'ಓಮಿಕ್ರಾನ್ ಸಾಮಾನ್ಯ ಶೀತವಲ್ಲ': ಕೆ ಪೌಲ್ ಎಚ್ಚರಿಕೆ
ನವದೆಹಲಿ, ಜನವರಿ 12: ಓಮಿಕ್ರಾನ್ ಬರೀ ನೆಗಡಿ ಅಲ್ಲ, ಇದರ ಬಗ್ಗೆ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ ಎಂದು ಸರಕಾರದ ಉನ್ನತ ಕೋವಿಡ್ ಸಲಹೆಗಾರ ಕೆ ಪೌಲ್ ಹೇಳಿದ್ದಾರೆ. ದೇಶದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಓಮಿಕ್ರಾನ್ ಸೋಂಕುಗಳು ಶೀತದಂತೆ ಸೌಮ್ಯವಾಗಿರುತ್ತವೆ ಮತ್ತು ಪ್ರತಿಯೊಬ್ಬರೂ ಅದಕ್ಕೆ ಒಳಗಾಗಬಹುದು ಎಂದು ಹೇಳಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೌಲ್ ಓಮಿಕ್ರಾನ್ ಬರೀ ನೆಗಡಿ ಅಲ್ಲ ಎಂದಿದ್ದಾರೆ.
"ಓಮಿಕ್ರಾನ್ ನೆಗಡಿಯಲ್ಲ. ಈ ತಪ್ಪು ಕಲ್ಪನೆ ಹರಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಾವು ಈ ತಪ್ಪು ಕಲ್ಪನೆ ಹರಡದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಾವು ಮಾಸ್ಕ್ ಅನ್ನು ಹಾಕೋಣ ಹಾಗೂ ಲಸಿಕೆ ಹಾಕಿಸಿಕೊಳ್ಳೋಣ," ಎಂದು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರಾದ ಡಾ ಪೌಲ್ ಹೇಳಿದ್ದಾರೆ.
"ಕೋವಿಡ್ ಲಸಿಕೆಗಳು ಸ್ವಲ್ಪ ಮಟ್ಟಿಗೆ ಸಹಾಯಕವಾಗಿವೆ ಎಂಬುದು ಸತ್ಯ. ಕೋವಿಡ್ನಿಂದ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಲು ಕೋವಿಡ್ ಲಸಿಕೆಯನ್ನು ಪಡೆಯುವುದು ಉತ್ತಮ," ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ಪೌಲ್ ತಿಳಿಸಿದ್ದಾರೆ.

ನಿನ್ನೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ (ಐಸಿಎಂಆರ್) ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜಯಪ್ರಕಾಶ್ ಮುಲಿಯಿಲ್, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಇದುವರೆಗಿನ ನಿಯಮಗಳಿಗೆ ಸಂಪೂರ್ಣ ಮರುಪರಿಶೀಲನೆಯ ಅಗತ್ಯವಿದೆ ಎಂದು ವಾದಿಸಿದರು. ಹಾಗೆಯೇ ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಸೌಮ್ಯವಾದ ರೂಪಾಂತರವಾಗಿದೆ ಮತ್ತು ಭಯಾನಕವಲ್ಲ ಎಂದು ಕೂಡಾ ಹೇಳಿದ್ದರು.
ಶೀತದಂತೆ ಸೋಂಕಿನ ಪರಿಣಾಮ
"ಕೊರೊನಾ ವೈರಲ್ ಸೋಂಕಿನ ಪರಿಣಾಮವು ಈಗ ಶೀತದಂತಿದೆ. ನಾವು ಇಲ್ಲಿಯವರೆಗೆ ಒಂದು ನಿರ್ದಿಷ್ಟ ರೀತಿಯ ಉದ್ದೇಶವನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ನಾವು ಗುರುತಿಸಬೇಕಾಗಿದೆ," ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಐಸಿಎಂಆರ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಮುಲಿಯಿಲ್ ಹೇಳಿದರು.
ಓಮಿಕ್ರಾನ್ ರೋಗಲಕ್ಷಣಗಳು ಹೆಚ್ಚು ತೀವ್ರವಾಗಿರುತ್ತವೆ ಮತ್ತು ಹೊಸ ರೂಪಾಂತರವು ಅಧಿಕವಾದಂತೆ ಆಮ್ಲಜನಕದ ಹಾಸಿಗೆಗಳ ಬೇಡಿಕೆಯು ಹೆಚ್ಚಾಗಿದೆ ಎಂದು ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಡಾ.ಮುಲಿಯಿಲ್, "ಸೋಂಕು ಬಹುತೇಕ ತಡೆಯಲಾಗದು ಮತ್ತು ಹೆಚ್ಚು ಸಾಂಕ್ರಾಮಿಕವಾಗಿದೆ. ಆದರೆ ಹಲವಾರು ಮಂದಿಗೆ ಸೋಂಕು ಬಂದಿರುವುದೇ ತಿಳಿದಿರುವುದಿಲ್ಲ," ಎಂದಿದ್ದಾರೆ.
"ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿದೆ, ಆದರೆ ಪರಿಣಾಮಗಳು ವಿಭಿನ್ನವಾಗಿವೆ. ಕಡಿಮೆ ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಇದು ಇನ್ನು ಮುಂದೆ ಭಯಾನಕ ರೋಗವಲ್ಲ. ಓಮಿಕ್ರಾನ್ ನೀವು ನಿಭಾಯಿಸಬಹುದಾದ ಕಾಯಿಲೆಯಾಗಿದೆ. ಮನಸ್ಥಿತಿಯ ಬದಲಾವಣೆಯ ಅಗತ್ಯವಿದೆ. ಭಯ ನಮ್ಮ ಮೇಲೆ ಆವರಿಸುತ್ತಿದೆಯೇ?," ಎಂದು ಡಾ.ಮುಲಿಯಿಲ್ ಪ್ರಶ್ನೆ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕು
ದೇಶದಲ್ಲಿ ಪ್ರಸ್ತುತ ಮೂರನೇ ಅಲೆಯ ಪರಿಣಾಮ ಉಂಟಾಗುತ್ತಿದೆ. ಭಾರತದಲ್ಲಿ ನಿರಂತರವಾಗಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದೆ. ಕೋಲ್ಕತ್ತಾದಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇಕಡ 60ರಷ್ಟು ಇದೆ. ಮುಂಬೈನಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇಕಡ 27 ಆಗಿದೆ. ಇನ್ನು ದೆಹಲಿ ಹಾಗೂ ಚೆನ್ನೈನಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇಕಡ 23 ಆಗಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ನೀಡಿರುವ ಸರಕಾರದ ಉನ್ನತ ಕೋವಿಡ್ ಸಲಹೆಗಾರ ಕೆ ಪೌಲ್, "ಸ್ಪಷ್ಟವಾಗಿ, ಓಮಿಕ್ರಾನ್ ರೂಪಾಂತರವು ಇದೀಗ ಪ್ರಾಬಲ್ಯ ಸಾಧಿಸುತ್ತಿದೆ," ಎಂದು ತಿಳಿಸಿದ್ದಾರೆ. ಈ ಓಮಿಕ್ರಾನ್ ರೂಪಾಂತರವನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಓಮಿಕ್ರಾನ್ ನೆಗಡಿಯಲ್ಲ. ನಾವು ಈ ತಪ್ಪು ಕಲ್ಪನೆ ಹರಡದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications