ಉರಿ ಭಯೋತ್ಪಾದಕ ದಾಳಿ, ಅಜರ್ ಮೇಲೆ ಎನ್ಐಎ ಟಾರ್ಗೆಟ್
ನವದೆಹಲಿ, ಸೆ. 20: ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಉರಿಯಲ್ಲಿರುವ ಸೇನಾ ಕ್ಯಾಂಪಿನ ಮೇಲೆ ಉಗ್ರರು ದಾಳಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದೆ. 18 ಮಂದಿ ಭಾರತೀಯ ಯೋಧರು ಹುತಾತ್ಮರಾದ ಈ ಘಟನೆಗೆ ಕಾರಣರಾದ ವಂಚಕರ ಪತ್ತೆಗೆ ತನಿಖೆ ಆರಂಭವಾಗಿದೆ.
ಉರಿ ಘಟನೆಗೆ ಕಾರಣರಾದ ನಾಲ್ವರು ಜೈಶ್ ಎ ಮೊಹಮ್ಮದ್ ಭಯೋತ್ಪಾದಕರ ಡಿಎನ್ಎ ಮಾದರಿಯನ್ನು ಎನ್ ಐಎ ಸಂಗ್ರಹಿಸುತ್ತಿದೆ. ಸೇನಾ ಕ್ಯಾಂಪಿನ ಮಾಹಿತಿಯನ್ನು ಯಾರು ಸೋರಿಕೆ ಮಾಡಿದರು ಎಂಬುದರ ಬಗ್ಗೆ ಮೊದಲಿಗೆ ತನಿಖ
ೆ ನಡೆಸಲಾಗುತ್ತಿದೆ.

ಭಾನುವಾರ ಮುಂಜಾನೆ ಉರಿಯಲ್ಲಿರುವ ಸೇನಾ ನೆಲೆ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಮಂದಿ ಸೈನಿಕರ ಸಾವನ್ನಪ್ಪಿದ್ದರು. ಮತ್ತೊಬ್ಬ ಯೋಧರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಪಾಕ್ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಶ್-ಎ-ಮೊಹಮ್ಮದ್ (ಜೆಇಎಂ) ಈ ದಾಳಿ ಎಸಗಿದೆ ಎಂದು ಭಾರತ ಆಪಾದಿಸಿದೆ.
ಈ ನಡುವೆ ಜೈಶ್ ಇ ಮೊಫಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲನಾ ಮಸೂದ್ ಅಜರ್ ನನ್ನು ಭಯೋತ್ಪಾದಕ ಎಂದು ಘೋಷಿಸಲು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪಂಜಾಬಿನ ಪಠಾಣ್ ಕೋಟ್ ದಾಳಿ ವೇಳೆಯಲ್ಲೂ ಕೂಡಾ ಅಜರ್ ನನ್ನು ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಚೀನಾದಿಂದ ವಿರೋಧ ವ್ಯಕ್ತವಾಗಿತ್ತು. ಪಠಾಣ್ ಕೋಟ್ ಹಾಗೂ ಉರಿ ದಾಳಿಯ ರೂವಾರಿ ಅಜರ್ ನನ್ನು ಭಯೋತ್ಪಾದಕ ಎಂದು ಘೋಷಿಸಿದರೆ ಯುಎಸ್ ಸೇರಿದಂತೆ ಪ್ರಮುಖ ದೇಶಗಳ ನೆರವು ಪಡೆದು ಎನ್ ಐಎ ತನಿಖೆ ತೀವ್ರಗೊಳಿಸಲು ಸಾಧ್ಯವಿದೆ.
ಉರಿ ಬೇಸ್ ಕ್ಯಾಂಪಿನ ಬಳಿ ಇರುವ ಜಿಪಿಎಸ್ ಸೆಟ್ ಅನ್ನು ಯುಎಸ್ ಎ ಗೆ ಕಳಿಸಿ ಅಲ್ಲಿನ ವಿಧಿವಿಜ್ಞಾನ ಇಲಾಖೆ ತಜ್ಞರ ಅಭಿಪ್ರಾಯ ಪಡೆಯಲು ಎನ್ ಐಎ ಮುಂದಾಗಿದೆ.ಈ ಮೂಲಕ ಭಾರತದೊಳಗೆ ಉಗ್ರರು ನುಸುಳಿದ ಮಾರ್ಗವನ್ನು ಪತ್ತೆ ಹಚ್ಚಬಹುದಾಗಿದ್ದು, ಮೂಲವನ್ನು ನಾಶ ಪಡಿಸಲು ಇದು ಸಹಕಾರಿಯಾಗಿದೆ.
ಅಜರ್ ನನ್ನು ಭಯೋತ್ಪಾದಕ ಎಂದು ಘೋಷಿಸದ ಕಾರಣ ಪಠಾಣ್ ಕೋಟ್ ದಾಳಿ ತನಿಖೆ ವಿಳಂಬವಾಗಿದ್ದು, ಪಾಕಿಸ್ತಾನಕ್ಕೆ ಎನ್ ಐಎ ತಂಡ ತೆರಳಲು ಅನುಮತಿ ಸಿಕ್ಕಿಲ್ಲ. ಪಾಕಿಸ್ತಾನದ ತಂಡ ಭಾರತಕ್ಕೆ ಬಂದು ಮಾಹಿತಿ ಸಂಗ್ರಹಿಸಲು ಭಾರತ ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಒನ್ಇಂಡಿಯಾ ಸುದ್ದಿ)












Click it and Unblock the Notifications