ನರೇಂದ್ರ ಮೋದಿ ಹೇಳಿದ ಈರುಳ್ಳಿ ಕಥೆ!
ಬೆಮೇತರಾ (ಛತ್ತೀಸ್ ಗಢ), ನ. 14 : "ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವರಾಜ ರಾಹುಲ್ ಹಾಗೂ ಪ್ರಧಾನಿ ವಾಸಿಸುವ ದೆಹಲಿಯಲ್ಲೇ 24 ಗಂಟೆ ವಿದ್ಯುತ್ ಪೂರೈಕೆಯಾಗುವುದಿಲ್ಲ. ಆದರೆ ಗುಜರಾತ್ ನಲ್ಲಿ 24 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇದು ಕಾಂಗ್ರೆಸ್ ಆಡಳಿತಕ್ಕೆ ಸಾಕ್ಷಿ" ನಿಮಗೆ ಯಾವ ಸರ್ಕಾರ ಬೇಕೆಂದು ಆಲೋಚಿಸಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಛತ್ತೀಸ್ ಗಢ ಜನರಿಗೆ ಕರೆ ನೀಡಿದ್ದಾರೆ.
ಛತ್ತಿಸ್ ಗಢ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗಿದೆ, ಮೊದಲ ಹಂತದ ಮತದಾನ ಮುಗಿದಿದ್ದು, ನ.19 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಗುರುವಾರ ನರೇಂದ್ರ ಮೋದಿ ಎರಡನೇ ಹಂತದ ಮತದಾನದಕ್ಕಾಗಿ ಪ್ರಚಾರ ನಡೆಸಿದರು. ಒಂದೇ ದಿನ ಐದು ಸಮಾವೇಶಗಳಲ್ಲಿ ಮತ ಯಾಚಿಸಿದರು.
ಬೆಮೇತರಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ಕಾಂಗ್ರೆಸ್ ನಾಯಕರು ಬಡವರ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಜನರಿಗೆ ಕರೆ ನೀಡಿದರು.
ಕಾಂಗ್ರೆಸ್ ಬರೀ ಸುಳ್ಳು ಭರವಸೆಗಳನ್ನು ನೀಡುತ್ತ ದೇಶದ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ವಿದ್ಯುತ್ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಧಾನಿ ವಾಸಿಸುವ ದೆಹಲಿಯಲ್ಲೇ 24 ಗಂಟೆ ವಿದ್ಯುತ್ ಪೂರೈಕೆಯಾಗುವುದಿಲ್ಲ. ಆದರೆ ಗುಜರಾತ್ ನಲ್ಲಿ 24 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದರು. (ಮೋದಿ ಭಾಷಣದ ಮುಖ್ಯಾಂಶಗಳು)

ಮೋದಿ ಹೇಳಿದ ಈರುಳ್ಳಿ ಕಥೆ
ಗ್ರಾಮೀಣ ಪ್ರದೇಶದಲ್ಲಿ ಜೀವನ ಮಾಡಲು ಒಂದು ದಿನಕ್ಕೆ 27 ರೂಪಾಯಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ನೀವೇ ಹೇಳಿ 27 ರುಪಾಯಿಗೆ ಎಷ್ಟು ಈರುಳ್ಳಿ ಬರುತ್ತೆ?. 27 ರುಪಾಯಿಗೆ ಕೇವಲ 300 ಗ್ರಾಂ ಈರುಳ್ಳಿ ಬರುತ್ತೆ. ಹೀಗಾಗಿ ಮೇಡಮ್ ಸೋನಿಯಾ ಪ್ರಕಾರ, 300 ಗ್ರಾಂ ಈರುಳ್ಳು ಖರೀದಿಸುವವರೆಲ್ಲ ಶ್ರೀಮಂತರೆಂದೆ ಅರ್ಥ ಎಂದು ಮೋದಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಆಡಳಿತ ಬೇಕೆ
ಕಾಂಗ್ರೆಸ್ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತದೆ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ವಿದ್ಯುತ್ ಇಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವರಾಜ ರಾಹುಲ್ ಹಾಗೂ ಪ್ರಧಾನಿ ವಾಸಿಸುವ ದೆಹಲಿಯಲ್ಲೇ 24 ಗಂಟೆ ವಿದ್ಯುತ್ ಪೂರೈಕೆಯಾಗುವುದಿಲ್ಲ. ಆದರೆ ಗುಜರಾತ್ ನಲ್ಲಿ 24 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ನಿಮಗೆ ಯಾವ ಸರ್ಕಾರ ಬೇಕು?

ತಮ್ಮ ಮನೆಯಿಂದ ಹಣ ತಂದು ಕೊಟ್ಟಿಲ್ಲ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣ ನೀಡಿರುವ ಬಗ್ಗೆ ಲೆಕ್ಕ ಕೊಡುತ್ತಾರೆ. ಆದರೆ, ಅವರು ತಮ್ಮ ಮನೆಯಿಂದ ರಾಜ್ಯದ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಜನರಿಗೆ ಸೇರಬೇಕಾಗಿರುವ ಹಣ ನೀಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಜನರಿಗೆ ಭಿಕ್ಷೆ ನೀಡುತ್ತಿರುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಮೋದಿ ಕಿಡಿ ಕಾರಿದರು.

ಛತ್ತೀಸ್ ಗಢ ನಿರ್ಲಕ್ಷಿಸಿದೆ
ಕೇಂದ್ರದ ಕಾಂಗ್ರೆಸ್ ಸರ್ಕಾರ ಛತ್ತೀಸ್ ಗಢ ರಾಜ್ಯವನ್ನು ನಿರ್ಲಕ್ಷಿಸಿದೆ. ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯ ದೊರೆಯದಿದ್ದರೂ, ರಾಜ್ಯದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ಸಮೀಕ್ಷೆ ನಿಷೇಧಿಸಿದ್ದು ಏಕೆ?
2014ರ ಲೋಕಸಭೆ ಚುನಾವಣೆಯ ಬಳಿಕ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಸೋಲಿನ ಭೀತಿಯಿಂದ ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸಿದೆ ಎಂದು ಮೋದಿ ಆರೋಪಿಸಿದರು.

ಸಿಎಂ ಹೆಸರು ಘೋಷಿಸಿ
ಕಾಂಗ್ರೆಸ್ ಪಕ್ಷ ಛತ್ತೀಸ್ ಗಢದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸಲಿ. ಅಜಿತ್ ಜೋಗಿ ಹೆಸರನ್ನು ಏಕೆ ಘೋಷಿಸುತ್ತಿಲ್ಲ? ಎಂದು ಮೋದಿ ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭಯ ಆದ್ದರಿಂದಲೇ ಸಿಎಂ ಅಭ್ಯರ್ಥಿಯನ್ನು ಘೋಷಿಸುತ್ತಿಲ್ಲ.

ಸಿದ್ಧತೆ ಮಾಡಿಕೊಂಡು ಬನ್ನಿ
ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ ಸಾಕಷ್ಟು ತಯಾರಿ ನಡೆಸಿಕೊಳ್ಳಲಿ, ಕೇವಲ ಅಂಕಿ ಅಂಶಗಳನ್ನು ನೀಡಿ ಜನರನ್ನು ವಂಚಿಸುವ ಕೆಲಸ ಮಾಡಬೇಡಿ ಎಂದು ಮೋದಿ ಕಿವಿಮಾತು ಹೇಳಿದ್ದಾರೆ.












Click it and Unblock the Notifications