ಭಾರತದಲ್ಲಿ ಲಂಕಾ ಮಾದರಿ ದಾಳಿಗೆ ಸಂಚು: ಐಸಿಸ್ ಶಂಕಿತ ಉಗ್ರ ಬಂಧನ
ನವದೆಹಲಿ, ಏಪ್ರಿಲ್ 29: ಶ್ರೀಲಂಕಾ ದಾಳಿಯ ಬಳಿಕ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಶಂಕಿತ ಐಸಿಸ್ ಉಗ್ರನನ್ನು ಸೋಮವಾರ ಬಂಧಿಸಿದ್ದಾರೆ.
ಬಂಧಿತನನ್ನು ರಿಯಾಸ್ ಎ. ಅಲಿಯಾಸ್ ರಿಯಾಸ್ ಅಬೂಬಕರ್ ಅಲಿಯಾಸ್ ಅಬು ಡುಜಾನಾ ಎಂದು ಗುರುತಿಸಲಾಗಿದೆ.
29 ವರ್ಷದ ರಿಯಾಸ್, ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಪ್ರಮುಖ ಸಂಚುಕೋರ ಎನ್ನಲಾಗಿರುವ ಜಹ್ರಾನ್ ಹಶೀಮ್ನಿಂದ ಸ್ಫೂರ್ತಿಗೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಹಶೀಮ್ನ ಭಾಷಣಗಳನ್ನು ವಿಡಿಯೋಗಳನ್ನು ವೀಕ್ಷಿಸುತ್ತಿದ್ದುದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಭಾರತದಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದ ಜಕೀರ್ ನಾಯ್ಕ್ನನ್ನೂ ಅನುಸರಿಸುತ್ತಿದ್ದೆ ಎಂದು ಹೇಳಿದ್ದಾನೆ.

ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ರಷೀದ್ ಅಬ್ದುಲ್ಲಾ ಅಲಿಯಾದ್ ಅಬು ಇಸಾ ಜತೆ ದೀರ್ಘ ಸಮಯದಿಂದ ಸಂಪರ್ಕ ಹೊಂದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಭಾರತದಲ್ಲಿ ಭಯೋತ್ಪಾದನಾ ದಾಳಿ ನಡೆಸುವಂತೆ ಇತರರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನೆ ನೀಡುತ್ತಿದ್ದ ಅಬ್ದುಲ್ಲಾನ ಆಡಿಯೋ ಕ್ಲಿಪ್ಪಿಂಗ್ ಸೇರಿದಂತೆ ಆತನ ಹೇಳಿಕೆಗಳನ್ನು ಪಾಲಿಸುತ್ತಿದ್ದುದ್ದಾಗಿ ತಿಳಿಸಿದ್ದಾನೆ.
ಸಿರಿಯಾದಲ್ಲಿ ಇರಬಹುದು ಎಂದು ಶಂಕಿಸಲಾಗಿರುವ ವಲ್ಲಪಟ್ಟಣಂ ಐಸಿಸ್ ಪ್ರಕರಣದ ಆರೋಪಿ ಅಬ್ದುಲ್ ಖಯೂಮ್ ಅಲಿಯಾಸ್ ಅಬು ಖಾಲಿದ್ ಜತೆ ಆನ್ಲೈನ್ ಚಾಟ್ ನಡೆಸುತ್ತಿದ್ದ ಮಾಹಿತಿಯನ್ನೂ ಆತ ನೀಡಿದ್ದಾನೆ.
ರಿಯಾಸ್ನ ಬಂಧನದಿಂದ ಅಬ್ದುಲ್ ರಷೀದ್, ಅಷ್ಫಾಕ್ ಮಜೀದ್, ಅಬ್ದುಲ್ ಖಯೂಮ್ ಸೇರಿದಂತೆ ಈಗಾಗಲೇ ಅಫ್ಘಾನಿಸ್ತಾನ ಮತ್ತು ಸಿರಿಯಾಗಳಿಗೆ ವಲಸೆ ಹೋಗಿರುವ ಕೆಲವು ಭಯೋತ್ಪಾದನಾ ಆರೋಪಿಗಳೊಂದಿಗೆ ನಾಲ್ವರ ಗುಂಪೊಂದು ಸತತ ಸಂಪರ್ಕದಲ್ಲಿದೆ ಎಂಬ ಮಾಹಿತಿ ದೊರೆತಿದೆ.
ಕೆಲವು ಮಾಹಿತಿಗಳ ಆಧಾರದಲ್ಲಿ ಎನ್ಐಎ ಕಾಸರಗೋಡು ಮತ್ತು ಪಲಕ್ಕಾಡ್ನ ಮೂರು ಕಡೆ ಭಾನುವಾರ ಕಾರ್ಯಾಚರಣೆ ನಡೆಸಿತ್ತು. ದಾಳಿಗಳ ಬಳಿಕ ಮೂರು ಗುಂಪುಗಳ ಸದಸ್ಯರನ್ನು ಐಎಸಿಸ್ ನಂಟಿನ ಸಂಪರ್ಕದ ಕುರಿತು ಪ್ರಶ್ನಿಸಲಾಗಿದೆ.












Click it and Unblock the Notifications