ಉಜ್ಜೈನಿ ಮಹಾಕಾಳೇಶ್ವರನಿಗೆ ಹಾಲಿನ ಅಭಿಷೇಕ ಮಾಡುವಂತಿಲ್ಲ : ಸುಪ್ರಿಂ
ನವದೆಹಲಿ, ಅಕ್ಟೋಬರ್ 27: ಉಜ್ಜೈನಿಯ ಪ್ರಖ್ಯಾತ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಹಾಲು ಮತ್ತು ಮೊಸರಿನ ಅಭಿಷೇಕ ನಿಷೇಧಿಸುವ ತೀರ್ಮಾನಕ್ಕೆ ಸುಪ್ರಿಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಶಿವಲಿಂಗ ಉಳಿಸಲು ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸುಪ್ರಿಂ ಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿಗೆ ಎಲ್ಲಾ ಅಧಿಕಾರಗಳನ್ನು ನೀಡಿದೆ.

ಒಟ್ಟು 8 ನಿಯಂತ್ರಣ ಕ್ರಮಗಳಿಗೆ ಸುಪ್ರಿಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ಆರ್.ಒದಿಂದ ಶುದ್ಧೀಕರಿಸಿದ ನೀರಿನಿಂದ ಮಾತ್ರ ಅಭಿಷೇಕಕ್ಕೆ ಅವಕಾಶ ನೀಡಲಾಗಿದೆ. ಜತೆಗೆ ಭಕ್ತರೊಬ್ಬರಿಗೆ ಕೇವಲ 500 ಮಿ.ಲೀ. ನೀರಿನಲ್ಲಿ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಜತೆಗೆ ಗಾಳಿಯಲ್ಲಿನ ತೇವಾಂಶ ಕಡಿಮೆಗೊಳಿಸಲು ಫ್ಯಾನ್ ಮತ್ತು ಡ್ರೈಯರ್ ಗಳನ್ನು ಅಳವಡಿಸಲು ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.
18ನೇ ಶತಮಾನದಲ್ಲಿ ನಿರ್ಮಿಸಿದ ಶಿವಲಿಂಗವನ್ನು ಮಾಲಿನ್ಯ, ತೇವಾಂಶ ಮತ್ತು ಭಕ್ತರ ಪೂಜೆಗಳಿಂದ ಸಂರಕ್ಷಣೆ ಮಾಡಬೇಕು ಎಂದು ಕಾಳಜಿ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ.
ಈ ಹಿಂದೆ ಸುಪ್ರಿಂ ಕೋರ್ಟ್ ಇಬ್ಬರು ತಜ್ಞರ ಸಮಿತಿಯನ್ನೂ ದೇವಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಈ ಸಂದರ್ಭ ತಜ್ಞರು ಶಿವಲಿಂಗಕ್ಕೆ ಬೂದಿಯ ಅಭಿಷೇಕ ಮಾಡುತ್ತಿರುವುದರಿಂದ ಸವಕಳಿ ಉಂಟಾಗುತ್ತಿದೆ. ಅಭಿಷೇಕ ಮಾಡುವ ನೀರಿನಲ್ಲಿ ಬ್ಯಾಕ್ಟೀರಿಯಾಗಳಿವೆ ಎಂದು ಪತ್ತೆ ಹಚ್ಚಿತ್ತು.
ಒಟ್ಟಾರೆ 10 ನಿಯಂತ್ರಣ ಕ್ರಮಗಳನ್ನು ಹೇಳಲಾಗಿತ್ತು. ಇದರಲ್ಲಿ 8ನ್ನು ಸುಪ್ರಿಂ ಕೋರ್ಟ್ ಒಪ್ಪಿಕೊಂಡಿದ್ದು ಇನ್ನೆರಡರ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಇದರ ಜತೆಗೆ ಶಿವಲಿಂಗ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸುವಂತೆ ಆಡಳಿತ ಮಂಡಳಿಗೆ ಹೇಳಿದೆ.












Click it and Unblock the Notifications