ಪಾಟ್ನಾದಲ್ಲಿ ಮಹಾದುರಂತ: ಕಾಲ್ತುಳಿತಕ್ಕೆ 32 ಸಾವು
ಪಾಟ್ನಾ, ಅ 3 (ಪಿಟಿಐ): ಪಾಟ್ನಾದ ಗಾಂಧಿ ಮೈದಾನದಲ್ಲಿ ವಿಜಯದಶಮಿ ಹಬ್ಬದ ಅಂಗವಾದ 'ದುಷ್ಟ ಸಂಹಾರ' ಕಾರ್ಯಕ್ರಮದ ಆಚರಣೆಯ ವೇಳೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಟ 32 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಪಾಟ್ನಾದ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಕಾರ್ಯಕ್ರಮದ ವೇಳೆ ವಿದ್ಯುತ್ ಕಂಬದ ತಂತಿ ಕೆಳಗೆ ಬೀಳುತ್ತಿದೆ ಎನ್ನುವ ಸುಳ್ಳು ವದಂತಿಯಿಂದ ದಿಕ್ಕಾಪಾಲಾಗಿ ಜನ ಓಡಲಾರಂಭಿಸಿದಾಗ ಈ ದುರಂತ ಸಂಭವಿಸಿದೆ.

ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಈ 'ದುಷ್ಟ ಸಂಹಾರ ರಾವಣ ಸಂಹಾರ' ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು ಐದು ಲಕ್ಷ ಜನ ಭಾಗವಹಿಸಿದ್ದರು. ವದಂತಿ ಹಬ್ಬಿದಾಕ್ಷಣ ಕಿರಿದಾದ ಗೇಟಿನಲ್ಲಿ ಜನರು ದಿಕ್ಕಾಪಾಲಾಗಿ ಓಡಲಾರಂಭಿಸಿದಾಗ, ಕಾಲ್ತುಳಿತ ಸಂಭವಿಸಿದೆ.
ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ರಾಷ್ಟ್ರೀಯ ವಿಪತ್ತು ಪಡೆ ರಕ್ಷಣಾ ಕಾರ್ಯ ನಡೆಸುತ್ತಿದೆ.
ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿರುವ ಬಿಹಾರ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ನಂತರ ಘಟನೆಗೆ ಸೂಕ್ತ ಕಾರಣ ತಿಳಿಯಲಿದೆ ಎಂದು ಎಡಿಜಿಪಿ ಗುಪ್ತೇಶ್ವರ್ ಪಾಂಡೆ ತಿಳಿಸಿದಾರೆ.
ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತ ಪಡಿಸಿರುವ ಪ್ರಧಾನಿ ಮೋದಿ, ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿಯವರಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ ಮತ್ತು ಘಟನೆಯಲ್ಲಿ ದುರಂತ ಸಾವನ್ನಪ್ಪಿದ ಕುಟುಂಬಗಳಿಗೆ ಎರಡು ಲಕ್ಷ ಪರಿಹಾರ ಹಣ ಘೋಷಿಸಿದ್ದಾರೆ.
ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಘಟನೆಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications