ಈಗಲೂ ದೇಶದ ನಂಬರ್ 1 ಜನಪ್ರಿಯ ನಾಯಕ ನರೇಂದ್ರ ಮೋದಿ
ನವದೆಹಲಿ, ನವೆಂಬರ್ 16: ಭಾರತದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಇನ್ನೂ ನರೇಂದ್ರ ಮೋದಿಯೇ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಪ್ಯೂ ( Pew) ಸಂಸ್ಥೆ 2,464 ಜನರಿಂದ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಿದ್ದು ಇದರ ಪ್ರಕಾರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ.
21ನೇ ಶತಮಾನವನ್ನು ಭಾರತದ ಶತಮಾನವಾಗಿಸುವುದು ನಮ್ಮ ಕರ್ತವ್ಯ : ಮೋದಿ
ನರೇಂದ್ರ ಮೋದಿಯವರ ಪರಿಚಯ ಇದೆ ಎಂದು ಶೇಕಡಾ 88 ಜನರು ಹೇಳಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಂದ 30 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಹುಲ್ ಗಾಂಧಿ ಶೇಕಡಾ 58, ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಶೇ. 57 ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶೇ. 39ರಷ್ಟು ಜನರಿಂದ ಗುರುತಿಸಲ್ಪಟ್ಟಿದ್ದಾರೆ.
ಈ ವರ್ಷದ ಫೆಬ್ರವರಿ 21 ರಿಂದ ಮಾರ್ಚ್ 10ರ ಮಧ್ಯೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಹತ್ತರಲ್ಲಿ ಎಂಟು ಜನರು ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದೂ ಹೇಳಿದ್ದಾರೆ.
ಪ್ರಧಾನಿ ಬಗ್ಗೆ ನಂಬಿಕೆ
ವಯಸ್ಕರಲ್ಲಿ ದೇಶದ ಆರ್ಥಿಕತೆ ಅತ್ಯುತ್ತಮವಾಗಿದೆ ಎಂದು ಹೇಳಿದವರ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಮೂರು ಪಟ್ಟು (ಶೇ. 30) ಹೆಚ್ಚಾಗಿದೆ. ಜತೆಗೆ ದೇಶ ಸಾಗುತ್ತಿರುವ ಹಾದಿಯ ಬಗ್ಗೆ 10ರಲ್ಲಿ 7 ಜನರು ತೃಪ್ತರಾಗಿದ್ದಾರೆ.
ದಕ್ಷಿಣ ರಾಜ್ಯಗಳಾದ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಹಾಗೂ ಉತ್ತರದ ಮಹಾರಾಷ್ಟ್ರ, ಗುಜರಾತ್, ಛತ್ತೀಸಗಢದ 10ರಲ್ಲಿ 9 ಜನರು ಪ್ರಧಾನ ಮಂತ್ರಿಗಳ ಬಗ್ಗೆ ಒಳ್ಳೆಯ ಭಾವನೆ ಹೊಂದಿದ್ದಾರೆ ಎಂದು 'ಪ್ಯೂ' ಹೇಳಿದೆ.
ಕುಸಿದಿಲ್ಲ ಮೋದಿ ಜನಪ್ರಿಯತೆ
2015ರ ನಂತರ ಮೋದಿ ಜನಪ್ರಿಯತೆ ವಿಚಾರದಲ್ಲಿ ಉತ್ತರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಶ್ಚಿಮ ಮತ್ತು ದಕ್ಷಿಣದಲ್ಲಿ ಜನಪ್ರಿಯತೆ ತುಸು ಹೆಚ್ಚಾಗಿದೆ. ಪೂರ್ವದಲ್ಲಿ ಮಾತ್ರ ಸ್ವಲ್ಪ ಕುಸಿತವಾಗಿದೆ ಎಂದು ಸಮೀಕ್ಷೆ ಹೇಳಿದೆ.
ಆದರೆ ಅಮೆರಿಕಾದ ಬಗ್ಗೆ ಭಾರತೀಯರಿಗೆ ಇದ್ದ ನಂಬಿಕೆ ಕುಸಿದಿದೆ. 2015ರಲ್ಲಿ ಶೇಕಡಾ 70ರಷ್ಟು ಜನರು ಅಮೆರಿಕಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರು. ಸದ್ಯ ಕೇವಲ ಶೇಕಡಾ 49ರಷ್ಟು ಜನರು ಮಾತ್ರ ಈ ದೇಶದ ಬಗ್ಗೆ ಒಳ್ಳೆಯ ಭಾವನೆ ಇಟ್ಟುಕೊಂಮಡಿದ್ದಾರೆ.
ಡೊನಾಲ್ಡ್ ಟ್ರಂಪ್ ಬಗ್ಗೆ ನಂಬಿಕೆಯಿಲ್ಲ
ಡೊನಾಲ್ಡ್ ಟ್ರಂಪ್ ಬಗ್ಗೆ ತಮಗೆ ನಂಬಿಕೆ ಇದೆ ಎಂದು ಶೇಕಡಾ 40 ರಷ್ಟು ಜನರು ಮಾತ್ರ ಹೇಳಿದ್ದಾರೆ. ಜಾಗತಿಕ ವ್ಯವಹಾರದ ವಿಚಾರದಲ್ಲಿ ಅವರು ಸರಿಯಾದ ತೀರ್ಮಾನ ತೆಗೆದುಕೊಳ್ಳಬಲ್ಲರು ಎಂದು 10ರಲ್ಲಿ ನಾಲ್ಕು ಜನರು ಮಾತ್ರ ನಂಬಿದ್ದಾರೆ.
2015ರಲ್ಲಿ ಬರಾಕ್ ಒಬಾಮಾ ಬಗ್ಗೆ ಭಾರತೀಯರಿಗೆ ಇದ್ದ ನಂಬಿಕೆಗೆ ಹೋಲಿಸಿದರೆ ಟ್ರಂಪ್ ವಿಚಾರದಲ್ಲಿ ಶೇಕಡಾ 34ರಷ್ಟು ಭಾರತೀಯರು ನಂಬಿಕೆ ಕಳೆದುಕೊಂಡಿದ್ದಾರೆ. ಇನ್ನು ಚೀನಾ ಬಗೆಗಿನ ಉತ್ತಮ ಅಭಿಪ್ರಾಯವೂ 2015ರಲ್ಲಿದ್ದ ಶೇ. 41ರಿಂದ ಶೇ. 26ಕ್ಕೆ ಇಳಿಕೆಯಾಗಿದೆ.
ಕೋಮು ಸಾಮರಸ್ಯ ಚೆನ್ನಾಗಿದೆ
ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಕಚ್ಚಾಟ ನಡೆಯುತ್ತಿದ್ದರೂ ಕೆಲವರು ಮಾತ್ರ ಧಾರ್ಮಿಕ ಸಾಮರಸ್ಯ ಸಮಸ್ಯೆ ಎಂದು ಹೇಳಿದ್ದಾರೆ.
ಇನ್ನು ದೇಶದ ಅರ್ಧದಷ್ಟು ಜನರು ಮಾತ್ರ ನೋಟು ಬ್ಯಾನ್ ನಿಂದ ಹಣದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.