿಗಳು ಹೂಡಿದ್ದ ಸಂಚಿನ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಮುಖ್ಯವಾಗಿ ಇವರಿಬ್ಬರು ರೈಲ್ವೆ ಅಧಿಕಾರಿಗಳ ಮೂಲಕ ಭಾರತೀಯ ಸೇನೆ ತುಕಡಿ ಸಂಚಾರದ ಮಾಹಿತಿಯನ್ನು ಕಲೆ ಹಾಕಲು ಯತ್ನಿಸುತ್ತಿದ್ದರು ಎಂಬ ಮಾಹಿತಿ ಬಹಿರಂಗಗೊಂಡಿದೆ.
ಒನ್ಇಂಡಿಯಾಕ್ಕೆ ಲಭ್ಯವಿರುವ ಮಾಹಿತಿಯಂತೆ, ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಬಿದ್ ಹುಸೇನ್ ಹಾಗೂ ಮೊಹಮ್ಮದ್ ತಾಹೀರ್ ಇಬ್ಬರು ತಮ್ಮದೇ ಆದ ಜಾಲವನ್ನು ರೂಪಿಸಿದ್ದರು. ರೈಲ್ವೆ ಅಧಿಕಾರಿಗಳನ್ನು ಬಳಸಿಕೊಂಡು ಭಾರತೀಯ ಸೇನೆಯ ವಾಹನ ಮಾಹಿತಿ ಕಲೆ ಹಾಕಿದ್ದರು. ಇತ್ತೀಚೆಗೆ ಮಾಹಿತಿ ಕಲೆಹಾಕಲು ಹೊರಗೆ ಬಂದಿದ್ದಾಗ ಗುಪ್ತಚರ ಇಲಾಖೆ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದಿದ್ದಾರೆ.
ಮಿಲಿಟರಿ ಗುಪ್ತಚರ ಇಲಾಖೆ, ದೆಹಲಿ ಸ್ಪೆಷಲ್ ಸೆಲ್, ಗುಪ್ತಚರ ಇಲಾಖೆ(ಐಬಿ) ಜಂಟಿ ಕಾರ್ಯಾಚರಣೆಯಲ್ಲಿ ಈ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು. ಇಬ್ಬರ ಬಳಿ ನಕಲಿ ಆಧಾರ್ ಕಾರ್ಡ್, ಸ್ಥಳೀಯ ನಿವಾಸಿಗಳು ಎನ್ನಲು ಬೇಕಾದ ಎಲ್ಲಾ ದಾಖಲೆಗಳಿರುವುದು ಕಂಡು ಬಂದಿದೆ. ನಕಲಿ ದಾಖಲೆಗಳನ್ನು ಹೊಂದಿದ್ದಲ್ಲದೆ, ಪಾಕ್ ಪರ ಬೇಹುಗಾರಿಕೆ ನಡೆಸಿದ ಇವರನ್ನು persona-non granta ಅಡಿಯಲ್ಲಿ ರಾಯಭಾರ ಕಚೇರಿ ಹುದ್ದೆಯಿಂದ ಕೆಳಗಿಳಿಸಿ ಅವರ ದೇಶಕ್ಕೆ ಮರಳಲು ಸೂಚಿಸಲಾಗಿದೆ

ಕರೋಲ್ ಬಾಗ್ ನಲ್ಲಿ ಸಿಕ್ಕಿಬಿದ್ದ ಇಬ್ಬರು ಅಧಿಕಾರಿಗಳು
42 ವರ್ಷ ವಯಸ್ಸಿನ ಅಬಿದ್, 36 ವರ್ಷದ ಜಾವೇದ್ ಅಖ್ತರ್ ಇಬ್ಬರು ಅಧಿಕಾರಿಗಳ ಮೇಲೆ ಗುಮಾನಿ ಬಂದರೂ ಸೂಕ್ತ ದಾಖಲೆ ಇಲ್ಲದೆ ಆರೋಪ ಮಾಡುವಂತಿರಲಿಲ್ಲ. ಕಳೆದ ಒಂದು ವರ್ಷದಿಂದ ಭಾರತದ ಬೇಹುಗಾರಿಕೆ, ಗುಪ್ತಚರ ಸಂಸ್ಥೆ ಅಧಿಕಾರಿಗಳು ಇವರಿಬ್ಬರ ಮೇಲೆ ಕಣ್ಣಿಟ್ಟು, ಚಲನವಲನಗಳನ್ನು ಪರಿಶೀಲಿಸುತ್ತಿದ್ದರು. ಇತ್ತೀಚೆಗೆ ನಕಲಿ ದಾಖಲೆ(ಗುರುತಿನ ಚೀಟಿ, ಆಧಾರ್ ಇತ್ಯಾದಿ) ಬಳಸಿ ಕರೋಲ್ ಬಾಗ್ ನಲ್ಲಿ ವ್ಯವಹಾರ ನಡೆಸುವಾಗ ಸಿಕ್ಕಿಬಿದ್ದಿದ್ದರಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.

ವೀಸಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು
ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಇಬ್ಬರು ವೀಸಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿಚಾರಣೆ ವೇಳೆ ಪಾಕಿಸ್ತಾನದ ಐಎಸ್ಐ ಇಶಾರೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ. ಅನೇಕ ನಕಲಿ ಐಡಿ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ಮಾಹಿತಿ ಕಲೆ ಹಾಕಲು ಗೌತಮ್ ಎಂಬ ಹೆಸರಿನಲ್ಲಿ ಅಬಿದ್ ಕಣಕ್ಕಿಳಿಯುತ್ತಿದ್ದ, ಮಾಧ್ಯಮವೊಂದರಲ್ಲಿ ನನ್ನ ಸೋದರ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಹೇಳಿ, ರೈಲ್ವೆ ಇಲಾಖೆ ಅಧಿಕಾರಿಗಳ ಸ್ನೇಹ ಸಂಪಾದಿಸಿದ್ದ.

ಯಾವ ಮಾಹಿತಿ ಕಲೆ ಹಾಕಿದ್ರು?
ಮಾಧ್ಯಮದಲ್ಲಿ ಬಳಸಲು ಬೇಕಾದ ಮಾಹಿತಿ ಸಾಕು ಎನ್ನುತ್ತಾ ಭಾರತೀಯ ಸೇನಾ ಸಿಬ್ಬಂದಿ ರೈಲ್ವೆ ಮೂಲಕ ಎಲ್ಲೆಲ್ಲಿ ಹೋಗುತ್ತಾರೆ ಎಂಬುದರ ಮಾಹಿತಿ ಕೇಳಿ ಪಡೆದುಕೊಂಡಿದ್ದ. ರೈಲ್ವೆ ಬಳಸಿ ಭಾರತೀಯ ಸೇನೆ ಎಲ್ಲೆಲ್ಲಿ ಸಂಚರಿಸುತ್ತದೆ ಯಾವ ಯಾವ ರೀತಿ ಸಂಕಷ್ಟ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಮಾಧ್ಯಮದಲ್ಲಿ ವರದಿ ಮಾಡಲು ಮಾಹಿತಿ ಬೇಕು ಎಂದು ಗೌತಮ್ ನಂಬಿಸಿದ್ದ ಎನ್ನಲಾಗಿದೆ. ಯಾರಿಗೂ ತಿಳಿಯದಂಥ ಗುಪ್ತ ಸಮಾಚಾರ, ಹೆಚ್ಚೆಚ್ಚು ಮಾಹಿತಿ ನೀಡಿದರೆ ಅದಕ್ಕೆ ತಕ್ಕಂತೆ ಹಣ ನೀಡುವುದಾಗಿ ಡೀಲ್ ಮಾಡಿಕೊಂಡಿದ್ದು ಈಗ ಬಹಿರಂಗವಾಗಿದೆ.

ಭಾರತೀಯ ಸೇನಾ ಸಿಬ್ಬಂದಿಗೂ ಆಮಿಷ
ಸೇನಾ ಸಿಬ್ಬಂದಿಯೊಡನೆ ಸಂಪರ್ಕ ಬೆಳೆಸಿದ ಅಬಿದ್ ಮಾತಾಡಿದ ಸಂಭಾಷಣೆ ವಿವರ ಸಿಕ್ಕಿದೆ:
ಅಬಿದ್: ನೀವು 1705RPM ನಲ್ಲಿ ನಿಯೋಜಿತರಾಗಿದ್ದೀರಾ?
ಸಿಬ್ಬಂದಿ : ಇಲ್ಲಾ ನಾನು ಹೊಸದಾಗಿ ಸೇರ್ಪಡೆಗೊಂಡಿದ್ದೇನೆ.
ಅಬಿದ್: ಓಹ್ ನನ್ನ ಗೆಳೆಯರೊಬ್ಬರು ಇದ್ದಾರೆ, ಅವರ ಹೆಸರು ರಾಯ್, ನಾನೀಗ ಹೊಸ ಸಿಮ್ ತಗೊಂಡೆ ಹಾಗಾಗಿ ಹೆಸರು ಡಿಸ್ ಪ್ಲೇ ಆಗಲಿಲ್ಲ, ನೀವು 326ನಲ್ಲಿರಬೇಕು ಅಲ್ವಾ?
ಸಿಬ್ಬಂದಿ: ಹೌದು, ದೆಹಲಿ, ನೀವು ಎಲ್ಲಿದ್ದೀರಾ?
ಅಬಿದ್: ನಾನು ದೆಹಲಿಯ 106 ..
ಹೀಗೆ ಮಾತನಾಡುವ ಅಬಿದ್ ತನಗೆ ದೆಹಲಿ, ನೋಯ್ಡಾದಲ್ಲಿ ಸ್ವಂತ ಮನೆ ಇದೆ ಎನ್ನುತ್ತಾನೆ. ತನ್ನ ಸ್ನೇಹಿತ ರಾಯ್ ಎಂಬಾತನ ಬಗ್ಗೆ ಹೇಳುತ್ತಾನೆ. ವಾಟ್ಸಾಪ್ ಬಳಸುತ್ತಿಲ್ವ ಎಂದು ಪ್ರಶ್ನಿಸುತ್ತಾನೆ.
ಸಿಬ್ಬಂದಿ: ಇಲ್ಲ ನಾವು ವಾಟ್ಸಾಪ್ ಬಳಸುವಂತಿಲ್ಲ.
ಅಬಿದ್: ನಾವು ಇಲ್ಲಿ ಬಳಸುತ್ತಿದ್ದೇವೆ. ನಾನು ತಡೆಯುವುದಿಲ್ಲ .
ಸಿಬ್ಬಂದಿ: ಚೆಕ್ ಮಾಡ್ತೀನಿ ಸಾರ್.
ಅಬಿದ್: ಸರಿ ಮತ್ತೆಸಿಗೋಣ ಎಂದಾದರೂ
ಸಿಬ್ಬಂದಿ: ಖಂಡಿತ ಸಿಗೋಣ.












Click it and Unblock the Notifications