ಬನ್ನಿ ಒಟ್ಟಿಗೆ ಕೆಲಸ ಮಾಡೋಣ: ಮೋದಿ ಪತ್ರ
ನವದೆಹಲಿ, ಮೇ.26: ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ದೇಶದ ನಾಗರಿಕರನ್ನು ಉದ್ದೇಶಿಸಿ ನರೇಂದ್ರ ಮೋದಿ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಅಂತ್ಯೋದಯ ನಮ್ಮ ಮೂಲ ಮಂತ್ರವಾಗಿದೆ ಎಂದಿರುವ ಮೋದಿ ಅವರು ಎನ್ ಡಿಎ ಸರ್ಕಾರದ ಜನಪರ ಯೋಜನೆಗಳ ವಿವರ ನೀಡಿ, ಬನ್ನಿ ಒಟ್ಟಿಗೆ ಕಾರ್ಯ ನಿರ್ವಹಿಸೋಣ ಎಂದು ಕರೆ ನೀಡಿದ್ದಾರೆ.
ಜನಧನ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಬಗ್ಗೆ ಉಲ್ಲೇಖಿಸಿದ್ದಾರೆ. ಅಂತ್ಯೋದಯ, ಅನ್ನದಾತ ಸುಖೀ ಭವ ನಮ್ಮ ಮೂಲ ಮಂತ್ರ. ಆಹಾರ ಭದ್ರತೆ, ಕೃಷಿ ಸಿಂಚನಾ ಯೋಜನೆ, ಮಣ್ಣಿನ ಫಲವತ್ತತೆ ಕಾರ್ಡ್, ಯೂರಿಯಾ ಯೋಜನೆ ಇದಕ್ಕೆ ಪೂರಕ ಎಂದಿದ್ದಾರೆ.
ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ, ಕಲ್ಲಿದ್ದಲು, ತರಂಗಾಂತರಗಳ ಹಂಚಿಕೆ ಅವ್ಯವಹಾರ ಸರಿಪಡಿಸುವುದು ನಮ್ಮ ಉದ್ದೇಶ.

ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಯುವ ಜನತೆಗೆ ಅಪಾರ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಸಣ್ಣ ಉದ್ಯಮಿಗಳಿಗೆ 10 ಸಾವಿರದಿಂದ 10 ಲಕ್ಷ ರು ತನಕ ಸಾಲ ನೀಡುವ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ಪಾಲನೆ, ಶೌಚಾಲಯ ನಿರ್ಮಾಣ, ಸ್ವಚ್ಛಭಾರತ ಅಭಿಯಾನ ಜಾರಿಯಲ್ಲಿದೆ. ಬೇಟಿ ಬಚಾವೋ-ಬೇಟಿ ಪಢಾವೋ ಆಂದೋಲನ ತೀವ್ರಗೊಳ್ಳುತ್ತಿದೆ.
ನಮಾಮಿ ಗಂಗೆ ಯೋಜನೆ ಮೂಲಕ ಗಂಗಾ ನದಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಡಿಜಿಟಲ್ ಇಂಡಿಯಾ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಗ್ಗೂಡಿಸಿ ಅಂತರ ಕಡಿಮೆ ಮಾಡಲಾಗಿದೆ. ಈಗ ನಾಗರಿಕರೇ ನಿಮ್ಮ ಸರದಿ, ನಮ್ಮೊಟ್ಟಿಗೆ ಕೈಜೋಡಿಸಿ ನಿಮ್ಮ ಬದುಕು ಹಸನಾಗಿಸಿಕೊಳ್ಳಿ ಎಂದು ಮೋದಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ. [ಪತ್ರದ ಪೂರ್ಣ ಪಾಠ ಇಲ್ಲಿದೆ]












Click it and Unblock the Notifications