ಪನ್ಸಾರೆ, ದಾಭೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆಗಳು ಪರಸ್ಪರ ಸಂಬಂಧ ಹೊಂದಿವೆ: ಸುಪ್ರೀಂ ಕೋರ್ಟ್ಗೆ ದಾಭೋಲ್ಕರ್ ಪುತ್ರಿ ಹೇಳಿಕೆ
ನವದೆಹಲಿ, ಆಗಸ್ಟ್ 18: ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್, ಎಂಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ರ ಹತ್ಯೆಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ದಾಭೋಲ್ಕರ್ ಪುತ್ರಿ ಸುಪ್ರೀಂ ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾರೆ.
ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದ ಮೇಲ್ವಿಚಾರಣೆಯನ್ನು ಮುಂದುವರಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠವು ಪುನರಾರಂಭಿಸಿದೆ.

ನರೇಂದ್ರ ದಾಭೋಲ್ಕರ್ ಅವರ ಪುತ್ರಿ ಮುಕ್ತಾ ದಾಭೋಲ್ಕರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಆನಂದ್ ಗ್ರೋವರ್ ಅವರಿಗೆ ಕೆಲ ಹೆಚ್ಚುವರಿ ದಾಖಲೆಗಳನ್ನು ಒದಗಿಬೇಕೆಂದು ಪೀಠವು ಹೇಳಿದೆ. ಇದಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡಿದೆ. ಸಿಬಿಐ ಪರವಾಗಿ ಹಾಜರಾಗುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿಗೆ ಈ ದಾಖಲೆಗಳಿಂದ ಅನುಕೂಲವಾಗಬಹುದು ಎಂದು ಪೀಠವು ಹೇಳಿದೆ.
ಅರ್ಜಿದಾರರ ಪದ ವಾದಿಸಿದ ಹಿರಿಯ ವಕೀಲರು, 'ಮೊದಲನೆಯದಾಗಿ, ದೋಷಾರೋಪಣೆಯ ಆದೇಶವನ್ನು ಜಾರಿಗೊಳಿಸಿದಾಗ ಸಿಬಿಐ ತನಿಖೆ ಪೂರ್ಣಗೊಂಡಿರಲಿಲ್ಲ' ಎಂದು ತಿಳಿಸಿದರು.
ಎರಡನೆಯದಾಗಿ, ಗೋವಿಂದ್ ಪನ್ಸಾರೆ, ಡಾ. ನರೇಂದ್ರ ದಾಭೋಲ್ಕರ್, ಪ್ರೊಫೆಸರ್ ಎಂಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆಗಳು ಪರಸ್ಪರ ಸಂಬಂಧ ಹೊಂದಿವೆ ಎಂಬುದಕ್ಕೆ ನಿಖರವಾದ ಪುರಾವೆಗಳು ಸಹ ಇವೆ. ಇದೆಲ್ಲವನ್ನು ಬಾಂಬೆ ಹೈಕೋರ್ಟ್ಗೆ ಒದಗಿಸಲಾಗಿದೆ ಎಂದು ಗ್ರೋವರ್ ಹೇಳಿದರು.
ಸುದೀರ್ಘ ಅವಧಿಯ ವಿಚಾರಣೆಯ ಹೊರತಾಗಿಯೂ, ತಲೆಮರೆಸಿಕೊಂಡಿರುವ ಹಂತಕರನ್ನು ಇಲ್ಲಿಯ ವರೆಗೆ ಬಂಧಿಸಲಾಗಿಲ್ಲ ಎಂದು ವಕೀಲ ಗ್ರೋವರ್ ತಿಳಿಸಿದರು.
ಐವರು ಆರೋಪಿಗಳ ತನಿಖೆಯಲ್ಲಿ ಮೂವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ. ಉಳಿದ ಇಬ್ಬರಿಗೆ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ಪರ ವಕೀಲ ಉತ್ತರಿಸಿದ್ದಾರೆ. ಇನ್ನುಳಿದ ಐವರು ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಧುಲಿಯಾ ಅವರು, 'ನಿಮ್ಮ ಪ್ರಕಾರ, ವಿಚಾರಣೆ ಎದುರಿಸುತ್ತಿರುವ ಆರೋಪಿಗಳ ನಡುವೆ ಯಾವುದೇ ಸಂಬಂಧ ಇಲ್ಲವೇ? ಈ ನಾಲ್ಕು ಕೊಲೆಗಳಲ್ಲಿ ಯಾವುದೇ ಸಾಮಾನ್ಯ ಎಳೆ ಇಲ್ಲವೇ?' ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ನ್ಯಾಯ ಪೀಠವು ಇದನ್ನೇ ತಿಳಿದುಕೊಳ್ಳಲು ಬಯಸುತ್ತದೆ. ಈ ಕುರಿತು ಮುಂದಿನ ವಿಚಾರಣೆಯಲ್ಲಿ ಉತ್ತರ ನೀಡಬೇಕೆಂದು ನ್ಯಾಯಮೂರ್ತಿ ಕೌಲ್ ಹೇಳಿದರು. ಎರಡು ವಾರಗಳ ನಂತರ ಮತ್ತೆ ವಿಚಾರಣೆ ನಡೆಯಲಿದೆ.












Click it and Unblock the Notifications