2 ಸಾವಿರ ರುಪಾಯಿ ನೋಟಿನ ಆಯುಷ್ಯ ಕೆಲವೇ ವರ್ಷ: ಗುರುಮೂರ್ತಿ
ಚೆನ್ನೈ, ಡಿಸೆಂಬರ್ 12: ಇನ್ನು ಕೆಲ ವರ್ಷಗಳಲ್ಲಿ 2,000 ಮುಖಬೆಲೆ ನೋಟುಗಳನ್ನು ಕೂಡ ವಾಪಸ್ ಪಡೆಯಲಾಗುತ್ತದೆ ಎಂದು ಆರ್ ಎಸ್ ಎಸ್ ಸಿದ್ಧಾಂತದ ಪ್ರತಿಪಾದಕ, ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಎಸ್.ಗುರುಮೂರ್ತಿ ಹೇಳಿದ್ದಾರೆ. ಇಂಡಿಯಾ ಟುಡೆ ಜೊತೆ ಮಾತನಾಡಿದ ಅವರು, ಎರಡು ಸಾವಿರ ರುಪಾಯಿ ನೋಟು ಬಿಡುಗಡೆ ಮಾಡಿರುವ ಉದ್ದೇಶವೇ ಬೇರೆ ಎಂದಿದ್ದಾರೆ.
ಅಪನಗದೀಕರಣದಿಂದ ಎದುರಾಗುವ ನಗದು ಸಮಸ್ಯೆಯ ಕಂದಕವನ್ನು ಸರಿಪಡಿಸುವ ಕಾರಣಕ್ಕಷ್ಟೇ 2 ಸಾವಿರ ರುಪಾಯಿ ನೋಟು ಪರಿಚಯಿಸಲಾಗಿದೆ. ಕಡಿಮೆ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿರಬೇಕು ಎಂಬ ನಿರ್ಧಾರಕ್ಕೆ ಕೇಂದ್ರ ಸರಕಾರ ಬದ್ಧವಾಗಿದೆ. ಮುಂದಿನ ಐದು ವರ್ಷಗಳಲ್ಲಿ ದೊಡ್ಡ ಮುಖಬೆಲೆ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಆರ್ ಎಸ್ ಎಸ್ ಸಂಘಟನೆ ಬೆಂಬಲಿತ ವಿವೇಕಾನಂದ ಫೌಂಡೇಷನ್ ನ ಮುಖ್ಯ ಸದಸ್ಯರು ಎಸ್.ಗುರುಮೂರ್ತಿ. ಅದರ ಹೊರತಾಗಿಯೂ ನರೇಂದ್ರ ಮೋದಿ ಸರಕಾರದ ಹಿರಿಯರು ಅಪನಗದೀಕರಣದ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಗುರುಮೂರ್ತಿಯವರ ಜತೆ ಸಂಪರ್ಕದಲ್ಲಿರುತ್ತಾರೆ.
ದೇಶದಲ್ಲಿ ಮುಂದೆ 500 ರುಪಾಯಿ ನೋಟು ಅತಿ ಹೆಚ್ಚು ಮುಖಬೆಲೆಯ ನೋಟಾಗಿರುತ್ತದೆ. ಅ ನಂತರ 250 ಹಾಗೂ 100 ರುಪಾಯಿ ಮುಖಬೆಲೆಯ ನೋಟುಗಳಿರುತ್ತವೆ ಎಂದು ಅವರು ಹೇಳಿದ್ದಾರೆ.