ರಾತ್ರಿ ಕರ್ಫ್ಯೂದಿಂದ ಯಾವ ಪ್ರಯೋಜನವೂ ಇಲ್ಲ: ತಜ್ಞರ ಅಭಿಪ್ರಾಯ
ನವದೆಹಲಿ, ನವೆಂಬರ್ 24: ಹಬ್ಬ ಹರಿದಿನಗಳ ಅವಧಿ ಮುಗಿದ ಕಳೆದ ಒಂದು ವಾರದಿಂದ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ರಾತ್ರಿ ನಿಷೇಧಾಜ್ಞೆ ಮೂಲಕ ಹೊಸದಾಗಿ ನಿಬಂಧನೆಗಳನ್ನು ವಿಧಿಸಲಾಗುತ್ತಿದೆ.
ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಅಹಮದಾಬಾದ್, ಸೂರತ್, ರಾಜ್ಕೋಟ್, ವಡೋದರಾ, ಭೋಪಾಲ್, ಇಂದೋರ್, ಗ್ವಾಲಿಯರ್, ಜೈಪುರ, ಜೋಧಪುರ, ಕೋಟಾ, ಬಿಕಾನೆರ್, ಉದಯಪುರ, ಅಜ್ಮೇರ್, ಅಲ್ವಾರ್ ಮತ್ತು ಭಿಲ್ವಾರಾಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜಸ್ಥಾನ ಸರ್ಕಾರವು ಮಾರುಕಟ್ಟೆಗಳು, ವಾಣಿಜ್ಯ ಸಂಕೀರ್ಣಗಳು, ಶಾಪಿಂಗ್ ಮಾಲ್ಗಳು ಮತ್ತು ರೆಸ್ಟೋರೆಂಟ್ಗಳನ್ನು ಸಂಜೆ 7ರಿಂದಲೇ ಮುಚ್ಚುವಂತೆ ಆದೇಶಿಸಿದೆ.
ಈ ನೆರೆ ರಾಜ್ಯಗಳ ನಗರಗಳಲ್ಲಿ ದೀಪಾವಳಿ ಹಬ್ಬದ ಅಂತ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಜೈಪುರದಲ್ಲಿ 400ಕ್ಕಿಂತ ಕಡಿಮೆ ಇದ್ದ ಹೊಸ ಕೋವಿಡ್ ಪ್ರಕರಣಗಳು ಈಗ 600ಕ್ಕಿಂತ ಹೆಚ್ಚಳವಾಗಿದೆ.

ಆದರೆ ಸ್ಥಳೀಯ ಮತ್ತು ಸೀಮಿತ ನಿರ್ಬಂಧಗಳಾದ ಈ ರಾತ್ರಿ ನಿಷೇಧಾಜ್ಞೆ ಆದೇಶವು ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ದೀಪಾವಳಿಗೂ ಮುನ್ನ ಮತ್ತು ಹಬ್ಬದ ಸಂದರ್ಭದಲ್ಲಿ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಮತ್ತು ಜನರ ನಡುವೆ ಸಮರ್ಪಕವಲ್ಲದ ವರ್ತನೆ ಕಂಡುಬರುತ್ತಿದೆ ಎಂದು ಪರಿಣತರು ಹೇಳಿದ್ದಾರೆ. ರಕ್ಷಣಾ ಕ್ರಮಗಳ ಸಂದೇಶಗಳನ್ನು ಒಳಗೊಂಡಿದ್ದರೆ ಮಾತ್ರ ಯಾವುದೇ ಹೊಸ ಮತ್ತು ಸ್ಥಳೀಯ ನಿಬಂಧನೆಗಳು ಪರಿಣಾಮಕಾರಿಯಾಗಬಲ್ಲವು ಎಂದಿದ್ದಾರೆ.
'ಹೆಚ್ಚಿನ ಸಾಮಾಜಿಕ ಚಟುವಟಿಕೆಗಳು ಮತ್ತು ಗುಂಪುಗೂಡುವಿಕೆ ಕಾರಣದಿಂದ ಇತ್ತೀಚೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ರಾತ್ರಿ ನಿಷೇಧಾಜ್ಞೆಗಳಿಂದ ಯಾವ ಪ್ರಯೋಜನವಾಗುತ್ತದೆ ಎಂದು ನನಗೆ ತಿಳಿದಿಲ್ಲ' ಎಂಬುದಾಗಿ ಸರ್ಕಾರದ ಕೋವಿಡ್ 19 ಪರಿವೀಕ್ಷಣಾ ಪರಿಣತರ ತಂಡದ ಸದಸ್ಯ ಡಿಸಿಎಸ್ ರೆಡ್ಡಿ ಹೇಳಿದ್ದಾರೆ.
'ಈ ನಿಷೇಧಾಜ್ಞೆಯು ಸೀಮಿತ ಸಂಖ್ಯೆಯಲ್ಲಿ ಜನರನ್ನು ನಿರ್ಬಂಧಿಸುತ್ತದೆ. ಏಕೆಂದರೆ ನಿಷೇಧಾಜ್ಞೆ ಶುರುವಾಗುವ ವೇಳೆಗೆ ಜನನಿಬಿಡ ಚಟುವಟಿಕೆಗಳ ಅವಧಿ ಮುಕ್ತಾಯಗೊಂಡಿರುತ್ತದೆ. ಹೀಗಿರುವಾಗ ಅದು ಯಾರನ್ನು ರಕ್ಷಿಸುತ್ತದೆ? ಪರೀಕ್ಷೆಗಳ ಪ್ರಮಾಣ ಹೆಚ್ಚುತ್ತಾ ಹೋದರೆ ಮತ್ತು ಜನಸಮುದಾಯಕ್ಕೆ ಮುನ್ನೆಚ್ಚರಿಕೆಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂದೇಶ ನೀಡಿದರೆ ಪರಿಣಾಮಕಾರಿಯಾಗಬಲ್ಲದು. ಜನರ ವರ್ತನೆಯನ್ನು ಬದಲಿಸುವತ್ತ ಗಮನ ಇರಬೇಕಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications