ಹುಷಾರ್..! ಕುಡಿದು ಸತ್ತರೆ ವಿಮೆ ಹಣ ಸಿಗುವುದಿಲ್ಲ, ಇನ್ಶೂರೆನ್ಸ್ ಇದ್ದೂ ವೇಸ್ಟ್..!
ನವದೆಹಲಿ, ಮಾರ್ಚ್ 23: ಕುಡುಕರಿಗೆಲ್ಲಾ ದೊಡ್ಡ ಶಾಕ್ ನೀಡುವಂತಹ ತೀರ್ಪು ಹೊರಬಿದ್ದಿದೆ. ಕುಡಿತದಿಂದ ವ್ಯಕ್ತಿ ಸಾವನ್ನಪ್ಪಿದರೆ, ಆತ ವಿಮೆ ಮಾಡಿದ್ದರೂ ವ್ಯರ್ಥ ಎಂಬ ಸಂದೇಶವನ್ನ ಸುಪ್ರೀಂಕೋರ್ಟ್ ರವಾನಿಸಿದೆ. ಕುಡಿದು ಮೃತಪಟ್ಟ ವ್ಯಕ್ತಿ ಹೆಸರಿನ ವಿಮೆ ಹಣ ಯಾವ ಕಾರಣಕ್ಕೂ ಆತನ ಕುಟುಂಬದವರಿಗೆ ಸಿಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಿತಿಮೀರಿ ಮದ್ಯ ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದ ವ್ಯಕ್ತಿಯೊಬ್ಬನ ಕುಟುಂಬ ಸದಸ್ಯರು ವಿಮೆ ಹಣಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಮೆ ಹಣ ನೀಡಲು ವಿಮಾ ಸಂಸ್ಥೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಈ ಮೂಲಕ ಹಿಮಾಚಲ ಪ್ರದೇಶದ ಕುಟುಂಬವೊಂದರ ಮನವಿಯನ್ನು ವಜಾ ಮಾಡಿದೆ.
ನ್ಯಾಯಮೂರ್ತಿ ಎಂ. ಶಾಂತನಗೌಡರ್ ಹಾಗೂ ನ್ಯಾಯಮೂರ್ತಿ ವಿನೀತ್ ಸರನ್ ಅವರಿದ್ದ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ. ಹಿಮಾಚಲ ಪ್ರದೇಶದ ಅರಣ್ಯ ಅಭಿವೃದ್ಧಿ ನಿಗಮದ ಚೌಕಿದಾರ್ ಆಗಿದ್ದ ಓಂಪ್ರಕಾಶ್ ಕುಟುಂಬ ಈ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ವೇಳೆ ವಿಮೆ ಕುರಿತು ಮಹತ್ವದ ಸಂಗತಿಗಳನ್ನ ಕೋರ್ಟ್ ಸ್ಪಷ್ಟಪಡಿಸಿದೆ.

ಕುಡಿತ ಆಕಸ್ಮಿಕ ಸಾವಲ್ಲ
ಈ ಅರ್ಜಿ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಕೆಲ ಮಹತ್ವದ ಸಂಗತಿಗಳನ್ನ ಸ್ಪಷ್ಟಪಡಿಸಿದೆ. ಅಪಘಾತದಿಂದ ಸಾವನ್ನಪ್ಪಿದ್ದರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ ವಿಮೆ ಮಾಡಿಸಿದ ವ್ಯಕ್ತಿಯ ಉತ್ತರಾಧಿಕಾರಿ ವಿಮೆಗೆ ಜವಾಬ್ದಾರ ಆಗಿರುತ್ತಾನೆ. ಆದರೆ ಮದ್ಯ ಸೇವನೆಯಿಂದಾಗಿ ಸತ್ತರೆ ವಿಮೆ ಮಾಡಿಸಿದ್ದ ವ್ಯಕ್ತಿಯ ಸಾವು ಆಕಸ್ಮಿಕ ಎಂದು ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ಮೃತಪಟ್ಟವರ ಕುಟುಂಬಕ್ಕೆ ವಿಮೆ ಹಣ ಸಂದಾಯ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ಕುಡುಕರಿಗೆ ಬಿಗ್ ಶಾಕ್ ಸಿಕ್ಕಿದೆ.
ಎಣ್ಣೆ ಏಟಿಗೆ ಲಕ್ಷ ಲಕ್ಷ ಸಾವು
ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಅಂತಾ ಅದೆಷ್ಟೇ ಮುನ್ನೆಚ್ಚರಿಕೆ ನೀಡದರೂ ಪ್ರಯೋಜನ ಆಗುತ್ತಿಲ್ಲ. ಜಗತ್ತಿನಾದ್ಯಂತ ಆಲ್ಕೋಹಾಲ್ ಅಥವಾ ಮದ್ಯದ ದಾಸರಾಗಿ ಪ್ರತಿವರ್ಷ ಹತ್ತಾರು ಲಕ್ಷ ಜನರು ಉಸಿರು ಚೆಲ್ಲುತ್ತಾರೆ. ಈ ಪೈಕಿ ಬಹುತೇಕರು ಲಿವರ್ ಡ್ಯಾಮೇಜ್ ರೀತಿಯ ಗಂಭೀರ ಸಮಸ್ಯೆಗಳನ್ನ ಎದುರಿಸುತ್ತಾರೆ. ಭಾರತದಲ್ಲೂ ಪ್ರತಿವರ್ಷ ಲಕ್ಷಾಂತರ ಕುಡುಕರು ಮದ್ಯ ಸೇವನೆ ಕಾರಣಕ್ಕೆ ಮೃತಪಡುತ್ತಾರೆ. ಸುಪ್ರೀಂ ಈಗ ನೀಡಿರುವ ತೀರ್ಪು ಸಾಕಷ್ಟು ಪರಿಣಾಮ ಬೀರಲಿದ್ದು, ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ.












Click it and Unblock the Notifications