ಪಾಕಿಸ್ತಾನ ಸೇನಾ ಮುಖ್ಯಸ್ಥನ ಮಗನಿಗೆ 'ಪದ್ಮಶ್ರೀ' ನೀಡಿದ ಕೇಂದ್ರ: ಆಕ್ರೋಶ
ನವದೆಹಲಿ, ಜನವರಿ 28: ಎರಡು ದಿನದ ಹಿಂದೆ ಕೇಂದ್ರ ಸರ್ಕಾರ ಪ್ರಕಟಿಸಿದ 'ಪದ್ಮಶ್ರೀ' ಪ್ರಶಸ್ತಿ ಪಟ್ಟಿಯು ವಿವಾದ ಸೃಷ್ಟಿಸಿದೆ.
Recommended Video
ಕೆಲವು ಅತ್ಯುತ್ತಮ ಆಯ್ಕೆಯ ನಡುವೆಯು ಕೆಲವು ಕಳಪೆ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆ ಆಗಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ. ಈ ಚರ್ಚೆಯ ಮೂಲ ಗಾಯಕ, ಸಂಗೀತ ನಿರ್ದೇಶಕ ಅದ್ನಾನ್ ಸಮಿ.
ಅದ್ನಾನ್ ಸಮಿ ಅವರಿಗೆ ಕೇಂದ್ರ ಸರ್ಕಾರವು 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ ಅದ್ನಾನ್ ಸಮಿ ಭಾರತದವರಲ್ಲ, ಇದಿಷ್ಟೆ ಆಗಿದ್ದರೆ ಸಮಸ್ಯೆ ಏನೂ ಇರಲಿಲ್ಲ, ಆದರೆ ಅವರು ಭಾರತದ ವಿರುದ್ದ ಹೋರಾಡಿದ ಪಾಕಿಸ್ತಾನ ಸೇನೆಯ ಮುಖ್ಯಸ್ಥರ ಮಗ.
ಭಾರತದ ವಿರುದ್ಧ ಯುದ್ಧದಲ್ಲಿ ಪಾಲ್ಗೊಂಡು ಭಾರತದ ಸೈನಿಕರನ್ನು ಹತಗೊಳಿಸಿದ ವ್ಯಕ್ತಿ. ಭಾರತದ ವಿರುದ್ಧ ಪಾಕ್ ವಾಯು ಸೇನೆಯನ್ನು ಮುನ್ನಡೆಸಿದ್ದ ಅರ್ಷದ್ ಸಮಿ ಖಾನ್ ಮಗನೇ ಅದ್ನಾನ್ ಸಮಿ.

ಪಾಕಿಸ್ತಾನದ ರಾಷ್ಟ್ರೀಯ ನಾಯಕ ಆಗಿದ್ದ ಅರ್ಷದ್
ಅರ್ಷದ್ ಸಮಿ ಖಾನ್ ಪಾಕಿಸ್ತಾನ ವಾಯುಸೇನೆಯ ಹೆಮ್ಮೆಯ ಸೈನಿಕ. ಪಾಕಿಸ್ತಾನದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿ 'ಸಿತಾರ-ಎ-ಜೌರತ್' ಸಹ ಅರ್ಷದ್ ಸಮಿ ಖಾನ್ ಪಡೆದಿದ್ದಾರೆ. ಅಲ್ಲದೆ 'ಬೆಸ್ಟ್ ಫೈಟರ್ ಜೆಟ್ ಪೈಲೆಟ್' ಪ್ರಶಸ್ತಿ ಸಹ ಅವರ ಪಾಲಾಗಿತ್ತು. ಪಾಕಿಸ್ತಾನದ ಏರ್ಪೋರ್ಸ್ ವಸ್ತುಸಂಗ್ರಹಾಲಯಕ್ಕೆ ಅವರ ಹೆಸರು ಇಟ್ಟು ಗೌರವಿಸಲಾಗಿದೆ.

ಭಾರತ ಸೈನಿಕರ ಸಾವಿಗೆ ಕಾರಣವಾದವನ ಮಗನಿಗೆ ಪುರಸ್ಕಾರ
ಭಾರತ ಸೈನಿಕರ ಸಾವಿಗೆ ಕಾರಣವಾದವರ ಮಗನಿಗೆ ಭಾರತದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಶ್ರೀ' ನೀಡಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿದೇಶಿಗರಿಗೆ ಈ ಪ್ರಶಸ್ತಿ ನೀಡುವ ಸಂಪ್ರದಾಯ ಇದೆಯಾದರೂ, ಭಾರತದ ವಿರುದ್ಧ ಯುದ್ಧ ಮಾಡಿದವರ ಮಗನಿಗೆ ಪ್ರಶಸ್ತಿ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

2016 ರಲ್ಲಿ ಭಾರತ ಪೌರತ್ವ ಪಡೆದ ಅದ್ನಾನ್ ಸಮಿ
ಲಂಡನ್ ನಲ್ಲಿ ಹುಟ್ಟಿರುವ ಅದ್ನಾನ್ ಸಮಿ, 2001 ರಿಂದಲೂ ಭಾರತದಲ್ಲಿ ನೆಲೆಸಿದ್ದಾರೆ, ಆದರೆ ಇಲ್ಲಿನ ನಾಗರೀಕತ್ವ ಅವರಿಗೆ ದೊರೆತಿರಲಿಲ್ಲ. 2016 ರ ಜನವರಿಯಲ್ಲಿ ಅದ್ನಾನ್ ಸಮಿ ಅವರಿಗೆ ಗೃಹ ಇಲಾಖೆಯು ಭಾರತೀಯ ಪೌರತ್ವ ನೀಡಿತು. ಸಮಿ ಬಾಲಿವುಡ್ನ ಹಲವು ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಉಪೇಂದ್ರ ನಟಿಸಿರುವ 'ಸೂಪರ್ ಸ್ಟಾರ್' ಕನ್ನಡ ಚಿತ್ರದ 'ಡೋಂಟ್ ವರಿ ಮಾಡಬೇಡ' ಹಾಡನ್ನು ಸಹ ಅದ್ನಾನ್ ಸಮಿ ಹಾಡಿದ್ದಾರೆ.

'ಅಪ್ಪ ಮಾಡಿದ್ದಕ್ಕೆ ಮಗ ಜವಾಬ್ದಾರ ಹೇಗಾಗುತ್ತಾನೆ?'
ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಅದ್ನಾನ್ ಸಮಿ, 'ನಮ್ಮ ತಂದೆ ಪಾಕಿಸ್ತಾನ ಸೇನೆಯ ಹೆಮ್ಮೆಯ ಸೈನಿಕರಾಗಿದ್ದರು. ಅವರು ತಮ್ಮ ಕರ್ತವ್ಯಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಿದ್ದರು, ಆದರೆ ಇದಕ್ಕೂ ನನಗೂ ಏನು ಸಂಬಂಧ, ಅಪ್ಪ ಮಾಡಿದ ಕಾರ್ಯಕ್ಕೆ ಮಗ ಜವಾಬ್ದಾರ ಹೇಗಾಗುತ್ತಾನೆ? ಎಂದು ಪ್ರಶ್ನಿಸಿದ್ದಾರೆ.

ಕಂಗನಾ ರಣೌತ್ಗೆ ಪ್ರಶಸ್ತಿ ಕೊಟ್ಟಿದ್ದಕ್ಕೂ ಅಸಮಾಧಾನv
ಇದರ ಹೊರತಾಗಿ ಕಂಗನಾ ರಣೌತ್ ಅವರಿಗೆ ಸಹ ಪದ್ಮಶ್ರೀ ಬಂದಿದ್ದು, ಈ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಪರವಾಗಿ ಕಂಗನಾ ಮಾತನಾಡಿದ್ದರು, ಹಾಗಾಗಿ ಅವರಿಗೆ ಪದ್ಮಶ್ರೀ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತಮ ಸಮಾಜ ಸೇವಕರಿಗೂ ನೀಡಲಾಗಿದೆ ಪ್ರಶಸ್ತಿ
ವಿವಾದದ ಹೊರತಾಗಿ ಹಲವು ನಿಜವಾದ ಸಮಾಜ ಸೇವಕರಿಗೂ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದ ಎಂಟು ಮಂದಿಗೆ ಪದ್ಮಶ್ರೀ ಗೌರವ ದೊರೆತಿದ್ದು, ವೃಕ್ಷಮಾತೆ ತುಳಸಿ ಗೌಡ ಮತ್ತು ಕಿತ್ತಳೆ ಹಣ್ಣು ಮಾರಿ ಶಾಲೆ ನಿರ್ಮಿಸಿದ ಅರೆಕಳ ಹಾಜಬ್ಬ ಅವರಿಗೆ ಪದ್ಮಶ್ರೀ ದೊರೆತಿದೆ. ವಿಶ್ವೇಶ್ವರ ತೀರ್ಥರಿಗೆ ಮರಣೋತ್ತರ ಪದ್ಮ ವಿಭೂಷಣ ಗೌರವ ಪ್ರಾಪ್ತಿಯಾಗಿದೆ.












Click it and Unblock the Notifications