Breaking: ಭಟ್ಕಳ, ತುಮಕೂರು ಸೇರಿ 13 ಸ್ಥಳದಲ್ಲಿ ಎನ್ಐಎ ದಾಳಿ
ನವದೆಹಲಿ , ಜುಲೈ 31: ಐಸಿಸ್ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳಲ್ಲಿ ಶಂಕಿತರಿಗಾಗಿ 13 ಸ್ಥಳಗಳಲ್ಲಿ ಶೋಧ ನಡೆಸಿದೆ.
ಮಧ್ಯಪ್ರದೇಶ, ಗುಜರಾತ್, ಬಿಹಾರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ.
ಕರ್ನಾಟಕದ ಭಟ್ಕಳ ಮತ್ತು ತುಮಕೂರು ನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ದಾಳಿ ನಡೆಸಿದೆ. ಮಧ್ಯಪ್ರದೇಶದ ಭೋಪಾಲ್ ಮತ್ತು ರೈಸೆನ್ ಜಿಲ್ಲೆಗಳಲ್ಲಿ, ಗುಜರಾತ್ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್ ಜಿಲ್ಲೆಗಳು, ಬಿಹಾರದ ಅರಾರಿಯಾ ಜಿಲ್ಲೆ, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ನಾಂದೇಡ್ ಜಿಲ್ಲೆಗಳು ಮತ್ತು ಉತ್ತರ ಪ್ರದೇಶದ ದೇವಬಂದ್ ಜಿಲ್ಲೆಗಳಲ್ಲಿ ಕಾರ್ಯಚರಣೆ ನಡೆಸಲಾಗಿದೆ.
ರಾಜ್ಯದಲ್ಲಿ ಭಟ್ಕಳ ಮತ್ತು ತುಮಕೂರು ನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ದಾಳಿ ನಡೆಸಿ, ಮೂರು ಕಡೆ ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ರಾಜ್ಯ ಇಂಟಲಿಜೆನ್ಸ್, ಎನ್ಐಎ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯಾವ ಯಾವ ಸಂಘಟನೆ ಗೆ ಸೇರಿದ್ದವರು ಎಂದು ಪರಿಶೀಲನೆ ನಡೆಸಲಾಗುತ್ತಿದೆ.
ಕಳೆದ ಜೂನ್ 25, 2022 ರಂದು ಎನ್ಐಎ 153 ಎ ಮತ್ತು 153 ಬಿ ಐಪಿಸಿ ಮತ್ತು ಯುಎ (ಪಿ) ಕಾಯಿದೆಯ ಸೆಕ್ಷನ್ 18, 18 ಬಿ, 38, 39 ಮತ್ತು 40 ರ ಅಡಿಯಲ್ಲಿ ಸ್ವಯಂ-ಮೋಟೋ ಪ್ರಕರಣ ದಾಖಲಿಸಿಕೊಂಡಿದೆ.
ಇದಲ್ಲದೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಜೊತೆ ನಂಟು ಹೊಂದಿರುವ ಫುಲ್ವಾರಿ ಷರೀಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಗುರುವಾರ ಬೆಳಗ್ಗೆಯಿಂದ ನಳಂದಾ ಜಿಲ್ಲೆ ಸೇರಿದಂತೆ ಬಿಹಾರದ ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಎನ್ಐಎ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ ಸುಮಾರು ಒಂದು ವಾರದ ನಂತರ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.