ಆಪರೇಷನ್ ಬ್ಲೂಸ್ಟಾರ್ 34ನೇ ವರ್ಷಾಚರಣೆ: ಸ್ವರ್ಣಮಂದಿರಕ್ಕೆ ಬಿಗಿ ಭದ್ರತೆ
ಅಮೃತಸರ, ಜೂನ್ 6: ತೀವ್ರ ವಿವಾದಕ್ಕೆ ಒಳಗಾಗಿದ್ದ ಆಪರೇಷನ್ ಬ್ಲೂಸ್ಟಾರ್ಗೆ ಬುಧವಾರ 34 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಂಜಾಬ್ನ ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತ್ವರಿತ ಕಾರ್ಯಾಚರಣೆ ಪಡೆಯ ಐದು ತಂಡಗಳು, ಅರೆಸೇನಾ ಪಡೆಯ ತುಕಡಿಗಳನ್ನು ನಗರದೆಲ್ಲೆಡೆ ನಿಯೋಜಿಸಲಾಗಿದೆ.
ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕೋಮುಗಲಭೆ ಹರಡಲು ವಿದೇಶಿ ಶಕ್ತಿಗಳು ಸಂಚು ರೂಪಿಸುವ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಸ್ವರ್ಣ ಮಂದಿರದ ಸಂಕೀರ್ಣದಲ್ಲಿ ಅಡಗಿಕೊಂಡಿದ್ದ ಉಗ್ರರನ್ನು ಸದೆಬಡಿಯಲು 1984ರಲ್ಲಿ ಸೇನಾ ಪಡೆಯು 'ಆಪರೇಷನ್ ಬ್ಲೂಸ್ಟಾರ್' ಕಾರ್ಯಾಚರಣೆ ನಡೆಸಿತ್ತು.
ಕಾರ್ಯಾಚರಣೆ ವೇಳೆ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲು ದಾಲ್ ಖಲ್ಸಾ ಎಂಬ ತೀವ್ರಗಾಮಿ ಸಂಘಟನೆಯೊಂದು ಮಂಗಳವಾರ ಅಮೃತಸರದಲ್ಲಿ 'ಹತ್ಯಾಕಾಂಡ ಸ್ಮರಣೆಯ ಪಥಸಂಚಲನ' ನಡೆಸಿತ್ತು.
ಪ್ರತ್ಯೇಕ ಖಲಿಸ್ತಾನ ದೇಶಕ್ಕೆ ಬೇಡಿಕೆ ಇಟ್ಟಿದ್ದ ಉಗ್ರರು, ಸ್ವರ್ಣಮಂದಿರವನ್ನು ವಶಕ್ಕೆ ತೆಗೆದುಕೊಂಡು, ಅದರಲ್ಲಿದ್ದ ಜನರನ್ನು ಒತ್ತೆ ಇರಿಸಿಕೊಂಡಿದ್ದರು.
ಆಗ ಪ್ರಧಾನಿ ಇಂದಿರಾಗಾಂಧಿ ಅವರು ಸೇನೆಯನ್ನು ರವಾನಿಸಿ ಉಗ್ರರನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಕಾರ್ಯಾಚರಣೆ ಮುಂದೆ ಇಂದಿರಾಗಾಂಧಿ ಅವರ ಹತ್ಯೆಗೂ ಕಾರಣವಾಯಿತು.












Click it and Unblock the Notifications