Vande Bharat Express: ವಂದೇ ಭಾರತ್ ಪ್ರಯಾಣಿಕರಿಗೆ ಗುಡ್ ನ್ಯೂಸ್
ನವದೆಹಲಿ, ಫೆಬ್ರವರಿ 05: ಭಾರತೀಯ ರೈಲ್ವೆ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ರೈಲು ಪ್ರಯಾಣಿಕರು ಪ್ರಯಾಣದ ವೇಳೆ ಆಹಾರವನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ, ಟಿಕೆಟ್ ಕಾಯ್ದಿರಿಸುವಾಗ ಆಹಾರದ ಆಯ್ಕೆ ಮಾಡದಿದ್ದರೂ ಸಹ ಪ್ರಯಾಣದ ಸಮಯದಲ್ಲಿ ಆಹಾರ ಬುಕ್ ಮಾಡಬಹುದು.
ಐಆರ್ಸಿಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕುರಿತು ರೈಲ್ವೆ ಮಂಡಳಿ ಆದೇಶದಲ್ಲಿ ಈ ಕುರಿತು ಮಾಹಿತಿ ನೀಡಿದೆ. ಸದ್ಯ ವಂದೇ ಭಾರತ್ ರೈಲು ಟಿಕೆಟ್ ಬುಕ್ ಮಾಡುವಾಗ ಆಹಾರದ ಆಯ್ಕೆಯನ್ನು ಮಾಡಲು ಅವಕಾಶವಿದೆ. ವಿತ್ ಮಿಲ್, ವಿತ್ ಔಟ್ ಮಿಲ್ ಎಂದು ಟಿಕೆಟ್ ಬುಕ್ ಮಾಡಲು ಎರಡು ಆಯ್ಕೆ ನೀಡಲಾಗಿದೆ.

ಅಲ್ಲದೇ ಮೀಲ್ಸ್, ರೆಡಿ ಟು ಈಟ್ ಮಾದರಿ ಆಹಾರ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಆಹಾರದ ಆಯ್ಕೆಯನ್ನು ಮಾಡಿದ್ದರೆ ನಿಗದಿತ ಸಮಯದೊಳಗೆ, ಪ್ರಯಾಣಿಕರಿಗೆ ಆಹಾರ ಒದಗಿಸಬೇಕು ಎಂಬ ನಿಯಮವಿದೆ.
ಪ್ರಯಾಣದ ವೇಳೆ ಪ್ರಯಾಣಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ರಾತ್ರಿ 8 ಗಂಟೆಯ ನಂತರ ಆಹಾರ ಪೂರೈಕೆ ಮಾಡಲು ಅವಕಾಶವಿಲ್ಲ ಎಂದು ರೈಲ್ವೆ ಮಂಡಳಿ ಹೇಳಿದೆ. ಆದರೆ ಆಹಾರ ಆಯ್ಕೆ ಮಾಡದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು. ಈ ಕುರಿತು ರೈಲ್ವೆ ಮಂಡಳಿಗೆ ಪ್ರಯಾಣಿಕರು ದೂರು ನೀಡಿದ್ದರು.
ಹಣ ಪಾವತಿ ಮಾಡುತ್ತೇವೆ ಎಂದರೂ ಸಹ ಐಆರ್ಸಿಟಿಸಿ ಸಿಬ್ಬಂದಿ ರೈಲು ಪ್ರಯಾಣಿಕರಿಗೆ ಆಹಾರವನ್ನು ನೀಡುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದರು. ಆದ್ದರಿಂದ ರೈಲು ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಆಹಾರವನ್ನು ಆಯ್ಕೆ ಮಾಡದಿದ್ದರೂ ಪ್ರಯಾಣದ ಅವಧಿಯಲ್ಲಿ ಆಹಾರ ಖರೀದಿ ಮಾಡಲು ಅವಕಾಶವನ್ನು ನೀಡಲಾಗಿದೆ.
ವಂದೇ ಭಾರತ್ ರೈಲುಗಳಿಗೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ಹಲವು ಮಾರ್ಗದಲ್ಲಿ ಈ ಮಾದರಿ ರೈಲುಗಳು ಸಂಚಾರ ನಡೆಸುತ್ತಿವೆ. ಎರಡು ನಗರದ ನಡುವೆ ಪ್ರಯಾಣದ ಅವಧಿಯನ್ನು ಈ ಮಾದರಿ ರೈಲುಗಳು ಕಡಿಮೆಗೊಳಿಸುತ್ತವೆ. ಆದ್ದರಿಂದ ಹೆಚ್ಚಿನ ಜನರು ಈ ರೈಲುಗಳನ್ನು ಬಳಕೆ ಮಾಡುತ್ತಿದ್ದಾರೆ.
ವಂದೇ ಭಾರತ್ ರೈಲುಗಳ ದರಗಳು ಹೆಚ್ಚಿವೆ. ಚೇರ್ ಕಾರ್, ಎಕ್ಸಿಕ್ಯುಟಿವ್ ಕ್ಲಾಸ್ ಮಾದರಿಯ ಟಿಕೆಟ್ ಬುಕ್ ಮಾಡುವಾಗ ಆಹಾರದ ದರವನ್ನು ಸೇರಿಸಿ ಟಿಕೆಟ್ ಬುಕ್ ಮಾಡಬಹುದು. ಆದರೆ ಈಗ ಆಹಾರವನ್ನು ರೈಲಿನಲ್ಲಿ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2025-26ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್ನಲ್ಲಿ ಅವರು ರೈಲ್ವೆ ಇಲಾಖೆಯ ಅನುದಾನದ ಕುರಿತು ಮಾಹಿತಿ ನೀಡಿದ್ದಾರೆ. ಬಜೆಟ್ನಲ್ಲಿ ರೈಲ್ವೆ ಯೋಜನೆಗಳಿಗೆ 2.52 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಮುಂದಿನ 2-3 ವರ್ಷದಲ್ಲಿ 200 ವಂದೇ ಭಾರತ್, 100 ಅಮೃತ್ ಭಾರತ್, 50 ನಮೋ ಭಾರತ್ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.












Click it and Unblock the Notifications