'ಪಯಣ ಈಗ ಆರಂಭ': ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾದ ಬಳಿಕ ಗಾಂಧಿ ಕುಟುಂಬಕ್ಕೆ ಸಿಧು ಧನ್ಯವಾದ
ಚಂಡೀಗಢ, ಜು.19: ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಕ್ಷೇಪಣೆಯ ಹೊರತಾಗಿಯೂ ಹೊಸ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡ ನವಜೋತ್ ಸಿಂಗ್ ಸಿಧು ತಮಗೆ ನೀಡಿದ ಪ್ರಮುಖ ಜವಾಬ್ದಾರಿಗಾಗಿ ಗಾಂಧಿ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ "ಪ್ರಯಾಣವು ಇದೀಗ ಪ್ರಾರಂಭವಾಗಿದೆ" ಎಂದು ಹೇಳಿದರು.
ದಿನಗಳ ಪ್ರಕ್ಷುಬ್ಧತೆ ಮತ್ತು ಅನಿಶ್ಚಿತತೆಯ ನಂತರದ ತಡರಾತ್ರಿಯ ಪ್ರಕಟಣೆಯ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು ತನ್ನ ತಂದೆಯಾದ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ತಮ್ಮ ರಾಜಮನೆತನದವರನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಸೇರಿದವರು ಎಂದು ಕೂಡಾ ಉಲ್ಲೇಖಿಸಿದ್ದಾರೆ.
"ಸಮೃದ್ಧಿ, ಸವಲತ್ತು ಮತ್ತು ಸ್ವಾತಂತ್ರ್ಯವನ್ನು ಎಲ್ಲರಿಗೂ ಹಂಚಿಕೊಳ್ಳಲು ನನ್ನ ತಂದೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ರಾಜಮನೆತನದ ಮನೆಯೊಂದನ್ನು ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಸೇರಿಕೊಂಡರು. ಅವರ ದೇಶಭಕ್ತಿಯ ಕೆಲಸಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು," ಎಂದು ಬರೆದುಕೊಂಡಿದ್ದಾರೆ. ಅಮರಿಂದರ್ ಸಿಂಗ್ ತಂದೆ ಕೂಡಾ ಹಿಂದಿನ ರಾಜಪ್ರಭುತ್ವದ ಪಟಿಯಾಲದ ಆಡಳಿತಗಾರರಾಗಿದ್ದರು.

"ಇಂದು, ಅದೇ ಕನಸಿಗೆ ಮತ್ತಷ್ಟು ಕೆಲಸ ಮಾಡಲು ಮತ್ತು ಕಾಂಗ್ರೆಸ್, ಪಂಜಾಬ್ನ ಅಜೇಯ ಕೋಟೆಯನ್ನು ಬಲಪಡಿಸುವ ವಿಚಾರದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿಯುತ ಸ್ಥಾನ ನೀಡಲಾಗಿದೆ. ಅದಕ್ಕಾಗಿ ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜಿ ಗೆ ನಾನು ಆಭಾರಿಯಾಗಿದ್ದೇನೆ," ಎಂದು ಧನ್ಯವಾದ ತಿಳಿಸಿದ್ದಾರೆ.
"ಪಂಜಾಬ್ ಮಾಡೆಲ್ ಮತ್ತು ಹೈಕಮಾಂಡ್ನ 18 ಅಂಶಗಳ ಅಜೆಂಡಾ ಮೂಲಕ ಜನರ ಶಕ್ತಿಯನ್ನು ಜನರಿಗೆ ಮರಳಿ ನೀಡುವ ವಿನಮ್ರ ಕಾಂಗ್ರೆಸ್ ಕಾರ್ಯಕರ್ತರಾಗಿ, ಪಂಜಾಬ್ ಗೆಲ್ಲುತ್ತದೆ ಎಂಬ ಧ್ಯೇಯವನ್ನು ಪೂರೈಸಲು ಪಂಜಾಬ್ನ ಕಾಂಗ್ರೆಸ್ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಕೆಲಸ ಮಾಡುತ್ತೇನೆ. ನನ್ನ ಪಯಣ ಇದೀಗ ಪ್ರಾರಂಭವಾಗಿದೆ," ಎಂದಿದ್ದಾರೆ.
ಕ್ರಿಕೆಟಿಗರಾಗಿದ್ದ ನವಜೋತ್ ಸಿಂಗ್ ಸಿಧು ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಹಿರಿಯ ನಾಯಕರು ಇರುವಾಗ ನವಜೋತ್ ಸಿಂಗ್ ಸಿಧುಗೆ ಪಂಜಾಬ್ನಲ್ಲಿ ನಾಯಕತ್ವ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications