ನರೇಂದ್ರ ಮೋದಿಯವರಿಗಿದೆ ಪ್ರಧಾನಿ ಪಟ್ಟದ ಅಹಂಕಾರ: ಅಣ್ಣಾ ಹಜಾರೆ
ಸಂಗ್ಲಿ(ಮಹಾರಾಷ್ಟ್ರ), ಜನವರಿ 22: ತಮ್ಮ ಭ್ರಷ್ಟಾಚಾರ ವಿರೋಧಿ ಚಳವಳಿಯ ಮೂಲಕ ರಾಜಕೀಯ ಪ್ರವೇಶಿದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಒಂದು ವಾರದ ಹಿಂದೆ ತರಾಟೆಗೆ ತೆಗೆದುಕೊಂಡಿದ್ದ ಅಣ್ಣಾ ಹಜಾರೆ, ಇದೀಗ ಪ್ರಧಾನಿ ಮೋದಿಯವರತ್ತ ತಮ್ಮ ವಾಗ್ಬಾಣ ಬಿಟ್ಟಿದ್ದಾರೆ!
ಮಹಾರಾಷ್ಟ್ರದ ಸಂಗ್ಲಿ ಎಂಬಲ್ಲಿ ಜ.21 ರಂದು ಮಾತನಾಡುತ್ತಿದ್ದ ಅವರು, 'ಪ್ರಧಾನಿ ಮೋದಿಯವರಿಗೆ ಇದುವರೆಗೆ ಸುಮಾರು 30 ಪತ್ರ್ ಬರೆದಿದ್ದೇನೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರಿಗೆ ಪ್ರಧಾನಿ ಪಟ್ಟದಿಂದಾಗಿ ಅಹಂಕಾರ ಬಂದಿದೆ' ಎಂದರು.
ರೈತರ ಸಮಸ್ಯೆ ಕುರಿತು ದೆಹಲಿಯಲ್ಲಿ ಆಂದೋಲನ: ಅಣ್ಣಾ ಹಜಾರೆ
ಅವರಿಗೆ 30 ಬಾರಿ ಪತ್ರ ಬರೆದರೂ ಉತ್ತರಿಸುವ ಸೌಜನ್ಯ ತೋರಿಲ್ಲ. ಮೂರು ವರ್ಷಗಳಿಂದ ಸತತವಾಗಿ ಪತ್ರ ಬರೆಯುತ್ತಿದ್ದರೂ ಪ್ರತಿಕ್ರಿಯೆ ನೀಡದಿರುವುದು ಅಹಂಕಾರವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಮನೆಮಾತಾದ ಗಾಂಧಿವಾದಿ ಅಣ್ಣಾ ಹಜಾರೆಯವರು ರೈತರ ಜೀವನಮಟ್ಟ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇದೇ ಮಾರ್ಚ್ 23 ರಿಂದ ಶಾಂತಿಯುತ ಹೋರಾಟ ನಡೆಸಲಿದ್ದಾರೆ. ಈ ಹೋರಾಟದ ಕುರಿತು ಹೆಚ್ಚಿನ ಮಾಹಿತಿ ನೀಡದ ಅವರು, ನನ್ನೊಂದಿಗೆ ಕೈಜೋಡಿಸುವವರು ಮುಂದೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಅಫಿಡವಿಟ್ ಗೆ ಸಹಿ ಮಾಡಬೇಕು ಎಂಬ ಶರತ್ತು ವಿಧಿಸಿದ್ದಾರೆ.
ರೈತರಿಗೆ ಪಿಂಚಣಿ ಯೋಜನೆ ಆರಂಭಿಸುವಂತೆ ಅಣ್ಣಾ ಹಜಾರೆ ಒತ್ತಾಯ
ತಮ್ಮ ಹೋರಾಟ, ಲೋಕ್ ಪಾಲ್ ಮಸೂದೆ ಜಾರಿ, ಲೋಕಾಯುಕ್ತರ ನೇಮಕ ಮತ್ತು ರೈತರಿಗೆ 5,000 ರೂ. ಪೆನ್ಷನ್ ಗಳ ಬೇಡಿಕೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಬಾರಿ ಚಳವಳಿ ನಡೆಸುವಾಗ ನಾನು ಅಷ್ಟೆಲ್ಲ ಎಚ್ಚರಿಕೆಯಿಂದಿರಲಿಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ. ನನ್ನ ಜೊತೆ ಕೈಜೋಡಿಸುವವರು ಖಂಡಿತವಾಗಿಯೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದಿದ್ದಾರೆ.