‘Modi, Modi vs INDIA, INDIA’: ಸಂಸತ್ತಿನಲ್ಲಿ ಘೋಷಣೆಗಳ ಆರ್ಭಟ- ಬಿಜೆಪಿಗೆ ಶುರುವಾದ ಪೀಕಲಾಟ
ನವದೆಹಲಿ, ಜುಲೈ 27: ಮಣಿಪುರ ಹಿಂಸಾಚಾರದ ವಿಚಾರವಾಗಿ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮೋದಿ ಹೇಳಿಕೆಗೆ ಪಟ್ಟು ಹಿಡಿದಿವೆ. ಇದು ಆಡಳಿತಾರೂಢ ಬಿಜೆಪಿ ನಾಯಕರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಅವರು 'ಮೋದಿ, ಮೋದಿ' ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ 'ಇಂಡಿಯಾ, ಇಂಡಿಯಾ' ಎಂಬ ಘೋಷಣೆಯನ್ನು ವಿರೋಧ ಪಕ್ಷಗಳ ಸದಸ್ಯರು ಮೊಳಗಿಸಿದ್ದಾರೆ.
ಬಿಜೆಪಿ ನಾಯಕರು ಮೋದಿ, ಮೋದಿ ಎಂದು ಕೂಗುವ ಸಮಯದಲ್ಲಿ, ವಿಪಕ್ಷಗಳ ಮುಖಂಡರು ಇಂಡಿಯಾ, ಇಂಡಿಯಾ ಎಂಬ ಪ್ರತಿ ಘೋಷಣೆಗಳನ್ನು ಕೂಗಿದ್ದಾರೆ. ಇದು ಬಿಜೆಪಿ ಹೊಸ ಪೀಕಲಾಟವನ್ನು ತಂದೊಡ್ಡಿದೆ.

ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ, ರಾಜ್ಯಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು. ಈ ವೇಳೆ ಪ್ರತಿಪಕ್ಷಗಳು 'ಇಂಡಿಯಾ, ಇಂಡಿಯಾ' ಎಂದು ಘೋಷಣೆ ಕೂಗಿದರು. ಪ್ರಧಾನಿ ಮೋದಿ ವಿರೋಧಿ ಘೋಷಣೆಗಳನ್ನು ಮೊಳಗಿಸಿದೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷವು 'ಮೋದಿ, ಮೋದಿ' ಎಂದು ಪ್ರತಿಕ್ರಿಯಿಸಿತು. ಆದರೆ, ಬಿಜೆಪಿ ನಾಯಕರು ಸ್ಪಲ್ಪ ಹೊತ್ತು ಪೇಚಿಗೆ ಸಿಲುಕಿದ್ದು ಕಂಡುಬಂದಿದೆ.
ಈ ಘಟನೆ ಬಳಿಕ ಸದನದ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಪ್ರತಿಪಕ್ಷಗಳ ನಾಯಕರು ನಮ್ಮ ಮಾತುಗಳನ್ನು ಕೇಳಲು ಸಿದ್ಧರಿಲ್ಲ ಎಂದು ಆರೋಪಿಸಿದರು.
'ಕಳೆದ ತಿಂಗಳಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ನಾನು ಸದನಕ್ಕೆ ತಿಳಿಸಲು ಬಯಸುತ್ತೇನೆ. ಪ್ರಧಾನ ಮಂತ್ರಿಯವರ ಅಮೆರಿಕ ಭೇಟಿಯನ್ನು ನೀವು ನೋಡಿದ್ದೀರಿ. ಪ್ರತಿಪಕ್ಷಗಳು ಈ ಕುರಿತಾದ ನನ್ನ ಮಾತುಗಳನ್ನು ಕೇಳಲು ಸಿದ್ಧರಿಲ್ಲ ಎಂದು ನನಗೆ ಬೇಸರವಾಯಿತು. ಅವರು ದೇಶದ ಯಾವುದೇ ಸಾಧನೆಯನ್ನು ಟೀಕಿಸಲು ಬಯಸುತ್ತಿದ್ದಾರೆ ಎಂಬುದಾಗಿ ನನಗೆ ತೋರುತ್ತದೆ' ಎಂದು ಜೈಶಂಕರ್ ಅವರು ಟೀಕಿಸಿದರು.

'ವಿದೇಶಿ ನೀತಿಯು ನಾವು ಸಾಮಾನ್ಯವಾಗಿ ಒಟ್ಟಿಗೆ ಕೆಲಸ ಮಾಡುವ ಕ್ಷೇತ್ರವಾಗಿದೆ. ನಾವು ದೇಶದೊಳಗೆ ಚರ್ಚೆ ಮಾಡಬಹುದು. ಆದರೆ ದೇಶದ ಹೊರಗೆ, ನಾವು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇಂದಿನ ಪ್ರತಿಪಕ್ಷಗಳ ನಡವಳಿಕೆಯನ್ನು ಗಮನಿಸಿದರೆ ಬೇಸರವಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ, ರಾಜಕೀಯವನ್ನು ಬದಿಗಿಟ್ಟು ನಾವು ಕೆಲಸ ಮಾಡಬೇಕು' ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟಕ್ಕೆ 'I.N.D.I.A' ಎಂದು ಹೆಸರಿಡಲಾಗಿದೆ. ಇದು ಒಟ್ಟು ಇಪ್ಪತ್ತಾರು ಪಕ್ಷಗಳ ಮೈತ್ರಿಕೂಟವಾಗಿದೆ.
ಈ ಮೈತ್ರಿ ಕೂಟದಲ್ಲಿ ಕಾಂಗ್ರೆಸ್, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಆಮ್ ಆದ್ಮಿ ಪಕ್ಷ (ಎಎಪಿ), ಜನತಾ ದಳ (ಯುನೈಟೆಡ್) ,ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಶಿವಸೇನೆ (ಯುಬಿಟಿ), ಸಮಾಜವಾದಿ ಪಕ್ಷ (ಎಸ್ಪಿ) ಸೇರಿದಂತೆ ಹಲವು ಪ್ರಮುಖ ಪಕ್ಷಗಳು ಸೇರಿವೆ.

ಪ್ರಧಾನಿ ಮೋದಿ ಅವರು ಮಣಿಪುರ ಹಿಂಸಾಚಾರದ ಚರ್ಚೆ ನಡೆಸಬೇಕೆಂದು ಈ ಪಕ್ಷಗಳ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದ್ದಾರೆ.
ಮಣಿಪುರದಲ್ಲಿ ಮೈತೇಯಿ ಹಾಗೂ ಕುಕಿ ಸಮದಾಯಗಳ ನಡುವೆ ವ್ಯಾಪಕ ಸಂಘರ್ಷ ಏರ್ಪಟ್ಟಿದೆ. ಮೇ 3 ರಂದು ಶುರುವಾದ ಜನಾಂಗೀಯ ಕಲಹದಲ್ಲಿ ಈಗಾಗಲೇ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಏಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ತಿಳಿದುಬಂದಿದೆ. ಇಬ್ಬರು ಮಹಿಳೆಯನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಎಸಗಿರುವ ವಿಡಿಯೊ ವೈರಲ್ ಆಗಿದೆ. ಇದಕ್ಕೆ ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications