ಖರ್ಗೆಯವರೇ, ನೀವಾದರೂ ನಿಮ್ಮ ಪಕ್ಷದವರಿಗೆ ಬುದ್ದಿ ಹೇಳಬಾರದೇ?
ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲವೆಂದು ದೊಡ್ಡ ದೊಡ್ಡ ಭಾಷಣ ಬಿಗಿಯುವ ಶತಮಾನಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದು, ನ್ಯಾಯಾಲಯದ ಆದೇಶದ ವಿರುದ್ದ ಲೋಕಸಭೆಯ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದೆ.
ಗಾಂಧಿ ಕುಟುಂಬದ ವೈಯಕ್ತಿಕ ಭ್ರಷ್ಟಾಚಾರ ಹಗರಣವನ್ನು ಮುಂದಿಟ್ಟುಕೊಂಡು ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ತಗಲುವ ಸದನದ ಸಮಯವನ್ನು ಪೋಲು ಮಾಡುತ್ತಿರುವ ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಗೌರವ ಇದೆಯೇ ಎಂದು ಜನಸಾಮಾನ್ಯರು ಶಂಕಿಸುವಂತಾಗಿದೆ. (ಸೋನಿಯಾಗೆ ಹುಟ್ಟುಹುಬ್ಬದ ಶುಭಾಶಯ ಕೋರಿದ ಮೋದಿ)
ನ್ಯಾಷನಲ್ ಹೆರಾಲ್ಡ್ ಪ್ರಕರಣ ಕೋರ್ಟ್ ಮೆಟ್ಟಲೇರಲು ಬಿಜೆಪಿ ಮುಖಂಡರೊಬ್ಬರು ಕಾರಣ ಎನ್ನುವುದನ್ನೇ ನೆಪವಾಗಿ ಇಟ್ಟುಕೊಂಡು, ಕಾಂಗ್ರೆಸ್ ಮುಖಂಡರು ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕವಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿನ ಬಹು ಚರ್ಚಿತ ವಿಷಯ.
ದೇಶದ ಅಭಿವೃದ್ದಿಗೆ ಪೂರಕವಾಗುವಂತಹ ಹಲವು ಮಸೂದೆಗಳನ್ನು ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ಮುಂದಾಗಿರುವ ಕೇಂದ್ರ ಸರಕಾರಕ್ಕೆ ಹಿನ್ನಡೆ ತರಲೆಂದೇ ಕಾಂಗ್ರೆಸ್, ಸಂಸತ್ತಿನ ಸಮಯವನ್ನು ಹಾಳು ಮಾಡುತ್ತಿದೆ ಎನ್ನುವುದು ಒಂದೆಡೆ.
ಇನ್ನೊಂದೆಡೆ ತಮ್ಮ ಕುಟುಂಬದ ಮೇಲೆ ಬಂದಿರುವ ಭ್ರಷ್ಟಾಚಾರದ ಪ್ರಕರಣವನ್ನು ದಿಕ್ಕು ತಪ್ಪಿಸಲು, ಕಾಂಗ್ರೆಸ್ ಇದನ್ನು ಪ್ರಧಾನಮಂತ್ರಿ ಕಾರ್ಯಾಲಯದ ಕೃಪಾಪೋಷಿತ ಸಂಚು ಎಂದು ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲು ನೋಡುತ್ತಿದೆ ಎನ್ನುವುದು ಇನ್ನೊಂದಷ್ಟು ಜನರು ಮಾತನಾಡಿ ಕೊಳ್ಳುತ್ತಿರುವ ರೀತಿ. (ನಾನು ಇಂದಿರಾ ಸೊಸೆ ನಾನ್ಯಾಕೆ ಹೆದರಲಿ, ಸೋನಿಯಾ)
ನ್ಯಾಷನಲ್ ಹೆರಾಲ್ಡ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಕೆಲವು ಮುಖಂಡರು ಖುದ್ದು ಪಾಟಿಯಾಲ ಕೋರ್ಟಿಗೆ ಡಿ. 19ರಂದು ಹಾಜರಾಗುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಮುಂದೆ ಓದಿ..

ಕೇಸಿನಿಂದ ಕ್ಲೀನ್ ಚಿಟ್ ಪಡೆಯಲು ಹೋರಾಟ ನಡೆಸಲಿ
ನ್ಯಾಯಾಲಯದ ಖುದ್ದು ಹಾಜರಾತಿಯ ಆದೇಶದಿಂದ ತೀವ್ರ ಮುಖಭಂಗ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡರು, ಕೋರ್ಟಿನಲ್ಲಿ ಸೂಕ್ತ ಸಾಕ್ಷ್ಯಾಧಾರ ನೀಡಿ ಕೇಸಿನಿಂದ ಕ್ಲೀನ್ ಚಿಟ್ ಪಡೆಯಲು ಹೋರಾಟ ನಡೆಸುವ ಬದಲು ಸಂಸತ್ತಿನ ಸಮಯವನ್ನು ಹಾಳು ಮಾಡುವ ಮೂಲಕ ವಾಮಮಾರ್ಗ ಅನುಸರಿಸುತ್ತಿರುವುದು ಸರಿಯೇ?

ಮಲ್ಲಿಕಾರ್ಜುನ ಖರ್ಗೆ
ಇದೆಲ್ಲಕ್ಕಿಂತ ಹೆಚ್ಚಾಗಿ ಹಿರಿಯರಾದ, ರಾಜಕೀಯವನ್ನು ಅರಿದು ಕುಡಿದಿರುವ, ಲೋಕಸಭೆಯಲ್ಲಿ ವಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಏನಾಗಿದೆ? ಕಾಂಗ್ರೆಸ್ ಪಕ್ಷ ಪ್ರತಿಭಟನೆಗೆ ಹಿಡಿದಿರುವ ದಾರಿ ತಪ್ಪು ಎನ್ನುವುದನ್ನು ಮೇಡಂ ಮತ್ತು ಯುವರಾಜರಿಗೆ ಮನದಟ್ಟು ಮಾಡಲು ಖರ್ಗೆಯವರಿಗೆ ಅನುಭದ ಕೊರತೆ ಇದೆಯೇ ಅಥವಾ ಅಂಜಿಕೆಯೇ ಎನ್ನುವುದು ಇಲ್ಲಿ ಕಾಡುವ ಪ್ರಶ್ನೆ.

ಇದ್ಯಾವ ರಾಜಕೀಯ ತಂತ್ರಗಾರಿಕೆ
ವಿರೋಧ ಪಕ್ಷದವರು ಆಡಳಿತ ಪಕ್ಷವನ್ನು ಟೀಕಿಸುವುದು ಅಮೆರಿಕಾದಲ್ಲೂ ಇರಬಹುದು, ಆದರೆ ದೇಶದ ಅಭಿವೃದ್ದಿ ವಿಚಾರದಲ್ಲಿ ಅಲ್ಲ. ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಗೆ ಬಹುಮತವಿಲ್ಲ ಎನ್ನುವ ಕಾರಣಕ್ಕಾಗಿ ಯಾವ ಮಸೂದೆಯನ್ನೂ ಪಾಸ್ ಮಾಡಲು ಬಿಡದೇ ಇರುವುದು ಇದ್ಯಾವ ರಾಜಕೀಯ ಚಾಣಕ್ಯತನವೋ, ತಂತ್ರಗಾರಿಕೆಯೋ?

ರಾಹುಲ್ ಗಾಂಧಿ
ನ್ಯಾಯಾಂಗವನ್ನು ಬೆದರಿಸುತ್ತಿರುವುದು ಬಿಜೆಪಿಯವರು ಎನ್ನುವ ಹೇಳಿಕೆಯನ್ನು ರಾಹುಲ್ ಗಾಂಧಿ ಸಂಸತ್ತಿನಲ್ಲಿ ನೀಡಿದ್ದಾರೆ, ಹಾಗಿದ್ದಲ್ಲಿ ಇದುವರೆಗೆ ಬಹುತೇಕ ಅಧಿಕಾರದ ರುಚಿಯುಂಡಿರುವ ಕಾಂಗ್ರೆಸ್ಸಿನವರು ವಿರೋಧ ಪಕ್ಷದವರಿಗೆ ಮಾಡಿದ್ದು ಇದನ್ನೆನ್ನಾ? ಅದೆಷ್ಟೋ ಕಾಂಗ್ರೆಸ್ಸೇತರ ರಾಜಕಾರಣಿಗಳು ಶಿಕ್ಷೆ ಅನುಭವಿಸಲಿಲ್ಲವೇ?

ಸಲ್ಮಾನ್ ಖಾನ್
ನ್ಯಾಯಾಲದ ಆದೇಶವನ್ನೇ ಅಣಕವಾಡಲು ಹೊರಟಿರುವ ಕಾಂಗ್ರೆಸ್ಸಿಗರು, ಒಂದು ವೇಳೆ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ ವಿರುದ್ದ ಕೋರ್ಟ್ ತೀರ್ಪು ಬಂದಿದ್ದರೆ ಅದಕ್ಕೂ ಮೋದಿ ಸರಕಾರವನ್ನು ಜವಾಬ್ದಾರಿಯನ್ನಾಗಿ ಮಾಡುತ್ತಿದ್ದರೇ?

ಬುದ್ದಿಜೀವಿಗಳು, ರಾಷ್ಟ್ರೀಯ ಮಾಧ್ಯಮಗಳು
ವೈಯಕ್ತಿಕ ಭ್ರಷ್ಟಾಚಾರದ ಕೋರ್ಟ್ ಆದೇಶದ ವಿಚಾರದಲ್ಲಿ ಸಂಸತ್ತಿನ ಸಮಯವನ್ನು ಒಂದು ವೇಳೆ ಬಿಜೆಪಿ ಹಾಳು ಮಾಡಿದ್ದರೆ, ನಮ್ಮ ಬುದ್ದಿಜೀವಿಗಳು, ರಾಷ್ಟ್ರೀಯ ಮಾಧ್ಯಮಗಳು ಬಿಜೆಪಿಯನ್ನು ಹುರಿದು ಮುಕ್ಕುತ್ತಿರಲಿಲ್ಲವೇ? ನಾಗರೀಕ ಸಮಾಜಕ್ಕೆ ಬುದ್ದಿಜೀವಿಗಳ ಕಾಳಜಿ ಏನೆಂದು ಈಗಲಾದರೂ ಗೊತ್ತಾಗುವಂತಾಗಲಿ. ಜನಪ್ರತಿನಿಧಿಗಳಿಗೆ ಸಂಸತ್ತಿನ ಪಾವಿತ್ರ್ಯತೆಯ ಅರಿವಾಗಲಿ.












Click it and Unblock the Notifications