20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ.!
ನವದೆಹಲಿ, ಮೇ 13: ಕೋವಿಡ್-19 ವಿರುದ್ಧ ಹೋರಾಟ ನಡೆಸಲು 'ಆತ್ಮ ನಿರ್ಭರ್ ಭಾರತ' ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು.
ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಮೊದಲ ಭಾಗದಲ್ಲಿ ಎಂ.ಎಸ್.ಎಂ.ಇ, ಇ.ಪಿ.ಎಫ್, ಎನ್.ಬಿ.ಎಫ್.ಸಿ, ಎಚ್.ಎಫ್.ಸಿ, ಎಂ.ಎಫ್.ಐ, ಡಿಸ್ಕಾಂಗಳಿಗೆ ವಿಶೇಷ ಕೊಡುಗೆ ಗಳನ್ನು ಮೇ 13 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನೌನ್ಸ್ ಮಾಡಿದ್ದರು.
ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ರೈತರ ಮೇಲೆ ಕೇಂದ್ರೀಕೃತವಾಗಿದ್ದ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಎರಡನೇ ಕಂತಿನ ವಿವರಗಳನ್ನು ಮೇ 14 ರಂದು ನಿರ್ಮಲಾ ಸೀತಾರಾಮನ್ ನೀಡಿದ್ದರು.
ಆರ್ಥಿಕ ಪ್ಯಾಕೇಜ್ ನ ಮೂರನೇ ಭಾಗದ ವಿವರಗಳನ್ನು ಇಂದು ಸಂಜೆ 4 ಗಂಟೆಗೆ ನಡೆದ ಸುದ್ಧಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದರು. ಆರ್ಥಿಕ ಪ್ಯಾಕೇಜ್ ನ ಮೂರನೇ ಕಂತಿನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಲಾಗಿದ್ದು, 11 ಮಹತ್ವದ ಘೋಷಣೆಗಳನ್ನು ಒಳಗೊಂಡಿದೆ.

1 ಲಕ್ಷ ಕೋಟಿ ರೂಪಾಯಿ ನೆರವು
* ಕೃಷಿ ಮೂಲ ಸೌಕರ್ಯಕ್ಕೆ (ಫಾರ್ಮ್ ಗೇಟ್ ಮತ್ತು ಅಗ್ರಿಗೇಷನ್ ಪಾಯಿಂಟ್) 1 ಲಕ್ಷ ಕೋಟಿ ರೂಪಾಯಿ ನೆರವು.
* ಕೃಷಿ ಅಭಿವೃದ್ಧಿಗೆ ಆದ್ಯತೆ.
* ಮೈಕ್ರೋ ಫುಡ್ ಎಂಟರ್ ಪ್ರೈಸಸ್ ಗಳ ರಚನೆಗಾಗಿ 10 ಸಾವಿರ ಕೋಟಿ ರೂಪಾಯಿ ಮೀಸಲು.
* ಪ್ರಧಾನಿಯ 'ವೋಕಲ್ ಫಾರ್ ಲೋಕಲ್' ದೃಷ್ಟಿಕೋನ ಜಾಗತಿಕ ಮಟ್ಟಕ್ಕೆ ತಲುಪಲು ಉತ್ತೇಜನ.
* ಆಯುರ್ವೇದ ಉತ್ಪನ್ನಗಳ ಸಾಗಾಟಕ್ಕೂ ಹಣ ಮೀಸಲು.
* ಎಲ್ಲಾ ದೇಶೀಯ ಆಹಾರ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಒತ್ತು.

ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್
* ಸಾವಯವ ಕೃಷಿ, ಹರ್ಬಲ್ ಕೃಷಿಕರಿಗೆ ನೆರವು.
* ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ. ಕರ್ನಾಟಕದ ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್.
* ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಗೆ ಆದ್ಯತೆ.
* ಬ್ರ್ಯಾಂಡಿಂಗ್ ಮೂಲಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಒತ್ತು.

20 ಸಾವಿರ ಕೋಟಿ ನೆರವು
* ಸಾಗರ, ಒಳನಾಡು ಮೀನುಗಾರಿಕೆ ಮತ್ತು ಜಲಚರ ಸಾಕಣೆ ಚಟುವಟಿಕೆಗಳಿಗೆ 11 ಸಾವಿರ ಕೋಟಿ ರೂಪಾಯಿ.
* ಮೀನು ಸಾಕಣೆ, ಕೋಲ್ಡ್ ಚೈನ್, ಮಾರುಕಟ್ಟೆ ಇತ್ಯಾದಿಗಳ ಮೂಲ ಸೌಕರ್ಯಕ್ಕಾಗಿ 9 ಸಾವಿರ ಕೋಟಿ ರೂಪಾಯಿ.
* ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಒಟ್ಟು 20 ಸಾವಿರ ಕೋಟಿ ರೂಪಾಯಿ ನೆರವು.
* ಮೀನುಗಾರಿಕೆ ಉದ್ಯಮದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿ.
* ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ಸಾಲ.

ಪಶುಗಳಿಗೆ ಲಸಿಕೆ
* ಡೈರಿ ಉತ್ಪನ್ನಗಳ ಪ್ರೋತ್ಸಾಹಕ್ಕೆ 15 ಸಾವಿರ ಕೋಟಿ ರೂಪಾಯಿ.
* ಎಲ್ಲಾ ಪಶುಗಳಿಗೆ 100% ರೋಗ ನಿರೋಧಕ ಲಸಿಕೆ. ಈಗಾಗಲೇ 1.5 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, 53 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು. ಲಸಿಕೆಗಾಗಿ 13,343 ಕೋಟಿ ಮೀಸಲು.
* ಪಶುಸಂಗೋಪನೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು.
* ಮಿಲ್ಕ್ ಪೌಡರ್, ಚೀಸ್, ಕ್ರೀಮ್ ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ.

ಔಷಧಿ ಸಸ್ಯಗಳ ಕೃಷಿ ಉತ್ತೇಜನಕ್ಕೆ 5 ಸಾವಿರ ಕೋಟಿ
* ಔಷಧಿ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ ರೂಪಾಯಿ.
* ಗಿಡಮೂಲಿಕೆ ನೆಡಲು ನೆರವು.
* ಗಂಗಾ ನದಿಯ ದಡದಲ್ಲಿ ಔಷಧೀಯ ಸಸ್ಯಗಳ ಕಾರಿಡಾರ್ ನಿರ್ಮಾಣ.
* ಜೇನು ಸಾಕಣೆಗಾಗಿ 500 ಕೋಟಿ ರೂಪಾಯಿ ಮೀಸಲು.
* 2 ಲಕ್ಷ ಜೇನು ಕೃಷಿಕರಿಗೆ ಅನುಕೂಲ ಮತ್ತು ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸೃಷ್ಟಿ.
* ಜೇನಿನಿಂದ ಉತ್ಪಾದನೆಯಾಗುವ ಮೇಣ ರಫ್ತು ಕಡಿತಕ್ಕೆ ಯತ್ನ

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ
* ಟೊಮ್ಯಾಟೊ, ಈರುಳ್ಳಿ, ಆಲೂಗೆಡ್ಡೆ ಬೆಳೆ ಸಾಗಣೆ ಮತ್ತು ಸಂಸ್ಕರಣೆಗೆ 500 ಕೋಟಿ ರೂಪಾಯಿ ಮತ್ತು ಸಾಗಾಟಕ್ಕೆ 50% ಸಬ್ಸಿಡಿ.
* ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ.
* ಎಣ್ಣೆ, ಬೇಳೆ, ಆಲೂಗೆಡ್ಡೆ, ಈರುಳ್ಳಿ ಸಂಗ್ರಹ ಮೇಲಿನ ನಿರ್ಬಂಧ ರದ್ದು.
* ರಾಷ್ಟ್ರೀಯ ವಿಪತ್ತು, ಬೆಲೆ ಏರಿಕೆ, ದರ ಕುಸಿತ, ಬರಗಾಲ ಮುಂತಾದ ಅಸಾಧಾರಣ ಸಂದರ್ಭಗಳಲ್ಲಿ ಶೇಖರಣಾ ಮಿತಿ ವಿಧಿಸಲಾಗುವುದು.

ಕೃಷಿ ಮಾರುಕಟ್ಟೆ ಸುಧಾರಣೆ
* ಕೃಷಿ ಮಾರುಕಟ್ಟೆಗಳಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ನಿರ್ಧಾರ.
* ರೈತರಿಗೆ ತಮಗಿಷ್ಟವಾದ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನ ಮಾರಾಟಕ್ಕೆ ಅವಕಾಶ.
* ಇದರಿಂದ ರೈತರಿಗೆ ಉತ್ತಮ ಆದಾಯ ಸಿಗಲಿದೆ.
* ಕೃಷಿ ಉತ್ಪನ್ನಗಳ ಅಂತಾರಾಜ್ಯ ಮುಕ್ತ ಮಾರಾಟಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ.
* ಇ-ಟ್ರೇಡಿಂಗ್ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಬಹುದು.
* ರೈತರು ಸಗಟು ಬೆಲೆಗೆ ಮಾರಾಟ ಮಾಡಲು ಕಾನೂನಿನ ಸ್ವರೂಪ ನೀಡಲಾಗುವುದು.












Click it and Unblock the Notifications