ಕರ್ನಾಟಕ, ಕೊಂಕಣ, ಗುಜರಾತ್, ಗೋವಾದಲ್ಲಿ ಮುಂಗಾರು ಜೋರು!
ನವದೆಹಲಿ, ಜುಲೈ 15: ಮುಂಗಾರು ಮಳೆ ಮಾರುತಗಳು ಕರ್ನಾಟಕದ ಕರಾವಳಿ, ಕೊಂಕಣ, ಗೋವಾ ಭಾಗವಲ್ಲದೆ ಇನ್ನಷ್ಟು ರಾಜ್ಯಗಳಿಗೆ ವಿಸ್ತರಿಸಿದೆ. ಗುಜರಾತ್, ಮಧ್ಯಪ್ರದೇಶ, ಒಡಿಶಾ, ಛತ್ತೀಸ್ ಗಢ, ಉತ್ತರ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
ಭಾರತದ ಮಧ್ಯಭಾಗದಲ್ಲೂ ಮುಂಗಾರು ತನ್ನ ನರ್ತನ ಮುಂದುವರೆಸಲಿದ್ದು, ಒಡಿಶಾ, ಛತ್ತೀಸ್ ಗಢವಲ್ಲದೆ, ಮಹಾರಾಷ್ಟ್ರಕ್ಕೆ ಜುಲೈ16ರಂದು ಭಾರಿ ಮಳೆ ತರಲಿದೆ.
ಕರ್ನಾಟಕದ ಉತ್ತರ ಒಳನಾಡು, ಕೇರಳ, ತೆಲಂಗಾಣ, ಗುಜರಾತ್ ಪ್ರದೇಶ ಹಾಗೂ ಮಧ್ಯ ಮಹಾರಾಷ್ಟ್ರ, ಛತ್ತೀಸ್ ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳ, ಸಿಕ್ಕಿಂನ ಹಿಮಾಲಯ ಪ್ರದೇಶದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರಿ ಮಳೆ ಸುರಿಯಲಿದೆ.
ಮಧ್ಯಪ್ರದೇಶ, ಕೇರಳ, ಉತ್ತರಪ್ರದೇಶದ ಪಶ್ಚಿಮಭಾಗ, ಉತ್ತರಾಖಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಲ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ, ರಾಜಸ್ಥಾನದ ಪೂರ್ವಭಾಗ, ತಮಿಳುನಾಡು, ಮರಾಠವಾಡ, ವಿದರ್ಭ ಹಾಗೂ ಸೌರಾಷ್ಟ್ರಗಳಲ್ಲಿ ಭಾರಿ ಮಳೆ ಸುರಿಯುವ ಸೂಚನೆ ನೀಡಲಾಗಿದೆ.