ದೇಶದ ಅತಿ ದೊಡ್ಡ ಸುರಂಗದ ಮನಮೋಹಕ ಚಿತ್ರಗಳು
ದಕ್ಷಿಣ ಏಷ್ಯಾದ ಮೊದಲ ದ್ವಿಪಥ ಸುರಂಗ ಮಾರ್ಗ ಹಾಗೂ ದೇಶದ ಅತೀ ದೊಡ್ಡ ಸುರಂಗ ಮಾರ್ಗ ಎಂಬ ಕೀರ್ತಿಗೆ ಪಾತ್ರವಾಗರುವ ಚೆನಾನಿ-ನಶ್ರಿ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 2: ದಕ್ಷಿಣ ಏಷ್ಯಾದ ಮೊದಲ ದ್ವಿಪಥ ಸುರಂಗ ಮಾರ್ಗ ಹಾಗೂ ದೇಶದ ಅತೀ ದೊಡ್ಡ ಸುರಂಗ ಮಾರ್ಗ ಎಂಬ ಕೀರ್ತಿಗೆ ಪಾತ್ರವಾಗರುವ ಚೆನಾನಿ-ನಶ್ರಿ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಸುಮಾರು 3720 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಸುರಂಗ ಮಾರ್ಗವನ್ನು ಪಟ್ನಿಪಾತ್ ಪರ್ವತದಲ್ಲಿ ಕೊರೆಯಲಾಗಿದೆ. ಚೆನಾನಿ ಮತ್ತು ನಶ್ರಿ ಪ್ರದೇಶಗಳನ್ನು ಈ ಸುರಂಗ ಮಾರ್ಗ ಸಂಪರ್ಕಿಸುತ್ತದೆ. ಈ ಕಾರಣಕ್ಕೆ ಇದಕ್ಕೆ ಚೆನಾನಿ-ನಶ್ರಿ ಎಂದು ಹೆಸರಿಡಲಾಗಿದೆ.
ವಿಶ್ವದರ್ಜೆಯ ತಂತ್ರಜ್ಞಾನಗಳಿರುವ ದೇಶದ ಮೊದಲ ಸುರಂಗ ಮಾರ್ಗ ಇದಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, 9.2 ಕಿ.ಮೀ ಉದ್ದದ ಸುರಂಗಮಾರ್ಗದಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.
9 ಕಿಲೋಮೀಟರ್ ಉದ್ದ
ಈ ಸುರಂಗದ ಉದ್ದ ಬರೋಬ್ಬರಿ 9 ಕಿಲೋಮೀಟರ್. ಈ ಯೋಜನೆಯನ್ನು ಕೇಂದ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಂಟಿಯಾಗಿ ನಿರ್ಮಿಸಿದೆ. ಸುರಂಗ ಮಾರ್ಗ ಶ್ರೀನಗರದಿಂದ 170 ಕಿಲೋಮೀಟರ್ ದೂರದಲ್ಲಿದೆ. ಈ ಹಿಂದೆ ಪಟ್ನಿಟಾಪ್ ಪ್ರದೇಶವನ್ನು ದಾಟಿಕೊಂಡು ಹೋಗಬೇಕಾದರೆ 41 ಕಿಲೋಮೀಟರ್ ಕ್ರಮಿಸಬೇಕಾಗಿತ್ತು. ಈಗ ಸುಮಾರು 31 ಕಿಲೋಮೀಟರ್ ಗಳಷ್ಟು ದೂರ ಕಡಿತಗೊಳ್ಳಲಿದೆ.
ಪರ್ವತದೊಳಗಿನ ಸುರಂಗ
ಕಾಶ್ಮೀರದ ಪ್ರಮುಖ ಪ್ರವಾಸಿ ಸ್ಥಳ ಪಟ್ನಿಟಾಪ್ ಪರ್ವತದ ಮೇಲಿನಿಂದ ಜಮ್ಮು - ಶ್ರೀನಗರ ರಾಷ್ಟೀಯ ಹೆದ್ದಾರಿ ಹಾದು ಹೋಗುತ್ತದೆ. ಇದೊಂದು ದುರ್ಗಮ ಘಾಟಿ ರಸ್ತೆ. ಚಳಿಗಾಲ ಬಂದರಂತೂ ರಸ್ತೆ ಮಂಜಿನಿಂದ ಆವರಿಸಿ ಅಪಘಾತಗಳು ಹೆಚ್ಚಾಗಿ, ಅಪಾರ ಸಾವು ನೋವು ಸಂಭವಿಸುತ್ತಿದ್ದವು. ಭೂ ಕುಸಿತ ಸಂಭವಿಸಿದರಂತೂ ದಿನಗಟ್ಟಲೆ ವಾಹನಗಳು ರಸ್ತೆಯಲ್ಲೇ ಬಾಕಿಯಾಗಿ ವಾಹನ ಸವಾರರು ಪಡಬಾರದ ಪಾಡು ಪಡಬೇಕಾಗುತ್ತಿತ್ತು. ಇದನ್ನು ತಪ್ಪಿಸಲೆಂದೇ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಇದ್ರಿಂದ ಪ್ರಯಾಣಿಕರ ಅಪಾಯಗಳೆಲ್ಲಾ ನಿವಾರಣೆಯಾಗಿವೆ. ಜತೆಗೆ ಸಮಯ ಹಣ ಎರಡೂ ಉಳಿತಾಯವಾಗಲಿದೆ.
3 ಗಂಟೆಯಿಂದ 9 ನಿಮಿಷಕ್ಕೆ
ಮೊದಲು ಇಲ್ಲಿ ರಸ್ತೆಯಲ್ಲಿ ಸಾಗಬೇಕಾದರೆ ಕಡಿಮೆ ಎಂದರೂ 2 ಗಂಟೆ ಬೇಕಿತ್ತು. ಆದರೆ ಈ ಸುರಂಗ ಮಾರ್ಗದಿಂದ ಕೇವಲ 9 ನಿಮಿಷದಲ್ಲೇ ಪ್ರಯಾಣಿಸಬಹುದಾಗಿದೆ. ಹೀಗಾಗಿ ಹಣ ಮತ್ತು ಪ್ರಯಾಣದ ಅವಧಿ ಎರಡೂ ಉಳಿತಾಯವಾಗಲಿದೆ. ಪ್ರತಿನಿತ್ಯ ಸುಮಾರು 27 ಲಕ್ಷ ಮೌಲ್ಯದಷ್ಟು ಇಂಧನ ಉಳಿತಾಯವಾಗಲಿದೆ.
ವರ್ಷದ ಸರಾಸರಿ 40 ದಿನ ಈ ಹೆದ್ದಾರಿ ಬಂದ್ ಆಗಿರುತ್ತಿತ್ತು. ಇನ್ನು ಮುಂದೆ ಆ ಸಮಸ್ಯೆ ಇಲ್ಲ. ಚಳಿಗಾಲವಾಗಲೀ, ಮಳೆಗಾಲವಾಗಲೀ ಯಾವಾಗ ಬೇಕಾದ್ರೂ ಈ ಸುರಂಗ ಮಾರ್ಗದಲ್ಲಿ ಸಂಚರಿಸಬಹುದು.
ಚೆನಾನಿ-ನಶ್ರಿ ಸುರಂಗ ಮಾರ್ಗ
ಚೆನಾನಿ-ನಶ್ರಿ ಸುರಂಗ ಮಾರ್ಗದ ನಿರ್ಮಾಣದಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಮತ್ತೊಂದು ಆಕರ್ಷಣೆ ಸೇರ್ಪಡೆಯಾಗಿದೆ. ಜಮ್ಮು ಮತ್ತು ಶ್ರೀನಗರ ನಡುವಿನ 286 ಕಿಲೋಮೀಟರ್ ಉದ್ದದ 'ರಾಷ್ಟ್ರೀಯ ಹೆದ್ದಾರಿ 1ಎ'ನಲ್ಲಿ ಈ ಸುರಂಗ ಮಾರ್ಗವಿದೆ. ಇದು ಪಟ್ನಿಟಾಪ್ ಪರ್ವತದ ಅಕ್ಕಪಕ್ಕದ ಚೆನಾನಿ ಮತ್ತು ನಶ್ರಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
|
ದ್ವಿಪಥ ಸುರಂಗ ಮಾರ್ಗ
ಈ ಮಾರ್ಗದಲ್ಲಿ ಒಟ್ಟು ಎರಡು ಸುರಂಗ ರಸ್ತೆಗಳಿವೆ. ಒಂದು ದೊಡ್ಡದು ಮತ್ತೊಂದು ಸಣ್ಣದು. ದೊಡ್ಡ ಸುರಂಗ ಮಾರ್ಗ ದ್ವಿಪಥ ಹೊಂದಿದ್ದು 13 ಮೀಟರ್ ಅಗಲವಿದೆ. ಇದು ದಕ್ಷಿಣ ಏಷ್ಯಾದ ಮೊದಲ ದ್ವಿಪಥ ಸುರಂಗ ಮಾರ್ಗವಾಗಿದೆ. ತುರ್ತು ಸಂದರ್ಭದಲ್ಲಿ, ಸುರಂಗ ಕುಸಿತದಂತ ಅಘಡಗಳಾದಾಗ ತಪ್ಪಿಸಿಕೊಂಡು ಹೋಗಲು ಪ್ರತ್ಯೇಕವಾಗಿ ಸಣ್ಣ ಸುರಂಗವನ್ನು ಕೊರೆಯಲಾಗಿದೆ. ಇದು ಆರು ಮೀಟರ್ ಅಗಲವಿದೆ. ಮುಖ್ಯ ಸುರಂಗಕ್ಕೆ ಸಮನಾಂತರವಾಗಿ ಇದನ್ನು ನಿರ್ಮಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಗೆ ಒತ್ತು
ಎರಡೂ ಸುರಂಗಗಳ ಮಧ್ಯೆ ಪ್ರತಿ 300 ಮೀಟರ್ಗೊಂದು ಕಾಲು ದಾರಿಯಿದೆ. ತುರ್ತು ಅಪಾಯಗಳಾದರೆ ಜನ ಪಕ್ಕದ ಸುರಂಗಕ್ಕೆ ನುಗ್ಗಿ ತಪ್ಪಿಸಿಕೊಳ್ಬಹುದು. ಇನ್ನು ವಾಹನಗಳಿಗಾಗಿ ಪ್ರತಿ ಒಂದು ಕಾಲು ಕಿಲೋಮೀಟರ್ಗೊಂದರಂತೆ ಸಂಪರ್ಕ ರಸ್ತೆಗಳಿವೆ. ಹೀಗೆ 9 ಕಿಲೋಮೀಟರ್ ಉದ್ದದ ಎರಡು ಟ್ಯೂಬ್ ಗಳಲ್ಲಿ 29 ಕ್ರಾಸ್ ಪ್ಯಾಸೇಜ್ ಗಳಿವೆ.
3720 ಕೋಟಿ ವೆಚ್ಚ
ಸುರಂಗ ನಿರ್ಮಾಣಕ್ಕೆ ಮಾಡಿರೋ ವೆಚ್ಚ ಅಷ್ಟಿಷ್ಟಲ್ಲ. ಬರೋಬ್ಬರಿ 3720 ಕೋಟಿ ಖರ್ಚು ಮಾಡಲಾಗಿದೆ. ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 12 ಬ್ಯಾಂಕ್ಗಳು ಇದಕ್ಕೆ ಹಣ ಹೂಡಿವೆ.. ಇದ್ರ ನಿರ್ಮಾಣದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಪಯಣ ಸುಗಮವಾಗಲಿದೆ..
6 ವರ್ಷಗಳ ಪರಿಶ್ರಮ
ಈ ಸುರಂಗ ನಿರ್ಮಾಣವನ್ನು 2011ರ ಮೇ 23 ರಂದು ಆರಂಭಿಸಲಾಗಿತ್ತು. 5 ವರ್ಷದಲ್ಲಿ ಇದ್ರ ನಿರ್ಮಾಣ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ 2 ವರ್ಷ ತಡವಾಗಿ 2017ರಲ್ಲಿ ಉದ್ಘಾಟನೆಯಾಗಿದೆ. ಇದರ ನಿರ್ಮಾಣಕ್ಕಾಗಿ 2 ಸಾವಿರ ಕಾರ್ಮಿಕರು ಹಗಲಿರುಳು ಕೆಲಸ ಮಾಡಿದ್ದಾರೆ.
ಆಸ್ಟ್ರೇಲಿಯನ್ ತಂತ್ರಜ್ಞಾನ
ವಾ: ಇಲ್ಲಿ ನಿರ್ಮಾಣಕ್ಕೆ ಆಸ್ಟ್ರೇಲಿಯನ್ ತಂತ್ರಜ್ಞಾನ ಬಳಸಲಾಗಿದೆ. ಇದರಲ್ಲಿ ಸುರಂಗವನ್ನು ವಿಶೇಷ ಯಂತ್ರದ ಮೂಲಕ ಕೊರೆಯಲಾಗಿದೆ. ನಂತರ ಕೊರೆಯಲಾದ ಪ್ರದೇಶದಲ್ಲಿ ಕಾಂಕ್ರೀಟ್ ಹಾಕಿ ಗಟ್ಟಿ ಮಾಡಲಾಗಿದೆ. ಸುರಂಗದ ಮಧ್ಯೆ ಬೃಹತ್ ಹಿಮಾಲಯದ ಶಿಲೆಗಳೆಲ್ಲಾ ಎದುರಾಗಿದವು. ಇದನ್ನೆಲ್ಲಾ ಯಂತ್ರಗಳನ್ನು ಬಳಸಿ ಕತ್ತರಿಸಿ ಸುರಂಗ ಕೊರೆಯಲಾಗಿದೆ. ಅತ್ಯಾಧುನಿಕ ಸುರಂಗ ಕೊರೆಯುವ ಯಂತ್ರ, ಸ್ಪೋಟಕಗಳನ್ನು ಬಳಸಿಯೂ ಕೆಲೆವೆಡೆ ದಾರಿ ಮಾಡಿದ್ದಾರೆ.
ಅತ್ಯಾಧುನಿಕ ಸೌಕರ್ಯ
ಸುರಂಗದಲ್ಲಿ ಅತ್ಯಾಧುನಿಕ ಸೌಕರ್ಯಗಳೂ ಪ್ರವಾಸಿಗರಿಗೆ, ವಾಹನ ಸವಾರರಿಗಿವೆ. ದಾರಿ ಮಧ್ಯೆ ವಾಹನಗಳು ಕೆಟ್ಟರೆ, ಸಹಾಯಕ್ಕೆ ಕ್ರೇನ್ಗಳು 24 ಗಂಟೆಯೂ ಕಾದಿರುತ್ತವೆ. ಪ್ರಯಾಣಿಕರಿಗೆ ತುರ್ತು ವೈದ್ಯಕೀಯ ಸೇವೆಗಳು ಬೇಕಿದ್ದರೆ ಅದಕ್ಕೂ ಪ್ರತ್ಯೇಕ ಕಂಪಾರ್ಟ್ಮೆಂಟ್ಗಳನ್ನ ನಿರ್ಮಿಸಲಾಗಿದೆ.. ಒಂದೊಮ್ಮೆ ಸುರಂಗದಲ್ಲಿ ಭೂಕುಸಿತ ಸಂಭವಿಸಿದರೂ ತಪ್ಪಿಸಿಕೊಳ್ಳಲು ಪ್ರತ್ಯೇಕ ರಸ್ತೆಗಳಿವೆ.
ಅತ್ಯಾಧುನಿಕ ಸುರಂಗ
ಸುರಂಗದೊಳಗೆ ವಾಹನದಿಂದ ಹೊರಬರುವ ಹೊಗೆಯನ್ನು ಹೊರಹಾಕಲು ಮತ್ತು ಹೊರಗಿನ ಶುದ್ಧವಾದ ಗಾಳಿ ಸುರಂಗದೊಳಕ್ಕೆ ಹೋಗಲು ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದೆ. 8 ಮೀಟರ್ ಗೆ ಒಂದರಂತೆ ಶುದ್ಧಗಾಳಿ ತರುವ ಕೇಂದ್ರಗಳಿವೆ. ಈ ಸುರಂಗಮಾರ್ಗ ಟ್ರಾನ್ಸ್ ವರ್ಸ್ ವೆಂಟಿಲೇಷನ್ ವ್ಯವಸ್ಥೆ ಅಳವಡಿಸಿರುವ ದೇಶದ ಪ್ರಥಮ ಮತ್ತು ವಿಶ್ವದ ಆರನೇ ಸುರಂಗ ಮಾರ್ಗವಾಗಿದೆ.
ಸುಲಭ ಸಂಪರ್ಕ
ಇನ್ನು ಪ್ರಯಾಣಿಕರ ಸುರಕ್ಷತೆಗೂ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸುರಂಗಮಾರ್ಗದಲ್ಲಿ ಒಟ್ಟು 124 ಸಿಸಿಟಿವಿ ಕ್ಯಾಮೆರಾಗಳನ್ನು ಮತ್ತು ಉಷ್ಣ ಪತ್ತೆ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಪ್ರತಿ 150 ಮೀಟರ್ ಗೆ ಒಂದರಂತೆ ಎಸ್ಒಎಸ್ ಬಾಕ್ಸ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಸಮಸ್ಯೆಗೆ ಸಿಲುಕಿಕೊಂಡರೆ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ. ಇದರಲ್ಲೇ ಪ್ರಥಮ ಚಿಕಿತ್ಸೆಯ ಸಾಧನಗಳನ್ನೂ ಇರಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರಲಿದೆ.
ಫುಲ್ ರೇಂಜ್
ಪ್ರಯಾಣಿಕರ ಅನುಕೂಲಕ್ಕಾಗಿ ಸುರಂಗ ಮಾರ್ಗದಲ್ಲಿ ಬಿಎಸ್ಎನ್ಎಲ್, ಏರ್ ಟೆಲ್, ಐಡಿಯಾ ನೆಟ್ ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ. ಸುರಂಗ ಮಾರ್ಗದಲ್ಲಿ ಗಂಟೆಗೆ 50 ಕಿಮೀ ವೇಗದ ಮಿತಿ ನಿಗದಿ ಪಡಿಸಲಾಗಿದ್ದು, 5 ಮೀಟರ್ ಗಿಂತ ಹೆಚ್ಚಿನ ಎತ್ತರದ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.