ಹಳೇ ನೋಟಿನೊಂದಿಗೆ ಖ್ಯಾತ ನಟನ ಕುಟುಂಬ: ಅಧಿಕಾರಿಗಳ ತೀವ್ರ ವಿಚಾರಣೆ
ತೆಲುಗು ನಟ ಬಾಲಕೃಷ್ಣ ಅವರ ಪತ್ನಿ ನಿಷೇಧಗೊಂಡಿರುವ ಐನೂರು ಮತ್ತು ಸಾವಿರ ರೂಪಾಯಿಯ ನೋಟನ್ನು ಅಪಾರ ಪ್ರಮಾಣದಲ್ಲಿ ಹೊಂದಿದ್ದಕ್ಕಾಗಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ನಂತರ ಹೋಗಲು ಅನುವು ಮಾಡಿಕೊಟ್ಟಿದ್ದಾರೆ.
ಹೈದರಾಬಾದ್, ಡಿ 4: ನಿಷೇಧಗೊಂಡಿರುವ ಐನೂರು ಮತ್ತು ಸಾವಿರ ರೂಪಾಯಿಯ ನೋಟು ಅಪಾರ ಪ್ರಮಾಣದಲ್ಲಿ ಹೊಂದಿದ್ದಕ್ಕಾಗಿ ವಿಮಾನ ನಿಲ್ದಾಣದಲ್ಲಿ ಖ್ಯಾತ ತೆಲುಗು ನಟನ ಕುಟುಂಬದ ಸದಸ್ಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಘಟನೆ ವರದಿಯಾಗಿದೆ.
ಶನಿವಾರ (ಡಿ 3) ರಾತ್ರಿ ಹೈದರಾಬಾದ್ ವಿಮಾನನಿಲ್ದಾಣದಿಂದ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಪತ್ನಿ ವಸುಂಧರಾ ಮತ್ತು ಕುಟುಂಬದ ಇತರ ಆರು ಸದಸ್ಯರು ಸ್ಪೈಸ್ ಜೆಟ್ ವಿಮಾನದ ಮೂಲಕ ತಿರುಪತಿಗೆ ಬಂದಿಳಿದಿದ್ದರು. (ನೋಟು ಬದಲಾವಣೆ, ಸ್ವಾಮೀಜೀಗೇ ಮುಂಡಾಯಿಸಿದ ಖದೀಮ)
ತಿರುಪತಿಯ ರೇನಿಗುಂಟ ವಿಮಾನನಿಲ್ದಾಣದಲ್ಲಿ ಬಾಲಕೃಷ್ಣ ಅವರ ಪತ್ನಿಯ ಬಳಿ ಅಪಾರ ಪ್ರಮಾಣದ ಹಳೇ ನೋಟಿನ ಕಂತೆ ಇರುವುದನ್ನು ಭದ್ರತಾ ತಪಾಸಣೆಯ ವೇಳೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಅಧಿಕಾರಿಗಳು ಕೂಡಲೇ ಆದಾಯ ತೆರಿಗೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅಧಿಕಾರಿಗಳು ತೀವ್ರ ವಿಚಾರಣೆಗೊಳಿಸಿದಾಗ ಆದಾಯ ತೆರಿಗೆಗೆ ಸಂಬಂಧಿಸಿದ ದಾಖಲೆಗಳನ್ನು ವಸುಂಧರಾ ನೀಡಿದ್ದಾರೆ.
ಇರುವ ದುಡ್ಡಿನ ಕಂತೆಯನ್ನು ತಿರುಪತಿ ದೇವಾಲಯದಲ್ಲಿ ಹುಂಡಿಗೆ ಅರ್ಪಿಸಲು ತೆಗೆದುಕೊಂಡು ಹೋಗುತ್ತಿದ್ದೇನೆಂದು ವಸುಂಧರಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ತನ್ನಲ್ಲಿರುವ ಹತ್ತು ಲಕ್ಷ ರೂಪಾಯಿ ದುಡ್ಡು ಕಪ್ಪುಹಣವಲ್ಲ ಎಂದು ಬಾಲಕೃಷ್ಣ ಪತ್ನಿ ಐಟಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ ನಂತರ, ಅಧಿಕಾರಿಗಳು ವಿಮಾನನಿಲ್ದಾಣದಿಂದ ಹೊರಗೆ ಹೋಗಲು ವಸುಂಧರಾ ಮತ್ತು ಅವರ ಕುಟುಂಬದ ಸದಸ್ಯರಿಗೆ ಅನುಮತಿ ನೀಡಿದರು.