ದೆಹಲಿಯಲ್ಲಿ ಬಿಜೆಪಿ ಸೋಲ್ತಾ ಇದೆ, ಹಾಗಾಗಿ ಇವಿಎಂ (ವೋಟಿಂಗ್ ಮೆಷಿನ್) ಸರಿಯಿರುತ್ತೆ ಬಿಡಿ
ಇತ್ತೀಚಿನ ದಿನಗಳಲ್ಲಿ ಬಿಜೆಪಿಯೇತರ ಪಕ್ಷಗಳ ರಾಜಕೀಯ ಹೇಗೆಂದರೆ ತಮಗೇನಾದರೂ ಸೋಲಾದರೆ ಅನಾಮತ್ತಾಗಿ ಇವಿಎಂ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿವೆ. ಹಾಗಾಗಿ, ಒಂದು ವೇಳೆ ದೆಹಲಿಯಲ್ಲಿ ಈ ಬಾರಿ ಬಿಜೆಪಿ ಏನಾದರೂ ಗೆದ್ದಿದ್ದರೆ, ಮತ್ತೆ ಇವಿಎಂ ವಿಷಯ ಮುನ್ನಲೆಗೆ ಬರುತ್ತಿತ್ತು.
ಎರಡು ದಿನಗಳ ಕೆಳಗೆ ದೆಹಲಿಯ ಚುನಾವಣೆ ನಡೆದಾಗ, ತಾಂತ್ರಿಕ ಕಾರಣದಿಂದ ಚುನಾವಣಾ ಆಯೋಗ ಒಟ್ಟಾರೆ ಶೇಕಡಾವಾರು ಮತದಾನದ ಅಂಕಿಅಂಶವನ್ನು ಬಿಡುಗಡೆ ಮಾಡಿರಲಿಲ್ಲ. ಅಷ್ಟಕ್ಕೇ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಯೋಗದ ಮೇಲೆ ಸಂಶಯ ಹೊರಹಾಕಿದ್ದರು.
ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!
ಇವಿಎಂ ಮೇಲೆ ಸಂಶಯ ಪಡುವಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ, ಇಲ್ಲವೆಂದಲ್ಲ. ಆದರೆ, ಸೋತಾಗ ಒಂದು, ಗೆದ್ದಾಗ ಇನ್ನೊಂದು ಎನ್ನುವ ಇವರುಗಳ ನಿಲುವಿನಿಂದಾಗಿ, ಸರಕಾರೀ ಸ್ವಾಯತ್ತ ಸಂಸ್ಥೆಗಳ ಮೇಲೆ ಗುಮಾನಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯೇ ಎನ್ನುವುದಿಲ್ಲಿ ಪ್ರಶ್ನೆ.
Delhi Election Results 2020 Live:ಸೀಲಾಂಪುರದಲ್ಲಿ ಆಮ್ ಆದ್ಮಿ ಪಕ್ಷ ಗೆಲುವು
ಲೋಕಸಭಾ ಚುನಾವಣೆಯ ಫಲಿತಾಂಶವೂ ಸೇರಿದಂತೆ ದೇಶದ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ, ಇವಿಎಂ ಮತಯಂತ್ರ ದುರುಪಯೋಗ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುವುದು ಸಾಮಾನ್ಯ. ಇವಿಎಂ ಮತಯಂತ್ರ ಹ್ಯಾಕ್ ಮಾಡಲು ಸಾಧ್ಯವೇ ಎನ್ನುವ ಚರ್ಚೆ ದೇಶದಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ. ಚುನಾವಣಾ ಆಯೋಗದ ಸ್ಪಷ್ಟನೆಯ ಹೊರತಾಗಿಯೂ ಈ ಚರ್ಚೆಗಳು ನಿಂತಿಲ್ಲ.
ಹರಿಯಾಣ ಪ್ರಯಾಸದಿಂದ ಗೆದ್ದ ಬಿಜೆಪಿ
ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪಗಳ ಮಧ್ಯೆ, ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಆಭ್ಯರ್ಥಿಯೊಬ್ಬರು, ಇವಿಎಂನಲ್ಲಿ ನೀವು ಯಾವುದೇ ಬಟನ್ ಒತ್ತಿದರೂ ಅದು ಬಿಜೆಪಿಗೆ ಚಲಾವಣೆಯಾಗುತ್ತದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿತ್ತು. ಆದರೆ, ಬಿಜೆಪಿ, ಅಲ್ಲಿ ಪ್ರಯಾಸದಿಂದ, ಇನ್ನೊಂದು ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ನಂತರ ಅಧಿಕಾರಕ್ಕೇರಿತ್ತು. ಹಾಗಾಗಿ. ಈ ವಿಷಯ ಅಲ್ಲಿಗೆ ತಣ್ಣಗಾಗಿತ್ತು.
ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕೋಳಿವಾಡ
ಇನ್ನು, ಇತ್ತೀಚೆಗೆ ಕರ್ನಾಟದಲ್ಲಿ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಗೆದ್ದ ನಂತರ, ಮತ್ತೆ ಇವಿಎಂ ಮೇಲೆ ಗೂಬೆ ಕೂರಿಸುವ ಕೆಲಸ ಮುಂದುವರಿದಿತ್ತು. ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕೋಳಿವಾಡ, ಸೋಲಿಗೆ ಇವಿಎಂ ಹ್ಯಾಕ್ ಆಗಿದ್ದು ಕಾರಣ ಎಂದಿದ್ದರು. "ಒಂದು ದಿನ ಸಿದ್ದರಾಮಯ್ಯನವರ ಮನೆಗೆ ಹೋಗಿದ್ದೆ. ಅವರು ಇಂಜಿನಿಯರ್ ಕರೆಸಿ ಇವಿಎಂ ಮಿಷನ್ ಅನ್ನು ಚೆಕ್ ಮಾಡಿಸಿದ್ರು. ಇಂಜಿನಿಯರ್ ನಿಮಗೆ ಎಷ್ಟು ಗೆಲ್ಲಬೇಕು ಅಂತ ಕೇಳಿದರು. ಆಗ ಸಿದ್ದರಾಮಯ್ಯನವರು ಏನು ಹೇಳಿದ್ರೋ, ಅದೇ ರಿಸಲ್ಟ್ ಬಂದಿತ್ತು" ಎಂದು ಕೋಳಿವಾಡ ಹೇಳಿಕೆಯನ್ನು ನೀಡಿದ್ದರು.
ಮೊದಲ ಬಾರಿಗೆ ಇವಿಎಂ ಬಳಸಿರುವುದು 1982ರಲ್ಲಿ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಮೊದಲ ಬಾರಿಗೆ ಇವಿಎಂ ಬಳಸಿರುವುದು 1982ರಲ್ಲಿ. ಕೇರಳದ ಪರೂರ್ ವಿಧಾನಸಭಾ ಕ್ಷೇತ್ರದ ಚುನಾವಣೆಯ ವೇಳೆ, ಇವಿಎಂ ಮತಯಂತ್ರವನ್ನು ಬಳಸಲಾಗಿತ್ತು. ಇದಾದ ಬಳಿಕ 1999ರ ಲೋಕಸಭಾ ಚುನಾವಣೆ ವೇಳೆ ಕೆಲವು ಕ್ಷೇತ್ರಗಳಲ್ಲಿ ಇವಿಎಂ ಮತಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. 2004ರ ಲೋಕಸಭಾ ಚುನಾವಣೆ ನಂತರ ನಡೆದ ಪ್ರತಿಯೊಂದು ವಿಧಾನಸಭಾ ಚುಣಾವಣೆಯಲ್ಲೂ ಇವಿಎಂ ಅನ್ನು ಜಾರಿಗೆ ತರಲಾಗಿತ್ತು.
ಬ್ಯಾಲೆಟ್ ಪೇಪರ್ ನಲ್ಲಿಯೇ ಚುನಾವಣೆಯೇ ಬೇಕೆಂದು ಪಟ್ಟು
ವಿಶ್ವದ 195 ರಾಷ್ಟ್ರಗಳಲ್ಲಿ ಕೇವಲ 20 ದೇಶಗಳಲ್ಲಿ ಮಾತ್ರ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಇವಿಎಂ ಮೇಲೆ ವಿಪಕ್ಷಗಳಿಗೆ ಸಂಶಯ ಹೆಚ್ಚಾದಾಗ, ಇದೇ ವಿಚಾರವನ್ನು ಪ್ರಸ್ತಾವಿಸಿ, ಬ್ಯಾಲೆಟ್ ಪೇಪರ್ ನಲ್ಲಿಯೇ ಚುನಾವಣೆಯೇ ಬೇಕೆಂದು ಪಟ್ಟು ಹಿಡಿದಿದ್ದದ್ದು ಗೊತ್ತಿರುವ ವಿಚಾರ. ಆದರೆ, ಚುನಾವಣಾ ಆಯೋಗ ಇದಕ್ಕೆ ಸಾಧ್ಯವಿಲ್ಲ ಎಂದ ಮೇಲೆ ವಿಪಕ್ಷಗಳು ಸುಮ್ಮನಾಗಿದ್ದವು.
ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ
ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೇರಿತ್ತು. ಈ ವೇಳೆ, ಇವಿಎಂ ಹ್ಯಾಕ್ ಮಾಡಲಾಗುತ್ತದೆ ಎನ್ನುವ ಕೂಗು ಆರ್ಭಟಿಸಲಾರಂಭಿಸಿದವು. ಅದಾದ ಮೇಲೆ, ಮಧ್ಯಪ್ರದೇಶ. ರಾಜಸ್ಥಾನ ಮುಂತಾದ ಕಡೆ, ಬಿಜೆಪಿ ಸೋತಾಗ, ಇವಿಎಂ ಬಗ್ಗೆ ಯಾರೂ ಸೊಲ್ಲೆತ್ತಿರಲಿಲ್ಲ. ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ ನಂತರವೂ ಈ ಬಗ್ಗೆ ಚಕಾರವಿರಲಿಲ್ಲ. ಈಗ, ದೆಹಲಿಯ ಫಲಿತಾಂಶ. ಆಮ್ ಆದ್ಮಿ ಗೆಲುವಿನ ದಡ ಸೇರುತ್ತಿರುವುದರಿಂದ, ಬಿಜೆಪಿ ಹಿನ್ನಡೆ ಅನುಭವಿಸುತ್ತಿರುವುದರಿಂದ 'ಪಾಪ, ಇವಿಎಂ ಬಚಾವ್ ಆಗಿದೆ'.